ಬೆಂಗಳೂರು:ಮಾಲೀಕರ ಮೊಮ್ಮಗಳ ವಿವಾಹ ಸಮಾರಂಭದ ಖರ್ಚಿಗಾಗಿ ಬ್ಯಾಂಕ್ನಿಂದ ಡ್ರಾ ಮಾಡಿದ್ದ 10 ಲಕ್ಷ ರೂ. ಹಣವನ್ನು ಕಾರಿನಲ್ಲಿಟ್ಟು ಟೀ ಕುಡಿಯಲು ಹೋದ ವೇಳೆ ಖದೀಮರು ಲಪಟಾಯಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಕೆಂಗೇರಿ ನಿವಾಸಿ ಶ್ರೀನಿವಾಸನ್ ಹಣ ಕಳೆದುಕೊಂಡವರು. ಚಂದ್ರಲೇಔಟ್ನಲ್ಲಿ ಜಯಪ್ರಕಾಶ್ ಶೆಟ್ಟಿ ಎಂಬುವವರಿಗೆ ಸೇರಿದ ಅಪಾರ್ಟ್ಮೆಂಟ್ನಲ್ಲಿ ಶ್ರೀನಿವಾಸ್ ಮ್ಯಾನೇಜರ್ ಆಗಿದ್ದರು. ಜಯಪ್ರಕಾಶ್ ಶೆಟ್ಟಿ ಮೊಮ್ಮಗಳ ವಿವಾಹ ಸಮಾರಂಭಕ್ಕೆ ಹಣದ ಅವಶ್ಯಕತೆಯಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಬರುವಂತೆ ಶ್ರೀನಿವಾಸನ್ಗೆ ಡಿಸೆಂಬರ್ 9 ರಂದು ಸೂಚಿಸಿದ್ದರು.
ಅದರಂತೆ, ಜಯಪ್ರಕಾಶ್ ಸ್ಕೋಡಾ ಕಾರಿನಲ್ಲಿ ಚಾಲಕನೊಂದಿಗೆ ಚಂದ್ರ ಲೇಔಟ್ನಲ್ಲಿರುವ ಎರಡು ಬ್ಯಾಂಕ್ಗಳಿಗೆ ಹೋಗಿ ಒಟ್ಟು 10 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಮನೆಗೆ ಹಿಂತಿರುಗುತ್ತಿದ್ದರು. ಮಾರ್ಗ ಮಧ್ಯೆ ಅತ್ತಿಗುಪ್ಪೆ ಬಳಿ ಕಾರಿನ ಟೈಯರ್ ಪಂಕ್ಚರ್ ಆಗಿತ್ತು. ಟಯರ್ ಬದಲಾಯಿಸಿಕೊಂಡು ಚಂದ್ರ ಲೇಔಟ್ 60 ಅಡಿ ರಸ್ತೆ, ಸ್ಪಿರಿಟ್ ಜಂಕ್ಷನ್ ಬಳಿ ಕಾರನ್ನು ರಸ್ತೆ ಬದಿ ನಿಲುಗಡೆ ಮಾಡಿ ಚಾಲಕನ ಜತೆಗೆ ಶ್ರೀನಿವಾಸ್ ಟೀ ಕುಡಿಯಲು ಹೋಗಿದ್ದರು. ಈ ವೇಳೆ ಕಾರಿನ ಮಂಭಾಗದ ಬಾಗಿಲಿನ ಗ್ಲಾಸ್ ಒಡೆದ ನಾಲ್ವರು ಖದೀಮರು 10 ಲಕ್ಷ ರೂ. ಹಣವಿದ್ದ ಬ್ಯಾಗ್ನೊಂದಿಗೆ ಪರಾರಿಯಾಗಿದ್ದಾರೆ.
ಇದನ್ನೂ ಓದಿರಿ:ಶೌಚಾಲಯ ಸ್ವಚ್ಛ ಗೊಳಿಸುವವರ ಸಮಸ್ಯೆ ನಿವಾರಣೆಗೆ ನಿರ್ಧಾಕ್ಷಿಣ್ಯ ಕ್ರಮ: ಕೋಟಾ ಶ್ರೀನಿವಾಸ್ ಪೂಜಾರಿ
ಶ್ರೀನಿವಾಸ್ ಟೀ ಕುಡಿದು ಮರಳಿ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಚಂದ್ರಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳೀಯ ಸಿಸಿ ಕ್ಯಾಮರಾ ಪರಿಶೀಲಿಸಿ ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.