ಕರ್ನಾಟಕ

karnataka

ಆಹಾರ ಕಲಬೆರಕೆ ವಿರುದ್ಧದ ಹೋರಾಟಕ್ಕೆ 3 ಎಕರೆ ಜಮೀನು ಮಾರಿದ ಧೀರ.. 30 ಲಕ್ಷ ರೂ ಖರ್ಚು ಮಾಡಿದ ಧೈರ್ಯವಂತ!

By

Published : Nov 5, 2022, 5:00 PM IST

ಕೇರಳದ ಕಣ್ಣೂರಿನವರಾದ ಲಿಯೊನಾರ್ಡೊ ಡೊ ಜಾನ್ ಎಂಬುವವರು ಕಲಬೆರಕೆ ಆಹಾರದ ವಿರುದ್ಧ ಹೋರಾಟಕ್ಕೆ ತಮ್ಮ ಜೀವನಕ್ಕೆ ಆಸರೆಯಾಗಿದ್ದ 3 ಎಕರೆ ಆಸ್ತಿಯನ್ನೇ ಮಾರಿ 30 ಲಕ್ಷ ರೂ ಖರ್ಚು ಮಾಡಿ ಹೋರಾಟ ಮಾಡಿ ಮಾದರಿಯಾಗಿದ್ದಾರೆ.

Lionardo Do John
ಲಿಯೊನಾರ್ಡೊ ಡೊ ಜಾನ್

ಕಣ್ಣೂರು( ಕೇರಳ): ಇಂದು ಎಲ್ಲಕಡೆ ಕಲಬೆರೆಕೆಯದ್ದೇ ಮಾತು.. ವ್ಯವಹಾರಗಳು ಬೆಳದಂತೆ ಲಾಭಕ್ಕಾಗಿ ತಿನ್ನುವ ವಸ್ತುಗಳ ಕಲಬೆರಕೆ ಕಾಮನ್​ ಎನ್ನುವಂತಾಗಿದೆ. ಹಲವು ಬ್ರಾಂಡ್​​ಗಳ ವಿರುದ್ಧ ಇಂತಹ ವ್ಯಾಪಕ ಆರೋಪಗಳು ಕೇಳಿ ಬರುತ್ತಲೇ ಇವೆ.

ಇಂತಹ ಕಲಬೆರೆಕೆ ವಸ್ತುಗಳ ಬಗ್ಗೆ ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿನ ಲಿಯೊನಾರ್ಡೊ ಡೊ ಜಾನ್, ತಮ್ಮ ಹೋರಾಟಕ್ಕಾಗಿ ತಮ್ಮ ಜೀವನಕ್ಕೆ ಆಸರೆಯಾಗಿರುವ 3 ಎಕರೆ ಆಸ್ತಿಯನ್ನು ಮಾರಿ 30 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಿದ್ದಾರೆ. ದೇಶಾದ್ಯಂತ 2000ಕ್ಕೂ ಹೆಚ್ಚು ರಾಜ್ಯ ಸರ್ಕಾರಿ ಮತ್ತು ಸರ್ಕಾರೇತರ ಇಲಾಖೆಗಳಲ್ಲಿ ಆರ್‌ಟಿಐ ಅರ್ಜಿ ಸಲ್ಲಿಸಿ 400ಕ್ಕೂ ಹೆಚ್ಚು ಪತ್ರಿಕಾಗೋಷ್ಠಿಗಳನ್ನು ನಡೆಸಿ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ತಿನ್ನುವ ಅನ್ನಕ್ಕೆ ವಿಷ ಸೇರಿಸುವ ಇಂತಹ ಉದ್ಯಮಗಳು ಬ್ಯಾಂಡ್​​ಗಳು ಸೇರಿದಂತೆ ಕಲಬೆರೆಕೆ ಮಾಡುವವರ ವಿರುದ್ಧ ಹೋರಾಟ ನಡೆಸಿದ್ದಾರೆ. ಕಳೆದ 12 ವರ್ಷಗಳಿಂದ ಆಹಾರ ಪದಾರ್ಥಗಳ ಕಲಬೆರಕೆ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದಾರೆ. ಕಣ್ಣೂರಿನವರಾದ ಲಿಯೊನಾರ್ಡೊ ಡೊ ಜಾನ್, ದಾಲ್ಚಿನ್ನಿ, ಕ್ಯಾಸಿಯಾ, ಮೆಣಸಿನ ಪುಡಿ ಮತ್ತು ಎಥಿಯೋನ್ ಕೀಟನಾಶಕಗಳ ಕಲಬೆರಕೆ ವಿರುದ್ಧ ತಮ್ಮ ಹೋರಾಟ ನಡೆಸುತ್ತಿದ್ದಾರೆ.

ಇವರ ಹೋರಾಟ ಆರಂಭವಾಗಿದ್ದು ಹೇಗೆ?:12 ವರ್ಷಗಳ ಹಿಂದೆ ಲಿವರ್ ಸಿರೋಸಿಸ್‌ ನಿಂದ ತಮ್ಮ ಆತ್ಮೀಯ ಸ್ನೇಹಿತ ನಿಧನರಾದರು. ಕ್ಯಾಸಿಯಾ ಮತ್ತು ದಾಲ್ಚಿನ್ನಿ ಮಿಶ್ರಣದಿಂದ ಮಾಡಿದ ಆಯುರ್ವೇದ ಮಿಶ್ರಣವು ತನ್ನ ಸ್ನೇಹಿತನ ಜೀವವನ್ನು ತೆಗೆದುಕೊಂಡಿತು ಎಂಬ ಕಾರಣವನ್ನು ವೈದ್ಯರ ಮೂಲಕ ಅರಿತುಕೊಂಡ ಜಾನ್​ ಅವತ್ತೇ ಹೋರಾಟಕ್ಕೆ ತೀರ್ಮಾನಿಸಿದ್ದರು. ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಮಾಡಿದ್ದು ಅವರ ತಾಯಿ ಕ್ಯಾನ್ಸರ್‌ಗೆ ಬಲಿಯಾದಾಗ. ತಾಯಿ ಕಳೆದುಕೊಂಡ ಮೇಲೆ ಜಾನ್​​ ಆಹಾರ ಕಲಬೆರಕೆ ವಿರುದ್ಧ ಹೋರಾಡುವ ಸಂಕಲ್ಪ ಮಾಡಿದರು.

ಕ್ಯಾನ್ಸರ್​ ಎಂಬ ಮಹಾಮಾರಿ:ತಿನ್ನುವ ಪದಾರ್ಥದಲ್ಲಿಕಲಬೆರಕೆ ಮಾಡುವುದರಿಂದ ಅನೇಕ ಹೊಸ ಕ್ಯಾನ್ಸರ್ ರೋಗಿಗಳು ಸೃಷ್ಟಿಯಾಗುತ್ತಾರೆ. ಈ ಮಾತಿಗೆ ಇಂಬು ನೀಡುವಂತೆ ಪ್ರಸ್ತುತ ಕೇರಳದಲ್ಲಿ 2.70 ಲಕ್ಷ ಕ್ಯಾನ್ಸರ್ ರೋಗಿಗಳಿದ್ದಾರೆ. ಇನ್ನೂ ಆಘಾತಕಾರಿ ವಿಷಯ ಎಂದರೆ ಪ್ರತಿ ವರ್ಷ 50,000 ಹೊಸ ಪ್ರಕರಣಗಳು ವರದಿಯಾಗುತ್ತಿರುವುದು.

ಕೇರಳವು ದೇಶದ ಅತಿ ಹೆಚ್ಚು ಕಿಡ್ನಿ ಮತ್ತು ಲಿವರ್ ರೋಗಿಗಳನ್ನು ಹೊಂದಿದೆ. ಎರ್ನಾಕುಲಂನ ಲೇಕ್‌ಶೋರ್ ಆಸ್ಪತ್ರೆಯು ಈ ಬಗ್ಗೆ ಹಲವಾರು ಅಧ್ಯಯನಗಳನ್ನು ಮಾಡಿದೆ. ಯಕೃತ್ತಿನ ರೋಗಗಳನ್ನು ಉಂಟು ಮಾಡುವ ಗಿಡಮೂಲಿಕೆಗಳ ಔಷಧಗಳ ಬಗ್ಗೆ 2016-17 ರಲ್ಲಿ 1440 ಗಂಭೀರ ಯಕೃತ್ತಿನ ಕಾಯಿಲೆಗಳನ್ನು ಹೊಂದಿರುವ ರೋಗಿಗಳ ಮೇಲೆ ಆಸ್ಪತ್ರೆ ತಜ್ಞರು ಅಧ್ಯಯನ ಕೈಗೊಂಡಿದ್ದರು. ಈ ಅಧ್ಯಯನದಲ್ಲಿ ಯಕೃತ್ತಿನ ಕಾಯಿಲೆಗೆ ಗಿಡಮೂಲಿಕೆ ಔಷಧಗಳೇ ಪ್ರಮುಖ ಕಾರಣ ಎಂಬುದನ್ನು ಸಂಶೋಧಕರು ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದರು.

ಗಿಡಮೂಲಿಕೆ ಔಷಧಗಳ ಕಲಬೆರಕೆ ವಿರುದ್ದ ಲಿಯೊನಾರ್ಡೊ ಡೊ ಜಾನ್ ಹೋರಾಟ:ಕೇರಳದ ಯಾವುದೇ ಆಯುರ್ವೇದ ಔಷಧ ಕಂಪನಿಗಳು ಕೀಟನಾಶಕಗಳ ಇರುವಿಕೆಯನ್ನು ಪರೀಕ್ಷಿಸಲು ಉಪಕರಣಗಳನ್ನು ಖರೀದಿಸಿಲ್ಲ. ಕೇರಳ ಆಯುರ್ವೇದ ಉದ್ಯಮವು ವರ್ಷಕ್ಕೆ 1000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ ಎಂಬುದು ಗಮನಾರ್ಹ. ಈ ಬಗ್ಗೆ ಜಾನ್​ ಖಚಿತ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಉದ್ಯಮಗಳು ಹೇಗೆಲ್ಲ ಕಲಬೆರಕೆ ಮಾಡಿ ಜನರಿಗೆ, ಗ್ರಾಹಕರಿಗೆ ವಂಚಿಸುತ್ತಿದ್ದಾರೆ ಎಂಬ ಬಗ್ಗೆ ಅವರು ಮಾತನಾಡಿದ್ದಾರೆ.

ಆಯುಷ್ ಸಚಿವಾಲಯವು ಕೇರಳದ ಎಲ್ಲ ಆಯುರ್ವೇದ ಔಷಧ ತಯಾರಕರಿಗೆ ಈ ಉಪಕರಣವನ್ನು ಖರೀದಿಸಲು 75 ಲಕ್ಷ ರೂ ನೀಡಿದೆ. ಆದರೆ ಯಾರೂ ಉಪಕರಣಗಳನ್ನು ಇಲ್ಲಿಯವರೆಗೆ ಖರೀದಿಸಿಲ್ಲ. ಈ ಆಯುರ್ವೇದ ಕಂಪನಿಗಳು ಉತ್ಪಾದಿಸುವ ಯಾವುದೇ ಔಷಧಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಮೊದಲು ಪರೀಕ್ಷಿಸಿರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಏತಕ್ಕಾಗಿ ಜಾನ್​ ಹೋರಾಟ: ಲಿಯೊನಾರ್ಡೊ ಡೊ ಜಾನ್ ಪ್ರಮುಖವಾಗಿ ಕ್ಯಾಸಿಯಾ (ಚೀನೀ ದಾಲ್ಚಿನ್ನಿ) ಮತ್ತು ದಾಲ್ಚಿನ್ನಿ ಕಲಬೆರಕೆ ವಿರುದ್ಧವಾಗಿ ತಮ್ಮ ಹೋರಾಟ ನಡೆಸುತ್ತಿದ್ದಾರೆ. ಭಾರತ ಮತ್ತು ಶ್ರೀಲಂಕಾ ದಾಲ್ಚಿನ್ನಿ ಪ್ರಮುಖ ಉತ್ಪಾದಕ ದೇಶಗಳಾಗಿವೆ ಎಂಬುದು ಇಲ್ಲಿ ಗಮನಾರ್ಹ. ಜಾನ್, ಮುಖ್ಯವಾಗಿ ತಮಿಳುನಾಡಿನಿಂದ ಬರುವ ಮೆಣಸಿನ ಪುಡಿಯ ಕಲಬೆರಕೆ ವಿರುದ್ಧ ಮತ್ತು ಆಹಾರ ಬೆಳೆಗಳಲ್ಲಿ ಇಥಿಯಾನ್ ಕೀಟನಾಶಕವನ್ನು ಬಳಸುವುದರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.

ಇದಕ್ಕಾಗಿಯೇ ವಿಶೇಷ ಅಧ್ಯಯನ ಹಾಗೂ ದಾಖಲೆ ಸಂಗ್ರಹಿಸಿರುವ ಜಾನ್​:ಜಾನ್, RTI ಅರ್ಜಿಗಳ ಮೂಲಕ ದೇಶಾದ್ಯಂತ 2000 ಕ್ಕೂ ಹೆಚ್ಚು ಸರ್ಕಾರಿ ಮತ್ತು ಸರ್ಕಾರೇತರ ಇಲಾಖೆಗಳಿಂದ ವ್ಯಾಪಕವಾದ ಡೇಟಾವನ್ನು ಸಂಗ್ರಹಿಸಿದ್ದಾರೆ. ಇಷ್ಟೆಲ್ಲ ಮಾಡಿರುವ ಜಾನ್ ಅವರ ಪ್ರಯತ್ನಗಳು ವಿಫಲವಾಗಿಲ್ಲ, ಸಿಕ್ಕಿಂ ಸಂಪೂರ್ಣವಾಗಿ ಸಾವಯವವಾಗಿದೆ. ಮುಂದಿನ 90 ದಿನಗಳವರೆಗೆ ಎಲ್ಲಾ ಅಪಾಯಕಾರಿ ಕೀಟನಾಶಕಗಳನ್ನು ನಿಷೇಧಿಸಲಾಗಿದೆ ಎಂದು ತಮಿಳುನಾಡು ಸರ್ಕಾರದಿಂದ ಪತ್ರವೊಂದು ಬಂದಿದೆ ಎಂದು ಜಾನ್​ ಹೇಳಿದ್ದಾರೆ.

ನನ್ನನ್ನು ಭಯೋತ್ಪಾದಕನಂತೆ ನೋಡಲಾಗುತ್ತಿದೆ:ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೇರಿದಂತೆ ಅನೇಕ ಅಧಿಕಾರಿಗಳು, ಉದ್ಯಮಗಳು ನನ್ನನ್ನು ಭಯೋತ್ಪಾದಕ ನಂತೆ ನಡೆಸಿಕೊಳ್ಳುತ್ತಿವೆ, ಇದು ನನಗೆ ಅತೀವ ನೋವು ತಂದಿದೆ. ಡಿಜಿಪಿ ಅನಿಲ್ ಕಾಂತ್ ಅವರು ತಮಿಳುನಾಡಿನ ಎಲ್ಲಾ ಮಸಾಲಾ ಪುಡಿಗಳ ಪ್ರವೇಶವನ್ನು ನಿಷೇಧಿಸಿರುವುದು ಒಂದು ಉತ್ತಮ ಬೆಳವಣಿಗೆ ಎಂದು ಇದೇ ವೇಳೆ ಜಾನ್ ಸಂತಸ ಕೂಡಾ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಜಾನ್ ಸಲ್ಲಿಸಿದ್ದ ಅರ್ಜಿಗಳನ್ನು ಪರಿಗಣಿಸಿರುವ ಕೇರಳ ಹೈಕೋರ್ಟ್, ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಕ ಸಾರ್ವಜನಿಕರು ಸೇವಿಸುವ ಆಹಾರದ ಸುರಕ್ಷತೆಯ ಬಗ್ಗೆ ತಿಳಿಸಲು ವಾರ್ಷಿಕ ಬಜೆಟ್‌ನಿಂದ 160 ಕೋಟಿ ರೂ ಗಳನ್ನು ನಿಯೋಜಿಸಬೇಕು ಆದೇಶಿಸಿದೆ ಎಂಬ ವಿಷಯವನ್ನೂ ಜಾನ್​ ಹೇಳಿದ್ದಾರೆ.

ಒಟ್ಟಾರೆ ಜಾನ್​ ಜನರ ಆರೋಗ್ಯ ರಕ್ಷಣೆ ಹಾಗೂ ಲಾಭದಾಸೆಗೆ ನಡೆಯುವ ಕಲಬೆರಕೆ ವಿರುದ್ಧ ಹೋರಾಟ ನಡೆಸಿದ್ದಾರೆ. ಅವರ ಹೋರಾಟಕ್ಕೆ ಜಯ ಸಿಗಬೇಕಿದೆ.

ಇದನ್ನೂ ಓದಿ:9 ಸಾವಿರ ಪುಟ ಆರ್​​ಟಿಐ ದಾಖಲೆ: ಚಕ್ಕಡಿಯಲ್ಲಿ ಹೊತ್ತೊಯ್ದ ಕಾರ್ಯಕರ್ತ

ABOUT THE AUTHOR

...view details