ಬೆಂಗಳೂರು:ನಗರದಲ್ಲಿ ಎರಡನೇ ತರಗತಿ ಓದುತ್ತಿರುವ ಏಳು ವರ್ಷದ ಬಾಲಕಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಸರಿಪಡಿಸಿ ನಡೆಯುತ್ತಿರುವ ಅನಾಹುತಗಳನ್ನು ತಪ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.
ಎಲ್.ಧವನಿ ಎಂಬ ಬಾಲಕಿಯ 1.13 ನಿಮಿಷಗಳ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ ಪುಟ್ಟ ಬಾಲಕಿಯ ಸಾಮಾಜಿಕ ಕಳಕಳಿಗಾಗಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಬಾಲಕಿ ಮನವಿ 'ನನ್ನ ಪಾಕೆಟ್ ಮನಿಯನ್ನೂ ಕೊಡುವೆ ಸಿಎಂ ತಾತ'
"ಸಿಎಂ ತಾತ.. ನಮ್ಮ ಬೆಂಗಳೂರಲ್ಲಿ ರಸ್ತೆಗಳೆ ಸರಿಯಿಲ್ಲ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಅದರಿಂದ ಸುಮಾರು ಜನ ಸತ್ತೋಗ್ತಾ ಇದ್ದಾರೆ. ಅವ್ರು ಸತ್ರೆ ಅವರ ಕುಟುಂಬದವರು ಹೇಗೆ ಜೀವನ ಮಾಡ್ತಾರೆ ನೀವೆ ಹೇಳಿ ತಾತ. ನಾನು ಕೂಡ ಹೊರಗಡೆ ಹೋಗಿರುವ ನಮ್ಮ ಅಪ್ಪ ಎಷ್ಟೊತ್ತಿಗೆ ಬರ್ತಾರೋ ಅಂತಾ ಕಾಯ್ತಾ ಇರ್ತೀನಿ. ಆ ಗುಂಡಿಗಳನ್ನ ಬೇಗ ಮುಚ್ಚಿಸಿ ಅವರ ಜೀವಗಳನ್ನ ಉಳಿಸಿ ತಾತ. ನಂಗೆ ಚಾಕೋಲೇಟ್ ತಗೋ ಅಂತಾ ನಮ್ಮ ಅಪ್ಪ-ಅಮ್ಮ ಕೊಟ್ಟಿರೂ ಪಾಕೆಟ್ ಮನಿಯನ್ನು ಕೂಡ ಕೊಡುವೆ. ಪ್ಲೀಸ್ ತಾತ ಆ ಗುಂಡಿಗಳನ್ನು ಮುಚ್ಚಿಸಿ" ಎಂದು ಧವನಿ ಬೇಡಿಕೊಂಡಿದ್ದಾಳೆ.
ಗುಂಡಿಗಳಿಂದಾಗಿ ಅನೇಕ ಬಾರಿ ತಾನು ಬೈಕ್ನಿಂದ ಬಿದ್ದಿದ್ದರಿಂದ ಹಾಗೂ ಗುಂಡಿಗಳಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದನ್ನು ಗ್ರಂಥಾಲಯದಲ್ಲಿ ಪತ್ರಿಕೆಗಳಲ್ಲಿ ಓದಿ ತಿಳಿದ ಬಳಿಕ ಹೀಗೆ ಸಿಎಂಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾಳೆ. ಒಂದು ವೇಳೆ ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ತಾನೇ ಖುದ್ದಾಗಿ ಒಂದೊಂದೇ ಗುಂಡಿಗಳನ್ನು ಮುಚ್ಚುತ್ತಾ ಬರುವುದಾಗಿ ಪೋರಿ ಹೇಳಿದ್ದಾರೆ.
ಸಿಂದಗಿ-ಹಾನಗಲ್ ಉಪಚುನಾವಣೆಗಾಗಿ ಫುಲ್ ಬ್ಯುಸಿ ಆಗಿರುವ ಬೊಮ್ಮಾಯಿ ಸರ್ಕಾರ ಈ ವಿಡಿಯೋಗೆ ಹೇಗೆ ಪ್ರತಿಕ್ರಿಯೆ ನೀಡುತ್ತೆ ಎಂಬುದನ್ನ ನೋಡಬೇಕಾಗಿದೆ.