ಬೀದರ್, ಬಳ್ಳಾರಿ, ಕಲಬುರಗಿ: ಮುಸ್ಲಿಂ ಧರ್ಮೀಯರ ಪವಿತ್ರ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ವಿವಿಧೆಡೆ ಮನೆ ಮಾಡಿದ ರಂಜಾನ್ ಸಂಭ್ರಮ ಬೀದರ್ನಲ್ಲಿ ಮುಸ್ಲಿಂ ಬಾಂಧವರು ಬೆಳಿಗ್ಗೆಯಿಂದಲೇ ನಗರದ ಕೇಂದ್ರ ಬಸ್ ನಿಲ್ದಾಣದ ಎದುರಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪವಿತ್ರವಾದ ರಂಜಾನ್ ಹಬ್ಬವನ್ನು ಆಚರಿಸಿದರು. ಈ ವೇಳೆ ಕ್ರೀಡಾ ಸಚಿವ ರಹೀಂ ಖಾನ್ ಹಾಗೂ ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಸೇರಿದಂತೆ ಜಿಲ್ಲಾ ಎಸ್ಪಿ ಟಿ.ಶ್ರೀಧರ್ ಭಾಗಿಯಾಗಿದ್ದರು. ನಿನ್ನೆ ಚಂದ್ರ ದರ್ಶನವಾದ ಹಿನ್ನಲೆ 30 ದಿನಗಳ ಕಾಲದ ಉಪವಾಸ ವ್ರತ ಪೂರ್ಣಗೊಂಡಿದ್ದು. ಇಂದು ಎಲ್ಲಾ ಮುಸ್ಲಿಂ ಬಾಂಧವರು ಪರಸ್ಪರರು ಶುಭ ಕೋರಿದರು.
ಬಳ್ಳಾರಿಯ ಈದ್ಗಾ ಮೈದಾನ ಹಾಗೂ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿಂದು ಸಾವಿರಾರು ಮಂದಿ ಮುಸ್ಲಿಂ ಧರ್ಮೀಯರು ಜಮಾಯಿಸಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಬಳಿಕ 'ಈದ್ ಉಲ್ ಫಿತ್ರ್’ ಹೇಳುವ ಮುಖೇನ ಪರಸ್ಪರ ಅಪ್ಪುಗೆ ಮಾಡಿಕೊಂಡರು. ಮುಸ್ಲಿಂ ಧರ್ಮಗುರು ಖಾಜಿ ಗುಲಾಂ ಮಹಮ್ಮದ್ ಸಿದ್ದಿಕಿ ಧರ್ಮ ಸಂದೇಶ ನೀಡಿ, ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಈ ವೇಳೆ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಮಾಜಿ ಶಾಸಕ ಅನಿಲ್ಲಾಡ್, ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್ ಮಹ್ಮದ್ ರಫೀಕ್, ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್, ಮುಖಂಡರಾದ ಹೊತೂರ್ ಮಹ್ಮದ್ ಇಕ್ಬಾಲ್, ಹನುಮ ಕಿಶೋರ್ ಸೇರಿದಂತೆ ಇತರರು ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ, ಸಮಸ್ತ ಮುಸ್ಲಿಂ ಧರ್ಮೀಯರಿಗೆ ಹಬ್ಬದ ಶುಭಾಶಯ ಕೋರಿದರು.
ಕಲಬುರಗಿಯಲ್ಲಿಯೂ ಕೂಡ ರಂಜಾನ್ ಆಚರಣೆ ಜೋರಾಗಿತ್ತು. ಜಮಾತೆ ಅಹಲೆ ಹದೀಶ್ ಮಸೀದಿ ಪ್ರಮುಖರು ಪಟ್ಟಣದ ಬಡ ಕುಟುಂಬಗಳಿಗೆ ಬೇಕಾಗುವ ದವಸ ಧಾನ್ಯಗಳನ್ನು ಉಚಿತವಾಗಿ ನೀಡಿದರು. ಅಷ್ಟೇ ಅಲ್ಲದೆ ನಗರದ ಪ್ರಮುಖ ವೃತ್ತಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.