ನವದೆಹಲಿ:ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸುವ ಕಬ್ಬಿಗೆ ಕನಿಷ್ಠ ದರವನ್ನು 2019-20 ಸಾಲಿಗೆ ಯಥಾಸ್ಥಿತಿಯಲ್ಲಿ (₹275) ಹಾಗೂ 40 ಲಕ್ಷ ಟನ್ಗಳಷ್ಟು ಸಕ್ಕರೆಯ ಮುಂಜಾಗ್ರತೆಯ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಮುಂದಿನ ಅಕ್ಟೋಬರ್ನಿಂದ ಆರಂಭವಾಗಲಿರುವ ಮಾರುಕಟ್ಟೆ ವರ್ಷಕ್ಕೆ ಪ್ರತಿ ಕ್ವಿಂಟಾಲ್ ಕಬ್ಬಿನ ಎಫ್ಆರ್ಪಿ ದರವನ್ನು ₹ 275ಕ್ಕೆ ನಿಗದಿಪಡಿಸಲಾಗಿದೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಕೃಷಿ ವೆಚ್ಚ ಮತ್ತು ದರ (ಸಿಎಸಿಪಿ) ಆಯೋಗದ ಶಿಫಾರಸು ಮೇರೆಗೆ ಈ ತೀರ್ಮಾನಕ್ಕೆ ಬರಲಾಗಿದೆ. ಎಫ್ಆರ್ಪಿ ದರದ ಪರಿಣಾಮ ರೈತರಿಗೆ ಖಾತರಿಯ ಆದಾಯ ಸಿಗಲಿದೆ. ಎಫ್ಆರ್ಪಿಗಿಂತ ಕಡಿಮೆ ದರವನ್ನು ಕಾರ್ಖಾನೆಗಳು ಖರೀದಿಸಬಾರದು ಎಂದು ಹೇಳಿದ್ದಾರೆ.
ಇನ್ನೊಂದೆಡೆ ಕೇಂದ್ರ ಆಹಾರ ಇಲಾಖೆ ಸಲ್ಲಿಸಿದ ಪ್ರಸ್ತಾವನೆಯ ಮೇರೆಗೆ ಕೇಂದ್ರ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು (ಸಿಸಿಇಎ) 40 ಲಕ್ಷ ಟನ್ ಸಕ್ಕರೆ ಸಂಗ್ರಹಕ್ಕೆ ಒಪ್ಪಿಗೆ ನೀಡಿದೆ.ಇದರಿಂದ ಸಕ್ಕರೆಗೆ ಉತ್ತಮ ಬೆಲೆ ಬರುವಂತೆ ಮಾಡಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಬಾಕಿ ಮೊತ್ತವನ್ನು ಪಾವತಿಸಲು ನೆರವಾಗಲಿದೆ. ದೇಶದ ವಿವಿಧ ಸಕ್ಕರೆ ಕಾರ್ಖಾನೆಗಳು ರೈತರಿಗೆ 15 ಸಾವಿರ ಕೋಟಿ ರೂ.ಯಷ್ಟು ಬಾಕಿ ನೀಡಬೇಕಿದೆ.