ನವದೆಹಲಿ:ಅಡುಗೆ ಅನಿಲ (ಎಲ್ಪಿಜಿ) ದರ ಹೆಚ್ಚಳಕ್ಕೂ, ದೆಹಲಿ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ ನೀಡಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಪಿಜಿ ದರ ಏರಿಕೆಯಿಂದಾಗಿ ಈ ಹೆಚ್ಚಳ ಕಂಡುಬಂದಿದೆ. ಅದರ ಬಳಕೆಯ ಮೇಲೂ ಅವಲಂಬಿತವಾಗಿರುದೆ. ಅದು ಕೆಲವೊಮ್ಮೆ ಕಡಿಮೆಯಾಗುತ್ತದೆ. ಮತ್ತೆ ಕೆಲವೊಮ್ಮೆ ಹೆಚ್ಚಾಗುತ್ತದೆ. ಅದು ನನ್ನ ಹಿಡಿತದಲ್ಲಿ ಇರುವುದಿಲ್ಲ. ಆದರೆ, ಅದನ್ನು ಚುನಾವಣೆಗಳಿಗೆ ಹೋಲಿಸುವುದು ತಪ್ಪು ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಕುಸಿಯುತ್ತಿರುವ ಕಾರಣ 20 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 5 ರೂ ಇಳಿದಿದೆ ಎಂದರು.
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಒಂದು ದಿನದ ನಂತರ ಫೆಬ್ರವರಿ 12 ರಂದು ಎಲ್ಪಿಜಿ ದರದ ಕುರಿತು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ದೆಹಲಿಯಲ್ಲಿ ಬಿಜೆಪಿ ಸೋತ ಪರಿಣಾಮ ಅಡುಗೆ ಅನಿಲದ ದರ ಏರಿಸಲಾಗಿದೆ ಎಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಆಕ್ರೋಶ ಹೊರಹಾಕಿದ್ದವು. ಪೆಟ್ರೊಲ್ ಹೆಚ್ಚಳ ಖಂಡಿಸಿ ಪ್ರತಿಭಟನೆಗಳು ನಡೆದಿದ್ದವು.
ಪರುಷ್ಕೃತ ಸಿಲಿಂಡರ್ ದರ ಏರಿಕೆಯು ಬುಧವಾರದಿಂದಲೇ (ಫೆ.12) ಅನ್ವಯವಾಗಲಿದೆ. ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಪ್ರತಿ 14.2 ಕೆ.ಜಿ. ಸಿಲಿಂಡರ್ಗೆ ₹ 144 ಹೆಚ್ಚಳ ಮಾಡಲಾಗಿದೆ. ಬೆಲೆ ಏರಿಕೆಯಿಂದ ದೆಹಲಿಯಲ್ಲಿ ಪ್ರತಿ 14.2 ಕೆ.ಜಿ. ಸಿಲಿಂಡರ್ ₹ 858.50 (₹ 144.50 ಪರಿಷ್ಕೃತ ದರ ಏರಿಕೆ ಸೇರಿ) ಲಭ್ಯವಾಗಲಿದೆ. ಉಳಿದಂತೆ ಕೋಲ್ಕತ್ತಾ ₹ 896 (₹ 149), ಮುಂಬೈ ₹ 829.50 (₹ 145) ಹಾಗೂ ಚೆನ್ನೈನಲ್ಲಿ ₹ 881 (₹147) ಹೆಚ್ಚಳವಾಗಿದೆ.