ಜೀವನಾವಶ್ಯಕ ವಸ್ತುಗಳಿಗೆ ಹೆಚ್ಚಿನ ದರ ಪಡೆದರೆ ಸೂಕ್ತ ಕ್ರಮ: ಡಿಸಿ ಎಚ್ಚರಿಕೆ - ಬೆಳಗಾವಿ ಸುದ್ದಿ
ಜೀವನಾಶ್ಯಕ ವಸ್ತುಗಳಿಗೆ ಗ್ರಾಹಕರಿಂದ ಹೆಚ್ಚಿನ ದರ ಪಡೆದಲ್ಲಿ ವ್ಯಾಪಾರಸ್ಥರ ಮೇಲೆ ಜಿವನಾವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಎಚ್ಚರಿಕೆ ನೀಡಿದ್ದಾರೆ.
![ಜೀವನಾವಶ್ಯಕ ವಸ್ತುಗಳಿಗೆ ಹೆಚ್ಚಿನ ದರ ಪಡೆದರೆ ಸೂಕ್ತ ಕ್ರಮ: ಡಿಸಿ ಎಚ್ಚರಿಕೆ Action to be taken in case of higher cost of living](https://etvbharatimages.akamaized.net/etvbharat/prod-images/768-512-6587812-747-6587812-1585492399804.jpg)
ಬೆಳಗಾವಿ:ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿರುವ ಈ ಸಂದರ್ಭದಲ್ಲಿ ಜೀವನಾಶ್ಯಕ ವಸ್ತುಗಳಿಗೆ ಗ್ರಾಹಕರಿಂದ ಹೆಚ್ಚಿನ ದರ ಪಡೆದಲ್ಲಿ ಹಾಗೂ ಕೃತಕ ಅಭಾವ, ಅನ್ಯಧಿಕೃತ ದಾಸ್ತಾನು ಕಂಡು ಬಂದಲ್ಲಿ ಅಂತಹ ವ್ಯಾಪಾರಸ್ಥರ ಮೇಲೆ ಜಿವನಾವಶ್ಯಕ ವಸ್ತುಗಳ ಕಾಯ್ದೆ ಅಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್ -19ರ ಅನ್ವಯ ಜೀವನಾವಶ್ಯಕ ವಸ್ತುಗಳು ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಮುಕ್ತ ಮಾರುಕಟ್ಟೆಯಲ್ಲಿ ದೊರೆಯುವ ಗ್ರಾಹಕರಿಗೆ ಬೇಕಾಗುವ ಕಿರಾಣಿ, ದಿನಸಿ ಅಂಗಡಿ, ಹಾಲು, ಪೆಟ್ರೋಲ್ ಬಂಕ್ ಹಾಗೂ ಇತ್ಯಾದಿ ವಸ್ತುಗಳ ಮಾರಾಟ ಮಳಿಗೆಗಳನ್ನ ತೆರೆದು ಜೀವನಾವಶ್ಯಕ ವಸ್ತುಗಳನ್ನು ವಿತರಿಸಲು ಈಗಾಗಲೇ ಸೂಚಿಸಲಾಗಿದೆ.
ಜಿಲ್ಲೆಯ ಬಹುತೇಕ ಅಂಗಡಿ ಮಾಲೀಕರು ಅವಶ್ಯಕ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಆದ್ದರಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡದೇ ನಿಗದಿತ ದರದಲ್ಲಿ ಮಾರಾಟ ಮಾಡಲು ಸೂಚಿಸಲಾಗಿದೆ. ಪರಿಸ್ಥಿತಿಗೆ ಅನ್ವಯವಾಗುವಂತೆ ಗ್ರಾಹಕರ ಹಾಗೂ ವ್ಯಾಪಾರಸ್ಥರ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಕೋನ ಇಟ್ಟುಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕೂಡಾ ಈಗಾಗಲೇ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ಅವುಗಳನ್ನು ಕೂಡ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.