ಬಳ್ಳಾರಿ:ಗಣಿಜಿಲ್ಲೆ ಬಳ್ಳಾರಿಗೂ ನಾಡೋಜ ಪಾಟೀಲ ಪುಟ್ಟಪ್ಪನವರಿಗೂ ಅವಿನಾಭಾವ ಸಂಬಂಧ. ಅವರು ತಮ್ಮ ಇಳಿ ವಯಸ್ಸಿನಲ್ಲೂ ಜಿಲ್ಲೆಗೆ ಆಗಮಿಸಿ ಒಂದೇ ದಿನದಲ್ಲೇ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸ್ನೇಹಿತರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಶ್ರೀಮಂತ ಸಂಸ್ಕೃತಿಯ ರಕ್ಷಕ 'ಪಾಪು' ಹಾಗೂ ಗಣಿನಾಡಿನ ನಂಟು - ಪಾಟೀಲ್ ಪುಟ್ಟಪ್ಪ ಸಾವು
ಶತಾಯುಷಿ, ಅಕ್ಷರ ಕೃಷಿಕ ನಾಡೋಜ ಪಾಟೀಲ ಪುಟ್ಟಪ್ಪ ಅವರ ನಿಧನದಿಂದ ಅಕ್ಷರ ನಾಡು ಬಡವಾಗಿದೆ, ಬಳ್ಳಾರಿ ಜಿಲ್ಲೆಯ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಪಾಪು ಅವರನ್ನು ಕಳೆದುಕೊಂಡಿರುವ ಗಣಿನಾಡ ಗೆಳೆಯರು, ಮತ್ತು ಅಭಿಮಾನಿಗಳು ಪುಟ್ಟಪ್ಪನವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಪಾಪು ಬಳ್ಳಾರಿಗೆ ಬಂದರೆ ಸಾಕು. ಕಸಾಪ ನಿಕಟ ಪೂರ್ವ ಅಧ್ಯಕ್ಷ ನಿಷ್ಠಿರುದ್ರಪ್ಪ ಮನೆಯಲಿ ಉಪಾಹಾರ ಸವಿಯದೇ ಇರುತ್ತಿರಲಿಲ್ಲ. ಲೋಹಿಯಾ ಪ್ರಕಾಶನದ ಚನ್ನ ಬಸವಣ್ಣನವರಂತೂ ಭೇಟಿಯಾಗದೇ ಹೋಗುತ್ತಿರಲಿಲ್ಲವಂತೆ. 20 ವರ್ಷಗಳ ಹಿಂದಷ್ಟೇ ನಗರದ ಅಲ್ಲಂ ಸುಮಂಗಳಮ್ಮ ಕಾಲೇಜು, ವೀರಶೈವ ಕಾಲೇಜು, ಸರಳಾದೇವಿ ಕಾಲೇಜು ಹಾಗೂ ಶೆಟ್ಟರ ಗುರುಶಾಂತಪ್ಪ ಪದವೀ ಪೂರ್ವ ಕಾಲೇಜಿನಲ್ಲಿ ಬಸವ ಬೆಳಕು ಕಾರ್ಯಕ್ರಮದಲಿ ಭಾಗಿಯಾಗಿದ್ದರು. ನಾಡಹಬ್ಬಕ್ಕೂ ಚಾಲನೆ ನೀಡಿದ್ದರು.
ಪಾಪು ಅಗಲಿಕೆಯಿಂದ ಗಣಿನಾಡು ಬಡವಾಗಿದೆ. ಅಪಾರ ಸ್ನೇಹಿತ ಬಳಗವನ್ನ ಅಗಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆಯಿಂದ ಅಕ್ಷರ ನಾಡು ಬಡವಾಗಿದೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ನಿಷ್ಠಿರುದ್ರಪ್ಪನವ್ರು ಕಂಬನಿ ಮಿಡಿದಿದ್ದಾರೆ.