ಕರ್ನಾಟಕ

karnataka

By

Published : Feb 11, 2022, 3:58 PM IST

ETV Bharat / city

ಬೆಳಗಾವಿಯಲ್ಲಿ ಮತ್ತೆ ಆ್ಯಕ್ಟಿವ್ ಆಯ್ತಾ ಇರಾನಿ ಗ್ಯಾಂಗ್?.. ನಿನ್ನೆ ಒಂದೇ ದಿನ ಮೂರು ಕಡೆ ಸರಗಳ್ಳತನ

ಬೆಳಗಾವಿ ನಗರದಲ್ಲಿ ಸರಣಿ ಸರಗಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಮತ್ತೆ ಇರಾನಿ ಗ್ಯಾಂಗ್ ಜಿಲ್ಲೆಯಲ್ಲಿ ಸಕ್ರಿಯವಾಗಿದೆಯಾ ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

serial-theft
ಇರಾನಿ ಗ್ಯಾಂಗ್

ಬೆಳಗಾವಿ:ನಿನ್ನೆ ಒಂದೇ ದಿನ ಮೂರು ಕಡೆ ಸರಗಳ್ಳತನ ನಡೆದ ಘಟನೆಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, ಇರಾನಿ ಗ್ಯಾಂಗ್​ ಮತ್ತೆ ಸಕ್ರಿಯವಾಗಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರ ಸೋಗಿನಲ್ಲಿ ಬಂದ ಕಳ್ಳರು ಮದುವೆಗೆ ಹೋಗುತ್ತಿದ್ದ ವೃದ್ಧ ದಂಪತಿ ತಡೆದು ಚಿನ್ನಾಭರಣ ದೋಚಿದರೆ, ಇನ್ನೊಂದೆಡೆ ಹಾಲು ತರಲು ಹೋಗಿದ್ದ ವೃದ್ಧೆಯ ಮತ್ತು ಮಹಿಳೆಯ ಕತ್ತಲಿದ್ದ ಸರವನ್ನು ಕದ್ದು ಪರಾರಿಯಾದ ಘಟನೆಗಳು ನಡೆದಿವೆ.

ಮದುವೆಗೆ ಹೊರಟಿದ್ದ ವೃದ್ಧರ ದರೋಡೆ:ಬೆಳಗಾವಿಯ ಗಣೇಶಪುರ ನಿವಾಸಿಗಳಾದ ಗಣಪತ್ ಪಾಟೀಲ್ ಎಂಬುವವರು ತಮ್ಮ ಪತ್ನಿ ಜೊತೆಗೂಡಿ ಸಂಬಂಧಿಕರ ಮದುವೆಗೆ ಹೊರಟಿದ್ದ ವೇಳೆ ಬೈಕ್​ನಲ್ಲಿ ಬಂದ ಕಳ್ಳರು ತಾವು ಪೊಲೀಸ್​ ಎಂದು ಹೇಳಿ ವೃದ್ಧರನ್ನು ತಡೆದಿದ್ದಾರೆ. ಈ ರಸ್ತೆಯಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಈ ಕಡೆ ಏಕೆ ಬಂದಿರಿ ಎಂದು ಪ್ರಶ್ನಿಸಿದ್ದಾರೆ.

ಆಗ ವೃದ್ಧ ದಂಪತಿ ಆಮಂತ್ರಣ ಪತ್ರ ತೋರಿಸಿ, ನಾವು ಮದುವೆಗೆ ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಅಲ್ಲಿಗೆ ಬಂದ ಇನ್ನೊಬ್ಬ ಈ ರಸ್ತೆಯಲ್ಲಿ ಕಳ್ಳತನ ಜಾಸ್ತಿಯಾಗಿದೆ. ಇಷ್ಟೊಂದು ಚಿನ್ನಾಭರಣ ಧರಿಸಿ ಹೋಗುತ್ತಿರುವುದೇಕೆ ಎಂದು ಕೇಳಿದ್ದಾನೆ.

ಜೊತೆಗೆ ಚಿನ್ನಾಭರಣ ಕರವಸ್ತ್ರದಲ್ಲಿ ಇಟ್ಟುಕೊಳ್ಳುವಂತೆ ಹೇಳಿದ್ದಾನೆ. ಸಾಲದೆಂಬಂತೆ ವೃದ್ಧ ಮಹಿಳೆಯ ಕೊರಳಿನಲ್ಲಿದ್ದ ಚಿನ್ನಾಭರಣಗಳನ್ನು ತಾನೇ ಕಳಚಿದ ಕಳ್ಳ ಕರವಸ್ತ್ರಕ್ಕೆ ಹಾಕುವಂತೆ ಹೇಳಿದ್ದಾನೆ. ಬಳಿಕ ಬೈಕಿನ ಡಿಕ್ಕಿಯಲ್ಲಿ ಕರವಸ್ತ್ರ ಇಟ್ಟಿರುವುದಾಗಿ ಹೇಳಿ ಯಾಮಾರಿಸಿ, ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ.

ಮದುವೆ ಮನೆಗೆ ಹೋದ ದಂಪತಿ ಚಿನ್ನಾಭರಣ ಪರಿಶೀಲನೆ ‌ನಡೆಸಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಬಳಿಕ ಕ್ಯಾಂಪ್ ಠಾಣೆಗೆ ಆಗಮಿಸಿದ ವೃದ್ಧ ದಂಪತಿ ಪೊಲೀಸರೆದುರು ಕಣ್ಣೀರು ಹಾಕಿದ್ದಾರೆ.ಈ ಬಗ್ಗೆ ಪ್ರಕರಣದ ದಾಖಲಿಸಿಕೊಳ್ಳಲಾಗಿದೆ.

ಹಾಲು ತರಲು ಹೋದಾಗ ಕಳ್ಳತನ:ಮತ್ತೊಂದೆಡೆ ಹಾಲು ತರಲು ಹೋಗಿದ್ದ ವೃದ್ಧೆಯ ಕತ್ತಿನಲ್ಲಿದ್ದ ಸರವನ್ನು ಕಳ್ಳರು ಎಗರಿಸಿದ ಘಟನೆ ಮಹಾಂತೇಶ ನಗರದ ಎಸ್‌ಬಿಐ ಬ್ಯಾಂಕ್ ಬಳಿ ನಡೆದಿದೆ. 20 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಇನ್ನೊಂದೆಡೆ ಕವಿತಾ ಡೊಳ್ಳಿ ಎಂಬ ಮಹಿಳೆಯ ಸರವನ್ನೂ ಖದೀಮರು ಎಗರಿಸಿದ್ದಾರೆ. ಮಹಿಳೆ ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಳಗಾವಿ ನಗರದಲ್ಲಿ ಸರಣಿ ಸರಗಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಮತ್ತೆ ಇರಾನಿ ಗ್ಯಾಂಗ್ ಜಿಲ್ಲೆಯಲ್ಲಿ ಸಕ್ರಿಯವಾಗಿದೆಯಾ ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಓದಿ:ಬಳ್ಳಾರಿ ವ್ಯಕ್ತಿಗೆ ಕೇರಳದ ಯುವಕನ ಕೈಗಳ ಜೋಡಣೆ; ಕಳೆದುಕೊಂಡ ಜಾಗದಲ್ಲಿ ಹೊಸ ಜೀವನ ಆರಂಭ

ABOUT THE AUTHOR

...view details