ಕರ್ನಾಟಕ

karnataka

ಬೆಳಗಾವಿ: 12 ಲಕ್ಷ ಮೌಲ್ಯದ 900 ಚೀಲ ರಸಗೊಬ್ಬರ ಕಳ್ಳತನ, ದೂರು ದಾಖಲು

By

Published : May 25, 2022, 11:09 AM IST

ಗೋದಾಮಿನಲ್ಲಿದ್ದ 50 ಕೆಜಿ ತೂಕದ 900 ಚೀಲ ರಸಗೊಬ್ಬರ ಕಳ್ಳತನ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

belagavi
ಬೆಳಗಾವಿಯಲ್ಲಿ ರಸಗೊಬ್ಬರ ಕಳ್ಳತನ

ಬೆಳಗಾವಿ:ತಾಲೂಕಿನ ದೇಸೂರು ಬಳಿಯಿರುವ ಗೂಡ್ಸ್ ರೈಲು ಡಂಪಿಂಗ್ ಸ್ಟೇಷನ್ ಗೋದಾಮಿನಲ್ಲಿ ಸಂಗ್ರಹಿಸಿದ್ದ 12 ಲಕ್ಷ ಮೌಲ್ಯದ 900 ಚೀಲ ರಸಗೊಬ್ಬರ ಕಳ್ಳತನ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ತಡರಾತ್ರಿ ಗೋದಾಮಿನ ಬಳಿ ಯಾರೂ ಇಲ್ಲದಿರುವುದನ್ನೇ ಖಚಿತಪಡಿಸಿಕೊಂಡ ಕಳ್ಳರು ಆರ್‌ಸಿಎಫ್‌, ಡಿಎಪಿ ಗೊಬ್ಬರ ದೋಚಿದ್ದಾರೆ.


ಯಾರೋ ಗೊತ್ತಿದ್ದವರಿಂದಲೇ ಈ ಕೃತ್ಯ ನಡೆದಿದೆ ಎಂಬ ಅನುಮಾನ ಮೂಡಿದೆ. ಅಲ್ಲದೇ 900 ಚೀಲ ಗೊಬ್ಬರ ತೆಗೆದುಕೊಂಡು ಹೋಗಲು ಕನಿಷ್ಠ ಎರಡು ಲಾರಿಗಳು ಬೇಕು. ಗೊಬ್ಬರ ಕಳ್ಳತನ ಆಗಿರುವ ಸಂಬಂಧ ಸಾಗರ್ ಟ್ರಾನ್ಸ್‌ಪೋರ್ಟ್‌ನ ಮ್ಯಾನೇಜರ್ ಶಿವಾಜಿ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಗೋದಾಮಿನಿಂದ ಇಷ್ಟೊಂದು ಪ್ರಮಾಣದ ಸರಕು ಕಳ್ಳತನ ಆಗಿದ್ದು ಇದೇ ಮೊದಲು. ಸಾಮಾನ್ಯವಾಗಿ ಬೆಳಗ್ಗೆ 6 ರಿಂದ ಸಂಜೆ 7ರವರೆಗೆ ಇಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಗೂಡ್ಸ್ ರೈಲಿನಿಂದ ಸರಕು ಇಳಿಸಿ ಲೋಡ್ ಮಾಡಿ ಅಂದಿನ ಕೂಲಿ ಹಣ ಪಡೆದು ವಾಪಸ್ ಆಗುತ್ತಾರೆ. ರಾತ್ರಿ ವೇಳೆ ಗೋದಾಮಿನ ಬಳಿ ಯಾರೂ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡ ಚಾಲಾಕಿ ಕಳ್ಳರು ರಸಗೊಬ್ಬರ ಎಗರಿಸಿ ಪರಾರಿಯಾಗಿದ್ದಾರೆ‌.

ರೈಲ್ವೆ ಪೊಲೀಸರು ಬೆಳಗ್ಗೆ ಹಾಗೂ ರಾತ್ರಿ ರೌಂಡ್ಸ್ ಹಾಕಿ ಹೋಗುತ್ತಾರೆ. ಇಲ್ಲಿ ಸರಿಯಾದ ಭದ್ರತೆ ವ್ಯವಸ್ಥೆ ಇಲ್ಲ. ಸಿಸಿ ಕ್ಯಾಮರಾಗಳ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ಸಿಬ್ಬಂದಿ ತಿಳಿಸಿದರು. ಗೋದಾಮು ಮ್ಯಾನೇಜರ್ ಶಿವಾಜಿಯ ಅವರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡದೆ ಬೆಳಗಾವಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದು ಅನುಮಾನ ವ್ಯಕ್ತವಾಗುತ್ತಿದೆ. ದೇಸೂರು ಗ್ರಾಮ ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಗೆ ಬರುವುದರಿಂದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details