ಕರ್ನಾಟಕ

karnataka

ಬೇಸಿಗೆಯಲ್ಲೂ ನಳನಳಿಸುತ್ತಿದ್ದಾಳೆ ಘಟಪ್ರಭಾ: ನದಿ ತೀರದ ಜನರಲ್ಲಿ ಸಂತಸ

By

Published : May 23, 2020, 12:35 PM IST

ಪ್ರತಿವರ್ಷ ಈ ವೇಳೆಗೆ ಘಟಪ್ರಭಾ ಜಲಾಶಯದ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಆದರೆ ಈ ವರ್ಷ ಮೇ ಅಂತ್ಯಕ್ಕೆ ಬಂದರೂ ಕೂಡ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಿದ್ದು, ದಶಕದ ಬಳಿಕ ಜಲಾಶಯ ಮನಸ್ಸಿಗೆ ಮುದ ನೀಡುತ್ತಿದೆ.

Ghataprabha Reservoir water level increase
ಬೇಸಿಗೆ ಅಂತ್ಯದಲ್ಲಿಯೂ ತುಂಬಿ ತುಳುಕುತ್ತಿರುವ ಘಟಪ್ರಭಾ ನದಿ

ಬೆಳಗಾವಿ: ರಾಜ್ಯದ ಪ್ರಮುಖ ಜಲಾಶಯವಾಗಿರುವ ಘಟಪ್ರಭಾ ಉರಿ ಬಿಸಿಲಿನಲ್ಲೂ ಮೈದುಂಬಿಕೊಂಡಿದೆ. ಪ್ರತಿವರ್ಷ ಈ ವೇಳೆಗೆ ಜಲಾಶಯ ಸಂಪೂರ್ಣ ಖಾಲಿಯಾಗಿ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗುತ್ತಿತ್ತು. ಆದರೆ ಈ ವರ್ಷ ಬೇಸಿಗೆಯಲ್ಲೂ ಘಟಪ್ರಭಾ ನಳನಳಿಸುತ್ತಿರುವುದು ನದಿ ತೀರದ ಜನರ ಸಂತಸಕ್ಕೆ ಕಾರಣವಾಗಿದೆ.

ಬೇಸಿಗೆಯಲ್ಲೂ ತುಂಬಿ ತುಳುಕುತ್ತಿರುವ ಘಟಪ್ರಭಾ ನದಿ

ಘಟಪ್ರಭಾ ನದಿಗೆ ಅಡ್ಡಲಾಗಿ 1977ರಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಘಟಪ್ರಭಾ ಜಲಾಶಯ ನಿರ್ಮಿಸಲಾಗಿದೆ. ನಾಲ್ಕು ದಶಕಗಳಿಂದ ಮುಂಬೈ ಕರ್ನಾಟಕ ಭಾಗದ ಲಕ್ಷಾಂತರ ಜನರ ದಾಹ ತಣಿಸುವ ಜತೆಗೆ ಕೃಷಿ ಚಟುವಟಿಕೆಗೂ ಘಟಪ್ರಭಾ ನೆರವಾಗಿದ್ದಾಳೆ. 51 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಹಿಡಕಲ್ ಜಲಾಶಯ ಕಳೆದ ವರ್ಷದ ಎಪ್ರಿಲ್ ಅಂತ್ಯದಲ್ಲೇ ಖಾಲಿಯಾಗಿತ್ತು. ಆದರೆ ಈ ವರ್ಷ ಮೇ ತಿಂಗಳ ಅಂತ್ಯದಲ್ಲೂ ಜಲಾಶಯದಲ್ಲಿ ನೀರಿದ್ದು ಕಂಗೊಳಿಸುತ್ತಿದೆ. ನವೆಂಬರ್​ನಿಂದ ಫೆಬ್ರುವರಿವರೆಗೆ ಕೃಷಿ ಚಟುವಟಿಕೆಗಳಿಗೆ ಸತತವಾಗಿ ನದಿ ಹಾಗೂ ಕಾಲುವೆ ಮೂಲಕ ನೀರು ಬಿಡುಗಡೆ ಮಾಡಲಾಗಿದೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ರೈತರು ಕೃಷಿಗೆ ಘಟಪ್ರಭಾ ನದಿ ನೀರನ್ನೇ ಅವಲಂಬಿಸಿದ್ದಾರೆ. ಜಲಾಶಯದಲ್ಲಿ ಇನ್ನೂ 8 ಟಿಎಂಸಿ ನೀರು ಸಂಗ್ರಹವಿದ್ದು, ಇನ್ನೂ ಐದಾರು ತಿಂಗಳು ಕುಡಿಯುವ ನೀರಿನ ದಾಹವನ್ನು ಘಟಪ್ರಭೆ ತಣಿಸಲಿದ್ದಾಳೆ.

1977 ರಲ್ಲಿ ನಿರ್ಮಾಣಗೊಂಡಿರುವ ಘಟಪ್ರಭಾ ಜಲಾಶಯ ಈವರೆಗೆ ಎರಡು ಸಲ ಭರ್ತಿಯಾಗಿದೆ. ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟಪ್ರದೇಶದಲ್ಲಿ ಅತಿಹೆಚ್ಚು ಮಳೆಯಾದರೆ ಘಟಪ್ರಭಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತದೆ. ಕಳೆದ ವರ್ಷದ ಪ್ರಚಂಡ ಪ್ರವಾಹಕ್ಕೆ ಅವಧಿ ಮುಂಚೆಯೇ ಘಟಪ್ರಭಾ ನದಿ ಭರ್ತಿಯಾಗಿತ್ತು. ಹಿಂದೊಮ್ಮೆ ಜಿಲ್ಲೆ ನೆರೆಗೆ ತತ್ತರಿಸಿದಾಗಲೂ ಜಲಾಶಯ ಭರ್ತಿಯಾಗಿತ್ತು. ಆದರೆ ಆಗ ಏಪ್ರಿಲ್ ಅಂತ್ಯಕ್ಕೆ ಜಲಾಶಯ ಖಾಲಿಯಾಗಿತ್ತು. ಈ ವರ್ಷ ಮೇ ಅಂತ್ಯಕ್ಕೆ ಅಧಿಕ ಪ್ರಮಾಣದಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹವಿದೆ. ಹೀಗಾಗಿ ಮುಂಗಾರು ಕೈ ಕೊಟ್ಟರೂ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜನರಿಗೆ ಕುಡಿಯುವ ನೀರಿಗೆ ಅಭಾವ ಎದುರಾಗುವುದಿಲ್ಲ.

ಇನ್ನು 2013 ರಿಂದ 2018 ರವರೆಗೆ ಇಡೀ ರಾಜ್ಯವೇ ಬರಕ್ಕೆ ತತ್ತರಿಸಿತ್ತು. ಈ ವೇಳೆ ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗದ ಕಾರಣ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬಂದಿರಲಿಲ್ಲ. ಈ ಕಾರಣಕ್ಕೆ ಜಲಾಶಯ ತನ್ನ ವೈಭವ ಕಳೆದುಕೊಂಡಿತ್ತು. ಕಳೆದ ವರ್ಷ ಹೆಚ್ಚಿನ ಮಳೆಯಾದ ಕಾರಣ ಜಲಾಶಯ ಮತ್ತೊಮ್ಮೆ ಸಂಪೂರ್ಣ ಭರ್ತಿಯಾಗಿತ್ತು. ಇದೀಗ ಮೇ ಅಂತ್ಯಕ್ಕೂ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಿದ್ದು, ದಶಕದ ಬಳಿಕ ಜಲಾಶಯ ಮನಸ್ಸಿಗೆ ಮುದ ನೀಡುತ್ತಿದೆ.

ABOUT THE AUTHOR

...view details