ಬಳ್ಳಾರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಎಸ್ಯುಸಿಐ ಪಕ್ಷದ ಅಭ್ಯರ್ಥಿಯಾಗಿ ಎ.ದೇವದಾಸ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಕೆ.ಸೋಮಶೇಖರ ತಿಳಿಸಿದ್ದಾರೆ.
ಬಳ್ಳಾರಿಯ ಮಯೂರ ಹೊಟೇಲ್ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ118 ಮತ್ತು ರಾಜ್ಯದ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣ ಕ್ಕಿಳಿಯಲಿದ್ದಾರೆ. ದೇಶದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಗಾಗಿ ಪಕ್ಷ ಸ್ಪರ್ಧಿಸಲಿದೆ. ಕಳೆದ 5 ವರ್ಷಗಳಿಂದ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದ್ದಾರೆ.
ಎಸ್ಯುಸಿಐ ಪಕ್ಷದ ಅಭ್ಯರ್ಥಿ ಎ.ದೇವದಾಸ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ಪಕ್ಷದ ಪ್ರಣಾಳಿಕೆಯಲ್ಲಿನ ಯಾವೊಂದು ಅಂಶಗಳನ್ನು ಈಡೇರಿಸಿಲ್ಲ. ದೇಶದಲ್ಲಿಆರ್ಥಿಕ ವಿಫಲತೆ, ಅಗತ್ಯ ವಸ್ತುಗಳ ಬೆಲೆ ಎರಿಕೆ, ಇಂಧನ ದರ ಏರಿಕೆ ತಡೆಯಲಾಗಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಒಟ್ಟು ಹತ್ತು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಕೇವಲ ಕೆಲವೇ ಲಕ್ಷದಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಎಂದರು.
ಬಿಜೆಪಿಯ ಅಧಿಕಾರಾವಧಿಯಲ್ಲಿ ಕೇವಲ ಖಾಸಗಿ ವ್ಯಕ್ತಿಗಳು ಬೆಳೆದಿದ್ದಾರೆ. ಬಂಡವಾಳಶಾಹಿಗಳು ಸಂಪತ್ತನ್ನು ಕ್ರೋಢಿಕರಿಸಿಕೊಂಡಿದ್ದಾರೆ. ಅಂಬಾನಿ, ಅದಾನಿ ಈ ದೇಶವನ್ನು ಲೂಟಿ ಮಾಡಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ಪಿಹೆಚ್ಡಿ ಪದವಿಧರರು ಪಿವನ್ ಹುದ್ದೆಗೆ ಅರ್ಜಿ ಸಲ್ಲಿಸುವ ಸ್ಥಿತಿ ಎದುರಾಗಿದೆ. ಮೋದಿ ಆಡಳಿತದಲ್ಲಿ ರೈತರ, ಕಾರ್ಮಿಕರ ವಿರೋಧಿ ನೀತಿ ಅನುಸರಿಸಿ, ಅವರ ಏಳಿಗೆಯನ್ನು ನಿರ್ಲಕ್ಷಿಸಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ, ಕೋಮುಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ಎರಡೂ ಕೂಡ ಬಂಡವಾಳಶಾಹಿಗಳ ಏಜೆಂಟ್ ಆಗಿದ್ದಾರೆ. ಅವರ ವಿಶ್ವಾಸಗಳಿಸಲು ಆಡಳಿತ ನಡೆಸಿದ್ದಾರೆ. ಇವರಿಬ್ಬರೂ ನಮಗೆ ಪರ್ಯಾಯವಲ್ಲ ಹಾಗಾಗಿ ಎಸ್ಯುಸಿಐ ಸ್ಪರ್ಧೆಗಿಳಿದಿದೆ ಎಂದು ಹೇಳಿದರು.
ನಿಯೋಜಿತ ಅಭ್ಯರ್ಥಿ ಎ.ದೇವದಾಸ ಮಾತನಾಡಿ, ಸಂಸತ್ತಿನಲ್ಲಿ ಜಿಲ್ಲೆಯ ಪರ ಯಾರೂ ಮಾತನಾಡುತ್ತಿಲ್ಲ. ಜನರ ಪರವಾಗಿ ಧ್ವನಿ ಎತ್ತುವವರಿಲ್ಲದಂತಾಗಿದೆ. ಹಾಗಾಗಿ ನಾನು ಸ್ಪರ್ಧೆಗಿಳಿಯುತ್ತಿದ್ದು, ಮಾ.28ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಹೇಳಿದರು. ಈ ವೇಳೆ ಪಕ್ಷದ ರಾಧಾಕೃಷ್ಣ ಉಪಾಧ್ಯಾಯ, ಮಂಜುಳಾ, ಪ್ರಮೋದ, ಸೋಮಶೇಖರ ಗೌಡ, ಶಾಂತಾ, ಹನುಮಪ್ಪ, ಗೋವಿಂದ ಮುಂತಾದವರು ಇದ್ದರು.