ಬೆಳಗಾವಿ: ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಒಡೆತನದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು 2,063 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಸಿಐಡಿ ಡಿವೈಎಸ್ಪಿ ಪುರುಷೋತ್ತಮ ನೇತೃತ್ವದ ತಂಡ ಪ್ರಕರಣ ಕುರಿತು ಸುದೀರ್ಘ ತನಿಖೆ ನಡೆಸಿದ್ದು, ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ 35 ಶಾಖೆ ಹೊಂದಿರುವ ಸಂಗೊಳ್ಳಿ ರಾಯಣ್ಣ ಸೊಸೈಟಿಯು, 26,000 ಜನರಿಂದ ಠೇವಣಿ ಸಂಗ್ರಹಿಸಿತ್ತು. ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳ ಸೇರಿ ಆಡಳಿತ ಮಂಡಳಿಯ 13 ನಿರ್ದೇಶಕರು ಗ್ರಾಹಕರಿಗೆ ಠೇವಣಿ ಮರಳಿಸದೇ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು ಎಂದು ಆರೋಪ ಮಾಡಲಾಗಿದೆ.
ಸರ್ಕಾರಿ ಅಭಿಯೋಜಕರಾದ ಮುರಳೀಧರ ಕುಲಕರ್ಣಿ ಅವರಿಂದ ಮಾಹಿತಿ ಈ ಕುರಿತು ಸಹಕಾರ ಇಲಾಖೆ ಉಪನಿಬಂಧಕರು 1-9-2017 ರಂದು ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಸಿಇಎನ್ ವಿಶೇಷ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಆದ್ರೆ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿತ್ತು.
ಮುಂಬೈ ಕರ್ನಾಟಕದ ಕೂಲಿ ಕಾರ್ಮಿಕರಿಂದ ಹಿಡಿದು ಶ್ರೀಮಂತರು ಹಾಗೂ ಅಧಿಕಾರಿಗಳಿಂದ ಹಣ ದ್ವಿಗುಣಗೊಳಿಸುವ ಆಮೀಷವೊಡ್ಡಿ 275 ಕೋಟಿ ಸ್ಥಿರ ಠೇವಣಿ ಪಡೆಯಲಾಗಿತ್ತು. ಈ ಹಣವನ್ನು ಆನಂದ ಅಪ್ಪುಗೋಳ ಸೇರಿ 13 ಜನರು 275 ಕೋಟಿ ಠೇವಣಿ ಹಣ ವಂಚನೆ ಮಾಡಿ, ಎಲ್ಲ ಹಣವನ್ನು ಸ್ವಂತಕ್ಕೆ ಬಳಸಿ ಗ್ರಾಹಕರಿಗೆ ವಂಚಿಸಿದ್ದರು ಎಂಬ ಆರೋಪವಿದೆ. ಈ ಕುರಿತು ಸಿಐಡಿಯಿಂದ ಮೊದಲ ಹಂತದ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.