ಕರ್ನಾಟಕ

karnataka

ETV Bharat / city

ಭೂ ಅಕ್ರಮ ಆರೋಪ : ಸಚಿವ ಭೈರತಿ ಬಸವರಾಜ ವಜಾಗೆ ನಾರಾಯಣಸ್ವಾಮಿ ಆಗ್ರಹ - ಎಂ.ನಾರಾಯಣಸ್ವಾಮಿ ಸುದ್ದಿಗೋಷ್ಠಿ

ಭೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಚಿವ ಭೈರತಿ ಬಸವರಾಜ ಹಾಗೂ ಮಾಜಿ ಸಚಿವ ಆರ್. ಶಂಕರ್ ಮತ್ತು ಇತರ ಮೂರು ಮಂದಿಯನ್ನು ಆರೋಪಿಗಳು ಎಂದು ತೀರ್ಮಾನಿಸಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ..

M. Narayanaswamy press meet
ಎಂ.ನಾರಾಯಣಸ್ವಾಮಿ ಸುದ್ದಿಗೋಷ್ಠಿ

By

Published : Dec 15, 2021, 5:37 PM IST

ಬೆಳಗಾವಿ :ಭೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಸಚಿವ ಭೈರತಿ ಬಸವರಾಜ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡುವಂತೆ ವಿಧಾನ ಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಸಚಿವ ಭೈರತಿ ಬಸವರಾಜ್‌ ವಿರುದ್ಧ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಕಿಡಿಕಾರಿರುವುದು..

ಬೆಳಗಾವಿಯ ಸುವರ್ಣಸೌಧದಲ್ಲಿ ಪರಿಷತ್ ಕಾಂಗ್ರೆಸ್ ಸದಸ್ಯರಾದ ಬಿ ಕೆ‌ ಹರಿಪ್ರಸಾದ್, ಪಿ ಆರ್ ರಮೇಶ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಕೆಆರ್‌ಪುರಂ ವ್ಯಾಪ್ತಿಯಲ್ಲಿ ಅಣ್ಣಯ್ಯಪ್ಪ ಮತ್ತು ಇತರರಿಗೆ ಸೇರಿದ ಜಮೀನನ್ನು ನಕಲಿ ದಾಖಲೆ ಮಾಡಿ ಹಾಗೂ ನಕಲಿ ಮಾಲೀಕರನ್ನು ಸೃಷ್ಟಿಸಿ ಅವರಿಂದ ಕಚೇರಿಯಲ್ಲಿ ನೋಂದಾವಣೆ ಮಾಡಿಸಿರುವುದು ಮೇಲ್ನೋಟಕ್ಕೆ ಕಾನೂನು ಬಾಹಿರ ಎಂದು ತೀರ್ಮಾನಿಸಿ, ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಚಿವ ಭೈರತಿ ಬಸವರಾಜ ಹಾಗೂ ಮಾಜಿ ಸಚಿವ ಆರ್. ಶಂಕರ್ ಮತ್ತು ಇತರ ಮೂರು ಮಂದಿಯನ್ನು ಆರೋಪಿಗಳು ಎಂದು ತೀರ್ಮಾನಿಸಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

ಇಂಥದ್ದೊಂದು ಮಹತ್ವದ ತೀರ್ಪನ್ನು ಕೋರ್ಟ್ ನೀಡಿರುವ ಹಿನ್ನೆಲೆ ಸರ್ಕಾರ ಕೂಡಲೇ ಸಚಿವರನ್ನು ವಜಾಗೊಳಿಸಬೇಕು. ಸೂಕ್ತ ಕ್ರಮಕ್ಕೆ ಆಗ್ರಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್​ನಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇಂದು ವಿಧಾನ ಪರಿಷತ್​​ನಲ್ಲಿ ನಿಲುವಳಿ ಸೂಚನೆ ಮಂಡಿಸಲು ತೀರ್ಮಾನಿಸಿದಾಗ, ಅದಕ್ಕೆ ಅವಕಾಶ ಸಿಕ್ಕಿಲ್ಲ.

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪಕ್ಷದ ಶಾಸಕಾಂಗ ನಾಯಕರಾದ ಸಿದ್ದರಾಮಯ್ಯ ಅವರ ಬಳಿ ಈ ವಿಚಾರ ಪ್ರಸ್ತಾಪಿಸಿದ್ದೇನೆ. ಮೊದಲು ವಿಧಾನ ಪರಿಷತ್​​ನಲ್ಲಿ ಈ ವಿಚಾರವನ್ನು ಮಂಡಿಸಿ, ಒಂದೊಮ್ಮೆ ಅಲ್ಲಿ ಚರ್ಚೆಗೆ ಅವಕಾಶ ಸಿಗದಿದ್ದರೆ ವಿಧಾನಸಭೆಯಲ್ಲಿ ಇದನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಈ ವಿಚಾರವನ್ನು ಒಂದು ತಾರ್ಕಿಕ ಅಂತ್ಯಕ್ಕೆ ತರುವವರೆಗೂ ಸುಮ್ಮನಿರುವುದಿಲ್ಲ. ಪಕ್ಷದ ನಾಯಕರ ಜತೆ ಚರ್ಚಿಸಿ ಒಂದು ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದರು.

ಏನಿದು ಪ್ರಕರಣ?:ಪ್ರಕರಣ ಕುರಿತು ವಿವರಿಸಿದ ನಾರಾಯಣಸ್ವಾಮಿ ಅವರು, ಬೆಂಗಳೂರು ನಗರದ ಪೂರ್ವ ತಾಲೂಕು ಕೆಆರ್‌ಪುರಂ ಹೋಬಳಿಯ ಕಲ್ಕೆರೆ ಗ್ರಾಮದ ಹಲವಾರು ಸರ್ವೇ ನಂಬರ್​​ಗಳ ಜಮೀನುಗಳ ಮಾಲೀಕರಾದ ಅಣ್ಣಯ್ಯಪ್ಪ ಅವರ ಜಮೀನಿಗೆ ಬೇರೆ ಮಾಲೀಕರನ್ನ ತೋರಿಸಿ ಜಮೀನಿನ ಪತ್ರ ಸಿದ್ಧಪಡಿಸಿಕೊಳ್ಳಲಾಗಿದೆ. ತಮ್ಮ ಜಮೀನು ಕಳೆದುಕೊಂಡಿರುವ ಬಗ್ಗೆ ಮಾಹಿತಿ ತಿಳಿದ ಅಣ್ಣಯ್ಯಪ್ಪ ಕೋರ್ಟ್ ಮೊರೆ ಹೋಗಿದ್ದರು.

2003ರಿಂದ ಇತ್ತೀಚಿನವರೆಗೂ ಈ ಪ್ರಕರಣದ ವಿಚಾರಣೆ ನಡೆದಿದೆ. ಅಂತಿಮವಾಗಿ ನ್ಯಾಯಾಲಯದಲ್ಲಿ ಹೂಡಿದ ದಾವೆಗೆ ತೀರ್ಪು ಬಂದಿದೆ. ಐದು ಮಂದಿ ಆರೋಪಿಗಳು ಅದರಲ್ಲಿ ಈಗಿನ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮತ್ತು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿವೆ.

120 ಬಿ, 420, 427, 465,467 ಮತ್ತು 471 ಐಪಿಸಿ ಸೆಕ್ಷನ್ ಅನ್ವಯ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಒಮಿಕ್ರಾನ್​ ಸೋಂಕಿನಿಂದ ಗುಣಮುಖವಾಗಿ ಮನೆಗೆ ತೆರಳಿದ ವ್ಯಕ್ತಿ ನೀಡಿದರು ಕೆಲ ಉಪಯುಕ್ತ ಟಿಪ್ಸ್‌..

ABOUT THE AUTHOR

...view details