ಬೆಂಗಳೂರು:ಪ್ರತಿ ವರ್ಷ ದೀಪಾವಳಿ ಹಬ್ಬ ಬಂದಾಗ ಪಟಾಕಿ ಅನಾಹುತ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿದರೆ ದುರ್ಘಟನೆಗಳನ್ನು ತಡೆಯಬಹುದು.
ಪಟಾಕಿ ಹೊಡೆಯುವಾಗಲೋ, ಹೊಡೆಯುವುದನ್ನು ನೋಡಲು ನಿಂತಿದ್ದಾಗಲೋ ಅಥವಾ ರಸ್ತೆ ಬದಿ ಓಡಾಡುವಾಗ ಪಟಾಕಿ ಸಿಡಿದು ಅಮೂಲ್ಯವಾದ ಕಣ್ಣುಗಳಿಗೆ ಹಾನಿಯಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ರಾಥೋಡ್, '6 ರಿಂದ 16 ವರ್ಷದ ಮಕ್ಕಳ ಕಣ್ಣುಗಳಿಗೆ ಅತಿ ಹೆಚ್ಚು ಹಾನಿಯಾಗಿದೆ. ನಿನ್ನೆ (ಶುಕ್ರವಾರ) ಒಂದೇ ದಿನ 11 ಪ್ರಕರಣಗಳು ದಾಖಲಾಗಿವೆ. ಅಕ್ಟೋಬರ್ 31ರಿಂದ ಇಲ್ಲಿವರೆಗೆ ಮಿಂಟೋ ಆಸ್ಪತ್ರೆಯಲ್ಲೇ 18 ಪ್ರಕರಣಗಳು ದಾಖಲಾಗಿವೆೆ. ಇದರಲ್ಲಿ ಪಟಾಕಿಯಿಂದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಕಣ್ಣುಗಳು ಉಳಿಯುವುದು ಕಷ್ಟ ಎನ್ನಲಾಗುತ್ತಿದೆ. ಉಳಿದಂತೆ ಇತರ ರೋಗಿಗಳು ದಿನಕಳೆದಂತೆ ಗುಣಮುಖರಾಗಲಿದ್ದಾರೆ' ಎಂದು ವಿವರಿಸಿದರು.
'ಬಿಜಲಿ, ಭೂಚಕ್ರ, ಫ್ಲವರ್ ಪಾಟ್ ಪಟಾಕಿ ಹೊಡೆಯಲು ಹೋಗಿ ಕಣ್ಣಿಗೆ ಹಾನಿಯಾಗಿದೆ. ಕೆಲವು ಮಕ್ಕಳು ಕಣ್ಣಿಗೆ ಪಟಾಕಿ ಸಿಡಿದಾಗ ಕಣ್ಣು ಉಜ್ಜಿಕೊಂಡಿರುವುದರಿಂದ ರೆಪ್ಪೆ ಹಾಗು ಕಣ್ಣಿನ ಸುತ್ತ ಹೆಚ್ಚಿನ ಗಾಯವಾಗಿದೆ. ದೀಪಾವಳಿ ಹಬ್ಬವನ್ನು ವಾರಗಳ ಕಾಲ ಆಚರಣೆ ಮಾಡುವುದರಿಂದ ಮಕ್ಕಳು, ಪೋಷಕರು ಜಾಗೃತರಾಗಿ ಇರಬೇಕು' ಎಂದು ಡಾ.ಸುಜಾತ ತಿಳಿಸಿದ್ದಾರೆ.
ನಗರದ ನಾರಾಯಣ ನೇತ್ರಾಲಯದಲ್ಲಿ ಇಲ್ಲಿಯವರೆಗೆ 9 ಪ್ರಕರಣಗಳು ದಾಖಲಾಗಿವೆ.