ಬೆಳಗಾವಿ: ರಾಷ್ಟ್ರಕವಿ ಕುವೆಂಪು ಅವರು ವಿಶ್ವ ಮಾನವ ಪ್ರಜ್ಞೆಯನ್ನು ಸಮಾಜಕ್ಕೆ ನೀಡಿದ್ದು, ಈ ಪರಿಕಲ್ಪನೆ ಹಿನ್ನೆಲೆ, ಪ್ರತಿಯೊಬ್ಬರೂ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಜಿಲ್ಲಾಡಳಿತದ ಆಶ್ರಯದಲ್ಲಿ ಬಸವರಾಜ ಕಟ್ಟೀಮನಿ ಸಭಾ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ನಿಮಿತ್ತ ಏರ್ಪಡಿಸಲಾಗಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೈಚಾರಿಕತೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಅವರ ಸಾಧನೆ ಅನನ್ಯವಾದುದು ಎಂದರು.
ಓದಿ: ಕುವೆಂಪು ಕಾವ್ಯಗಳು ಇಂಗ್ಲಿಷ್ಗೆ ಭಾಷಾಂತರವಾಗಿದ್ರೆ ನೊಬೆಲ್ ಪ್ರಶಸ್ತಿ ಲಭಿಸುತ್ತಿತ್ತು : ಸಾಹಿತಿ ಹೆಚ್ ಎಸ್ ಪಾಟೀಲ್
ಇದೇ ವೇಳೆ, ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕಿ ಡಾ. ಗುರುದೇವಿ ಹುಲ್ಲೆಪ್ಪನವರಮಠ, ಮನುಷ್ಯ ಹುಟ್ಟುತ್ತಾ ವಿಶ್ವ ಮಾನವನಾಗುತ್ತಾನೆ. ಮನುಷ್ಯ ಎಷ್ಟು ವರ್ಷ ಬದುಕುತ್ತಾನೆ ಎನ್ನುವುದು ಮುಖ್ಯವಲ್ಲ, ಅವರು ಮಾಡಿರುವ ಸಾಧನೆ ಏನು ಎಂಬುದು ಮುಖ್ಯ. ಮಹಾತ್ಮರ ಜೀವನಗಳು ಉತ್ತಮ, ಉದಾತ್ತ, ಆದರ್ಶಗಳಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.
ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಎಲ್ಲರ ಮನಸ್ಸಿನಲ್ಲಿ ಸದಾ ಅಚ್ಚಳಿಯದೇ ಉಳಿದ ಏಕೈಕ ಕೃತಿ, ಇದನ್ನು ಪ್ರತಿಯೊಬ್ಬರೂ ಓದಲೇಬೇಕು. ಜಾತಿ ಸಂಕೋಲೆಯಿಂದ ಜನರನ್ನು ಬಿಡಿಸಲು ತಮ್ಮ ಸಾಹಿತ್ಯದ ಮೂಲಕ ಜನರು ಗುಡಿ, ಚರ್ಚು, ಮಸೀದಿಗಳಿಂದ ಹೊರಬಂದು ವೈಚಾರಿಕ ಚಿಂತನೆ ಬೆಳೆಸಿಕೊಳ್ಳಲು ಜಾಗೃತಿ ಮೂಡಿಸಿದರು ಎಂದರು.
ಕುವೆಂಪು ಅವರು ಪ್ರಕೃತಿಯನ್ನು ಅನುಕರಿಸಿದಂತೆ ನಾವೆಲ್ಲರೂ ಅನುಕರಿಸಬೇಕು. ಶಾಂತಿಗಾಗಿ ಪ್ರಕೃತಿಯನ್ನು ಆರಾಧಿಸುವುದಲ್ಲ, ಪ್ರಕೃತಿಗಳನ್ನು ಹಾಳು ಮಾಡದೇ ಹಸಿರನ್ನು ಬೆಳೆಸಿ ಮಾನವೀಯ ಮೌಲ್ಯಗಳನ್ನು ಅನುಸರಿಸಬೇಕು ಎಂದು ಡಾ.ಗುರುದೇವಿ ಹೇಳಿದರು.