ಕರ್ನಾಟಕ

karnataka

ETV Bharat / business

ವಿಶೇಷ ಅಂಕಣ: ದೇಶದ ಬಳಕೆ ಹೆಚ್ಚಳ ಮತ್ತು ಬೆಳವಣಿಗೆಗೆ ಸವಾಲಾಗಿರುವ ಮೂರು ಸಂಕೀರ್ಣ ಅಂಶಗಳು

ದೇಶದ ಬಳಕೆಯ ಪ್ರಮಾಣವನ್ನು ಭವಿಷ್ಯದಲ್ಲಿ ಸಕಾರಾತ್ಮಕ ಬೆಳವಣಿಗೆಯತ್ತ ತಿರುಗಿಸುವಲ್ಲಿ ಮೂರು ನಿರ್ಣಾಯಕ ಸವಾಲುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜನವರಿ 2019 ರಲ್ಲಿ ಬಿಡುಗಡೆಗೊಂಡ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಆರ್ಥಿಕ ಒಳನೋಟ ವರದಿಯು ಹೇಳುತ್ತದೆ. ಅವುಗಳೆಂದರೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ, ಗ್ರಾಮೀಣ ಭಾರತದ ಸಾಮಾಜಿಕ ಆರ್ಥಿಕ ಸೇರ್ಪಡೆ ಹಾಗೆಯೇ ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯ.

By

Published : Dec 29, 2019, 9:25 PM IST

Updated : Dec 30, 2019, 7:14 AM IST

The three interacting factors that challenge the growth of the country
ದೇಶದ ಬಳಕೆ ಹೆಚ್ಚಳ ಮತ್ತು ಬೆಳವಣಿಗೆಗೆ ಸವಾಲಾಗಿರುವ ಮೂರು ಸಂರ್ಕೀಣ ಅಂಶಗಳು

ದೇಶದ ಬಳಕೆಯ ಪ್ರಮಾಣವನ್ನು ಭವಿಷ್ಯದಲ್ಲಿ ಸಕಾರಾತ್ಮಕ ಬೆಳವಣಿಗೆಯತ್ತ ತಿರುಗಿಸುವಲ್ಲಿ ಮೂರು ನಿರ್ಣಾಯಕ ಸವಾಲುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜನವರಿ 2019 ರಲ್ಲಿ ಬಿಡುಗಡೆಗೊಂಡಿದ್ದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಆರ್ಥಿಕ ಒಳನೋಟ ವರದಿಯು ಹೇಳುತ್ತದೆ. ಅವುಗಳೆಂದರೆ: (ಎ) ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ; (ಬಿ) ಗ್ರಾಮೀಣ ಭಾರತದ ಸಾಮಾಜಿಕ ಆರ್ಥಿಕ ಸೇರ್ಪಡೆ; (ಸಿ) ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯ. ಒಂದು ವರ್ಷದ ಹಿಂದೆಯೇ ವರದಿಯನ್ನು ಪ್ರಕಟಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಈ ಮೂರು ನಿರ್ಣಾಯಕ ಸವಾಲುಗಳನ್ನು ಎದುರಿಸಲು ನಾವು ತೆಗೆದುಕೊಂಡ ಕ್ರಮಗಳು ಮತ್ತು ಮತ್ತು ಉಪಕ್ರಮಗಳು ಹಾಗೂ ಅದರ ಪ್ರಗತಿಯ ಕುರಿತು ಇಲ್ಲಿ ವಿಶ್ಲೇಷಿಸೋಣ.

ಈ ಸವಾಲುಗಳ ಕುರಿತು ಅವಲೋಕನ ನಡೆಸುವ ಮೊದಲು, ಕಳೆದ ಒಂದು ವರ್ಷದಲ್ಲಿ ದೇಶದ ಆರ್ಥಿಕತೆಯ ಬೆಳವಣಿಗೆ ಹೇಗಿದೆ ಎಂಬುದನ್ನು ಗಮನಿಸುವುದು ಬಹು ಮುಖ್ಯವಾಗುತ್ತದೆ. ದೇಶದ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯ ದರವು 2018-19ರ ಮೊದಲ ತ್ರೈಮಾಸಿಕದಲ್ಲಿ 8.0%ರಷ್ಟಿತ್ತು. ಆದರೆ ಅದು ಪ್ರಸ್ತಕ ಆರ್ಥಿಕ ವರ್ಷ 2019-20ರ ಮೊದಲ ತ್ರೈಮಾಸಿಕದಲ್ಲಿ ಶೇ.5ಕ್ಕೆ ಮತ್ತು ದ್ವಿತೀಯ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಇಳಿದಿದೆ. ಡಬ್ಲ್ಯುಇಎಫ್‌ನ ವರದಿಯಲ್ಲಿ 2019ರ ಭಾರತದ ಜಿಡಿಪಿ ಬೆಳವಣಿಗೆಯ ದರವು ಸುಮಾರು 7.5%ರಷ್ಟಿರುತ್ತದೆ ಎಂದು ಅಂದಾಜಿಸಲಾಗಿತ್ತು. ಜಾಗತಿಕ ಆರ್ಥಿಕ ಬೆಳವಣಿಗೆಯ ಪ್ರಮುಖ ಭಾಗವಾಗಿ ಭಾರತದ ಆರ್ಥಿಕ ಬೆಳವಣಿಗೆ ಮುಂದುವರೆಯುವುದರಿಂದ ಈ ಜಿಡಿಪಿ ನಿರೀಕ್ಷಿತ ಎಂದು ವರದಿ ತಿಳಿಸಿತ್ತು. ಅವರ ವರದಿಗೆ ವ್ಯತಿರಿಕ್ತವಾಗಿ, 2019-20ನೇ ಸಾಲಿನಲ್ಲಿ ಶೇ.5ಕ್ಕಿಂತ ಕಡಿಮೆ ಜಿಡಿಪಿ ಬೆಳವಣಿಗೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಜಾಗತಿಕ ಅಂಶಗಳ ಹೊರತಾಗಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಬಂಧಿತ ವಿಷಯಗಳು, ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲದ ಪ್ರಮಾಣ ಸುಮಾರು 10 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿರುವುದು, ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿನ ಆರ್ಥಿಕ ಬಿಕ್ಕಟ್ಟು (ಎನ್‌ಬಿಎಫ್‌ಸಿ), ಸ್ಥಿರ ಕೃಷಿ ಮತ್ತು ಗ್ರಾಮೀಣ ಆದಾಯ ಕುಸಿತ ಸೇರಿದಂತೆ ಕೆಲವು ಆಂತರಿಕ ಅಂಶಗಳು ಕಳೆದ ಒಂದು ವರ್ಷದಲ್ಲಿನ ದೇಶದ ಮಂದಗತಿಯ ಆರ್ಥಿಕ ಬೆಳವಣಿಗೆಗೆ ಪ್ರಮುಖ ಕಾರಣವಾಗಿವೆ. ಭಾರತೀಯ ಆರ್ಥಿಕತೆಯು ತೀವ್ರ ನಿಗಾ ಘಟಕದಲ್ಲಿದೆ (ಐಸಿಯು). ಆದಾಗ್ಯೂ ಆರ್ಥಿಕತೆಯ ಬಗ್ಗೆ ದೇಶದ ಯಾರೊಬ್ಬರು ಭಯಪಡಬೇಕಾಗಿಲ್ಲ. ಏಕೆಂದರೆ ಅದು ನಿಧಾನಗತಿಯೇ ಹೊರತು, ಆರ್ಥಿಕ ಹಿಂಜರಿತವಲ್ಲ. ಒಂದು ವರ್ಷ ಅಥವಾ ನಂತರ ಅವಧಿಯಲ್ಲಿ ನಾವು ಈ ಕುಂಠಿತ ಬೆಳವಣಿಗೆಯಿಂದ ಮರು ಚೇತರಿಕೆ ಹೊಂದಬಹುದು ಎಂದು ಕೆಲವು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ.

ಮೊದಲಿಗೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ವಲಯದಲ್ಲಿರುವ ಸವಾಲಿನತ್ತ ಒಮ್ಮೆ ದೃಷ್ಟಿ ಹಾಯಿಸೋಣ. 2017-18ರ ಎನ್‌ಎಸ್‌ಎಸ್‌ಒ ವರದಿಯ ಬಿಡುಗಡೆಯೊಂದಿಗೆ ದೇಶದಲ್ಲಿನ ಉದ್ಯೋಗದ ಸ್ಥಿತಿಗತಿಯ ಕುರಿತು ಗಮನಾರ್ಹವಾದ ಸಂಶೋಧನೆಗಳು ನಡೆದಿವೆ. ದೇಶದ ನಿರುದ್ಯೋಗವು 2017-18ರಲ್ಲಿ 6.1%ಕ್ಕೆ ತಲುಪಿದ್ದು, ಇದು 45 ವರ್ಷಗಳ ಗರಿಷ್ಠ ಕುಸಿತ ಎನ್ನಲಾಗಿದೆ. ಅದೇ ಸಮಯದಲ್ಲಿ, ಜನರು ಕೆಲಸದಲ್ಲಿ ಭಾಗವಹಿಸುವಿಕೆಯ ದರಗಳು ವಿಶೇಷವಾಗಿ ಮಹಿಳೆಯರು ಕೆಲಸದಲ್ಲಿ ಪಾಲ್ಗೊಳ್ಳುವ ದರ ಕಡಿಮೆಯಾಗಿದೆ. ಇದು 2004-05ರಲ್ಲಿ 42% ರಿಂದ 2017-18ರಲ್ಲಿ 22% ಕ್ಕೆ ಇಳಿದಿದೆ. ಇನ್ನು, ಶೇ.85 ರಿಂದ 90ರಷ್ಟು ಕಾರ್ಮಿಕರು ಅನೌಪಚಾರಿಕ ವಲಯದಲ್ಲಿದ್ದಾರೆ. ಅಂದರೆ ಮಾಡುವ ಕೆಲಸಕ್ಕೆ ಅಗತ್ಯ ತರಬೇತಿಯನ್ನೇ ಹೊಂದಿಲ್ಲ. ಆದ್ದರಿಂದ, ಸರ್ಕಾರವು ಔಪಚಾರಿಕ ವಲಯವನ್ನು ವಿಸ್ತರಿಸುವತ್ತ ಗಮನಹರಿಸಬೇಕು ಮತ್ತು ಏಕಕಾಲದಲ್ಲಿ ಅನೌಪಚಾರಿಕ ವಲಯದ ಉತ್ಪಾದಕತೆಯನ್ನು ಹೆಚ್ಚಿಸಬೇಕು.

ದೇಶದಲ್ಲಿ ಜನಸಂಖ್ಯೆಯನ್ನು ಪರಿಗಣಿಸಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಕ್ಷೇತ್ರಕ್ಕೆ ಸೇರುತ್ತಿದ್ದಾರೆ ಎಂಬುದು ತಿಳಿದಿದೆ. ಉಳಿದ ಭಾಗವು ವಯಸ್ಸಾಗುತ್ತಿರುವ, ನಿವೃತ್ತರ, ನಿರುದ್ಯೋಗಿಗಳ ಪಡೆಯಾಗಿದೆ. ಯಾವುದೇ ದೇಶದಲ್ಲಿ ಜನರಿಗೆ ಸೂಕ್ತ ಉದ್ಯೋಗ, ಶಿಕ್ಷಣ ಮತ್ತು ಕೌಶಲ್ಯಗಳನ್ನು ಒದಗಿಸಿದರೆ ಮಾತ್ರ ಜನಸಂಖ್ಯಾ ಲಾಭಾಂಶವನ್ನು ಸಾಧಿಸಲಾಗುತ್ತದೆ. ಆದಾಗ್ಯೂ, ರಾಜ್ಯದಿಂದ ರಾಜ್ಯಕ್ಕೆ ಲಾಭಾಂಶ ಭಿನ್ನವಾಗಿದೆ – ವಯಸ್ಸಾದವರ ಪ್ರಮಾಣ ದಕ್ಷಿಣಕ್ಕೆ ಹೋಲಿಸಿದರೆ, ಇದು ಉತ್ತರಕ್ಕೆ ಹೆಚ್ಚಾಗಿದೆ. ಕಾರ್ಮಿಕರ ಕೌಶಲ್ಯ ಕೊರತೆ ಎಲ್ಲರಿಗೂ ತಿಳಿದಿದೆ. ಇತರ ದೇಶಗಳಲ್ಲಿ 70% ರಿಂದ 80% ರಷ್ಟು ಕಾರ್ಮಿಕರು ತಾವು ಕೆಲಸ ಮಾಡುವ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ. ಆದರೆ ಭಾರತೀಯ ಕಾರ್ಮಿಕರಲ್ಲಿ ಕೇವಲ 2.3% ಮಾತ್ರ ಔಪಚಾರಿಕ ಕೌಶಲ್ಯ ತರಬೇತಿಯನ್ನು ಹೊಂದಿದ್ದಾರೆ ಎಂದು ನೀತಿ ಆಯೋಗದ ಸಂಶೋಧನಾ ವರದಿ ಹೇಳುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಪ್ರಗತಿ ನಿಧಾನವಾಗಿದೆ. ಕಾರ್ಮಿಕ ಕ್ಷೇತ್ರದಲ್ಲಿ ಕೌಶಲ್ಯ ಭರಿತ ಕಾರ್ಮಿಕರ ಕೊರತೆಯೂ ನಿರುದ್ಯೋಗ ಸಮಸ್ಯೆಗೆ ಬಲವಾದ ಕಾರಣವಾಗಿದೆ.

ಭಾರತದ ಕೌಶಲ್ಯ ಅಭಿವೃದ್ಧಿಯ ಪ್ರದೇಶವಾರು ಚಿತ್ರಣವು ಕೆಲವು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಸಾಂಸ್ಥಿಕ ಚೌಕಟ್ಟನ್ನು ರಾಷ್ಟ್ರೀಯ ಮಟ್ಟದಲ್ಲಿ ಹಾಕಲಾಗಿದೆ. ಕೌಶಲ್ಯ ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಹೆಚ್ಚಿನ ಭಾಗವಹಿಸುವಿಕೆಗಾಗಿ ಖಾಸಗಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ರಾಜ್ಯ ಸರ್ಕಾರದ ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಗಳನ್ನು ರಚಿಸಲಾಗುತ್ತಿದೆ ಮತ್ತು 17 ಕೇಂದ್ರ ಸಚಿವಾಲಯಗಳು ಕೌಶಲ್ಯಕ್ಕೆ ಉಪಕ್ರಮಗಳನ್ನು ಕೈಗೊಂಡಿವೆ. ಜನರ ಕೌಶಲ್ಯ ಸುಧಾರಣೆಗೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಸಂಬಂಧಪಟ್ಟ ಎಲ್ಲ ಪಾಲುದಾರರಿಂದ ಸಮಾನ ಭಾಗವಹಿಸುವಿಕೆಯೂ ಮುಖ್ಯವಾಗುತ್ತದೆ. ತಳಮಟ್ಟದಲ್ಲಿ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವ ಅವಶ್ಯಕತೆಯಿದೆ.

ಕೌಶಲ್ಯಾಭಿವೃದ್ಧಿಯಲ್ಲಿ ಚೀನಾದ ಅನುಭವವು ಭಾರತಕ್ಕೆ ಕೆಲವು ಪಾಠಗಳನ್ನು ಕಲಿಸಬಹುದು. ಚೀನಾದಲ್ಲಿ 1996ರಲ್ಲಿ ವೃತ್ತಿಪರ ಶಿಕ್ಷಣ ಕಾನೂನು ಜಾರಿಗೆ ತರಲಾಯಿತು. ಇದು ಚೀನಾದ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ (ಟಿವಿಇಟಿ) ವ್ಯವಸ್ಥೆಗೆ ಒಂದು ಹೆಗ್ಗುರುತಾಗಿದೆ. ಚೀನಾದ ಆರ್ಥಿಕತೆಗೆ ವಿಭಿನ್ನವಾದ ಹಲವು ವೈಶಿಷ್ಟ್ಯಗಳಿವೆ. ಅದರಲ್ಲಿ ಈ ಕ್ರಮ ಸ್ಥಳೀಯ ಮಟ್ಟದಲ್ಲಿ ಕೌಶಲ್ಯಾಭಿವೃದ್ಧಿ ಉಪಕ್ರಮಗಳನ್ನು ಕಾರ್ಯಗತಗೊಳಿಸಲು ಕುಶಲತೆ ಮತ್ತು ಹೊಸತನವನ್ನು ಒದಗಿಸಿತು. ಸ್ಥಳೀಯ ಉದ್ಯಮಗಳ ಭಾಗವಹಿಸುವಿಕೆಯೊಂದಿಗೆ ಕೈಗಾರಿಕಾ ಪ್ರಕ್ರಿಯೆಯೊಂದಿಗೆ ಶಿಕ್ಷಣ ಮತ್ತು ತರಬೇತಿಯನ್ನು ಸಂಯೋಜಿಸುವ ನಿಯಮವನ್ನು ಈ ಕಾನೂನು ಹೊಂದಿದೆ. ಇದಲ್ಲದೆ, ಇದು ವಯಸ್ಕರಿಗೆ ತರಬೇತಿ ನೀಡುವುದರ ಜೊತೆಗೆ ವೃತ್ತಿಪರ ಶಿಕ್ಷಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತರಬೇತಿಯನ್ನು ನೀಡುತ್ತದೆ. ಅನೇಕ ಇತರ ದೇಶಗಳು ತಮ್ಮ ದೇಶಗಳಲ್ಲಿ ವೃತ್ತಿಪರ ಶಿಕ್ಷಣ ಮತ್ತು ತರಬೇತಿಗೆ ಕಾನೂನು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಇಂತಹ ಕಾರ್ಯವನ್ನು ಹೊಂದಿವೆ (ಉದಾಹರಣೆಗೆ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಜರ್ಮನಿ). ಇದೇ ರೀತಿಯ ಕಾರ್ಯವು ಭಾರತದಲ್ಲಿ ಆಗಬೇಕಿದೆ. ಕೌಶಲ್ಯ ಅಭಿವೃದ್ಧಿ ವ್ಯವಸ್ಥೆಯ ಈ ರೀತಿಯ ಎಲ್ಲಾ ಕಾನೂನುಗಳ ಮೇಲೆ ಕೇಂದ್ರೀಕರಿಸಬೇಕು. ಪಠ್ಯದ ಭಾಗವಾಗಬೇಕು. ಒಂದು ಕಡೆ ಕೇಂದ್ರ ಮತ್ತು ರಾಜ್ಯದ ನಿರ್ದಿಷ್ಟ ಜವಾಬ್ದಾರಿಗಳನ್ನು ತಿಳಿಸುವುದರ ಜೊತೆಗೆ ಕೌಶಲ್ಯವನ್ನು ಒದಗಿಸುವ ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಒದಗಿಸಬೇಕು.

ಕೌಶಲ್ಯ ಅಭಿವೃದ್ಧಿಯ ಮತ್ತೊಂದು ವಿಷಯವೆಂದರೆ ದಕ್ಷಿಣ ಕೊರಿಯಾದಂತಹ ದೇಶಗಳು ಉತ್ತಮ ಗುಣಮಟ್ಟದ ಸಾಮಾನ್ಯ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಹೆಚ್ಚಿಸಿವೆ. ಆದ್ದರಿಂದ, ಕೌಶಲ್ಯ ಅಭಿವೃದ್ಧಿಯನ್ನು ಉಳಿಸಿಕೊಳ್ಳಲು ಭಾರತೀಯ ಜನತೆಗೆ ಗುಣಮಟ್ಟದ ಸಾಮಾನ್ಯ ಶಿಕ್ಷಣವನ್ನು ಒದಗಿಸಬೇಕಾಗಿದೆ.

ದೇಶದ ಆರ್ಥಿಕ ಪ್ರಗತಿಯಲ್ಲಿ ಗಮನಿಸಬೇಕಾದ ಎರಡನೇ ಸವಾಲು ಗ್ರಾಮೀಣ ಭಾರತದ ಸಾಮಾಜಿಕ ಆರ್ಥಿಕ ಸೇರ್ಪಡೆ. ಕಳೆದ ಒಂದು ವರ್ಷದಲ್ಲಿ ಗ್ರಾಮೀಣ ಆದಾಯ ಮತ್ತು ವೇತನದಲ್ಲಿ ಕುಸಿತ ಕಂಡಿದೆ. ವಿಶೇಷವಾಗಿ ಮೂಲಸೌಕರ್ಯ, ಅಂತರ್ಜಾಲ ಸೇರಿದಂತೆ ಡಿಜಿಟಲೀಕರಣ ಮತ್ತು ಆರ್ಥಿಕ ಸೇರ್ಪಡೆಯ ವಿಷಯದಲ್ಲಿ ಗ್ರಾಮೀಣ / ಅರೆ ನಗರ ಮತ್ತು ನಗರ ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ. ಮೂಲಸೌಕರ್ಯಕ್ಕಾಗಿ ಐದು ವರ್ಷಗಳಲ್ಲಿ 100 ಲಕ್ಷ ಕೋಟಿ ರೂ. ಘೋಷಣೆ ಈ ನಿಟ್ಟಿನಲ್ಲಿ ಒಂದು ಪ್ರಮುಖ ಕ್ರಮವಾಗಿದೆ. ಆದಾಗ್ಯೂ, ಇದರ ಸದ್ಬಳಕೆಗೆ ಸರಿಯಾದ ವಿವರಗಳನ್ನು ರೂಪಿಸಬೇಕಾಗಿದೆ. 100 ಲಕ್ಷ ಕೋಟಿ ರೂ. ಖರ್ಚು ಮಾಡಲು ಪ್ರಾರಂಭಿಸಿದಾಗ ಸರ್ಕಾರ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳತ್ತ ಹೆಚ್ಚು ಗಮನ ಹರಿಸಬೇಕು.

ಕಳೆದ ಕೆಲವು ವರ್ಷಗಳಲ್ಲಿ, ಎಲ್‌ಪಿಜಿ ಸಂಪರ್ಕ (ಉಜ್ವಲಾ ಯೋಜನೆ), ವಿದ್ಯುತ್ ಒದಗಿಸುವುದು (ಸೌಭಾಗ್ಯ ಯೋಜನೆ), ಸ್ವಚ್ ಭಾರತ್ ಅಭಿಯಾನದಂತಹ ಕಾರ್ಯಕ್ರಮಗಳು, ದುರ್ಬಲ ವರ್ಗಗಳಿಗೆ ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡುವಲ್ಲಿ ಯಶಸ್ವಿಯಾಗಿವೆ. ಸೌದೆ ಒಲೆ ಮತ್ತು ಇತರ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದ್ದ ಗ್ರಾಮೀಣ ಭಾಗಕ್ಕೆ ಅಡುಗೆ ಅನಿಲ ಲಭ್ಯತೆಯನ್ನು ಒದಗಿಸುವಲ್ಲಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಿದೆ. 2019ರ ಬಜೆಟ್ 2022ರ ವೇಳೆಗೆ ಪ್ರತಿಯೊಂದು ಕುಟುಂಬಕ್ಕೂ ವಿದ್ಯುತ್ ಮತ್ತು ಸ್ವಚ್ಛ ಅಡುಗೆ ಸೌಲಭ್ಯವನ್ನು ಒದಗಿಸುತ್ತದೆ ಎಂದು ಸೂಚಿಸುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ನಾವು ಈ ಪ್ರಗತಿಯನ್ನು ನೋಡಬೇಕಾಗಿದೆ.

ಮಾಹಿತಿ ತಂತ್ರಜ್ಞಾನವು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಆರ್ಥಿಕ ಸೇರ್ಪಡೆಯ ಮತ್ತೊಂದು ಮೂಲವಾಗಿದೆ. ಸರ್ಕಾರವು ಪ್ರಾರಂಭಿಸಿದ ಡಿಜಿಟಲ್ ಇಂಡಿಯಾ ಸೇವೆಗಳು ವಿದ್ಯುನ್ಮಾನವಾಗಿ ಮತ್ತು ಅಂತರ್ಜಾಲ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಅಥವಾ ದೇಶವನ್ನು ಡಿಜಿಟಲ್ ಸಬಲೀಕರಣಗೊಳಿಸುವ ಮೂಲಕ ನಾಗರಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತದೆ. ಈ ಉಪಕ್ರಮವು ಗ್ರಾಮೀಣ ಪ್ರದೇಶಗಳನ್ನು ಹೆಚ್ಚಿನ ವೇಗದ ಇಂಟರ್ನೆಟ್ ನೆಟ್‌ವರ್ಕ್‌ಗಳೊಂದಿಗೆ ಸಂಪರ್ಕಿಸುವ ಯೋಜನೆಗಳನ್ನು ಒಳಗೊಂಡಿದೆ. ಮೊಬೈಲ್ ಸಂಪರ್ಕದಲ್ಲಿ ಗಮನಾರ್ಹ ಪ್ರಗತಿಯಾಗಿದೆ. ಆದರೆ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಬಳಕೆ ಇನ್ನೂ ಒಂದು ಸಮಸ್ಯೆಯಾಗಿಯೇ ಉಳಿದಿದೆ. ಇದರ ಪರಿಹಾರದತ್ತ ದೃಷ್ಟಿ ಹಾಯಿಸುವುದು ಅವಶ್ಯ. ದೇಶದ ಪ್ರತಿಯೊಬ್ಬರಿಗೂ ಇಂಟರ್‌ನೆಟ್‌ ಲಭ್ಯವಾಗುವಂತಹ ಉಪಕ್ರಮಗಳನ್ನು ರೂಪಿಸಬೇಕು.

ವಿತ್ತೀಯ ಸೇರ್ಪಡೆಗೆ ಸಂಬಂಧಿಸಿದಂತೆ ಗಮನಿಸಿದರೆ, ಪ್ರಧಾನ್ ಮಂತ್ರಿ ಧನ್ ಯೋಜನೆ ದೇಶದಲ್ಲಿ ಆರ್ಥಿಕ ಸೇರ್ಪಡೆಗೆ ಗಮನಾರ್ಹ ಕೊಡುಗೆ ನೀಡಿದೆ. ಪಿಎಂಜೆಡಿವೈ ಅಡಿಯಲ್ಲಿ ತೆರೆಯಲಾದ ಒಟ್ಟು ಖಾತೆಗಳ ಸಂಖ್ಯೆ 2019ರ ಸೆಪ್ಟೆಂಬರ್‌ನಲ್ಲಿ 1.02 ಲಕ್ಷ ಕೋಟಿ ಠೇವಣಿಯೊಂದಿಗೆ 37.1 ಕೋಟಿಗೆ ಏರಿದೆ. ಈ ಖಾತೆಗಳಲ್ಲಿ 59% ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದಾಗ್ಯೂ, ಈ ಖಾತೆಗಳ ಬಳಕೆಯು ಕಳೆದ ಎರಡು ವರ್ಷಗಳಲ್ಲಿ ಸ್ಥಗಿತಗೊಂಡಿದೆ ಎಂಬುದು ಸರಾಸರಿ ಸಮತೋಲನದಲ್ಲಿನ ಕುಸಿತದಿಂದ ಸ್ಪಷ್ಟವಾಗಿದೆ. ಹಣಕಾಸು ಸೇರ್ಪಡೆ ಸಲಹಾ ಸಮಿತಿಯ ಆಶ್ರಯದಲ್ಲಿ ಭಾರತ 2019-2024ರ ಹಣಕಾಸು ಸೇರ್ಪಡೆಗಾಗಿ ರಾಷ್ಟ್ರೀಯ ಕಾರ್ಯತಂತ್ರವನ್ನು (ಎನ್‌ಎಸ್‌ಎಫ್‌ಐ) ಸಿದ್ಧಪಡಿಸಲಾಗಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸೇರ್ಪಡೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಆಶಿಸೋಣ.

ಮೂರನೆಯ ಸವಾಲು ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯ. ವಿಶ್ವಸಂಸ್ಥೆಯ ಎಸ್‌ಡಿಜಿ ದೃಷ್ಟಿಕೋನದಿಂದ ಇದು ಹೆಚ್ಚು ಮಹತ್ವದ್ದಾಗಿದೆ. ಅನಾರೋಗ್ಯಕರ ಅಥವಾ ಅತಿಯಾದ ಜನಸಂಖ್ಯೆಯೊಂದಿಗೆ ಅಪಾಯಕಾರಿ ದಟ್ಟಣೆ ಮತ್ತು ಮಾಲಿನ್ಯವನ್ನು ಹೊಂದಿರುವ ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚು ತೀವ್ರವಾಗಿದೆ. ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಅಂದಾಜುಗಳು ತೋರಿಸುತ್ತವೆ ಮತ್ತು ಅವು ಭಾರತದಲ್ಲಿ ಸಂಭವಿಸುವ ಸಾವುಗಳಲ್ಲಿ ಶೇ.63ಕ್ಕೆ ಕಾರಣವಾಗಿದೆ ಎಂಬುದು ಆಘಾತಕಾರಿ ಸಂಗತಿ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ)ಯು 5 ಲಕ್ಷದಿಂದ 10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆ ಒದಗಿಸುತ್ತಿದೆ. ಈ ಉದ್ದೇಶಕ್ಕಾಗಿ ನಮಗೆ ಒಂದು ಲಕ್ಷ ಕೋಟಿ ರೂ. ನಿಧಿ ಅಗತ್ಯವಿದೆ. ಆದಾಗ್ಯೂ, ಅಗತ್ಯವಾದ ನಿಧಿಗೆ ಹೋಲಿಸಿದರೆ, ಪಿಎಂಜೆಎವೈಗೆ ನಿಧಿ ಹಂಚಿಕೆ ಕ್ಷುಲ್ಲಕವೆಂದು ತೋರುತ್ತದೆ. ಆರೋಗ್ಯ ವಿಮೆಯು ಆರೋಗ್ಯ ರಕ್ಷಣೆಯ ಪ್ರಮುಖ ಅಂಶವಾಗಿದೆ ಎಂಬುದು ನಿಜ. ಆದರೆ, ಸಾರ್ವತ್ರಿಕ ಆರೋಗ್ಯ ರಕ್ಷಣೆ ಗುರಿಯಾಗಿರಬೇಕು. ಸಾರ್ವತ್ರಿಕ ಆರೋಗ್ಯ ರಕ್ಷಣೆಯತ್ತ ಸಾಗಲು ಸಾರ್ವಜನಿಕ ಆರೋಗ್ಯ ವೆಚ್ಚದಲ್ಲಿ ಭಾರಿ ಹೆಚ್ಚಳ ಮತ್ತು ಪ್ರಾಥಮಿಕ ಆರೋಗ್ಯ ಮೂಲಸೌಕರ್ಯಗಳ ಆಮೂಲಾಗ್ರ ಬದಲಾವಣೆ ಅಗತ್ಯವಾಗಿದೆ, ಇದು ಎಲ್ಲರಿಗೂ ಪ್ರವೇಶಿಸಬಹುದಾದ, ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸಬೇಕು. ದೇಶದಲ್ಲಿ ಇಂದು ಹಲವರ ಪಾಲಿಗೆ ಆರೋಗ್ಯ ಆರೈಕೆ ದುಬಾರಿಯಾಗಿದೆ ಮತ್ತು ಕೈಗೆಟುಕದಂತಿದೆ ಎಂಬುದು ದುರಂತ.

ಗಾಳಿ ಮತ್ತು ನೀರಿನ ಮಾಲಿನ್ಯ, ತ್ಯಾಜ್ಯ ನಿರ್ವಹಣೆ ಮತ್ತು ನಗರ ದಟ್ಟಣೆಯಲ್ಲಿ ಎದುರಾಗುತ್ತಿರುವ ಬಿಕ್ಕಟ್ಟುಗಳ ಬಗ್ಗೆ ಗಮನ ಹರಿಸುವ ಅವಶ್ಯಕತೆಯಿದೆ. 1974ರಲ್ಲಿನ ಸುಧಾರಣಾ ಪೂರ್ವದ ಅವಧಿ ಪ್ರಾರಂಭವಾಗುವ ಮೊದಲೇ ಭಾರತವು ಪರಿಸರವಾದಕ್ಕೆ ಒತ್ತು ನೀಡಿತ್ತು. ವಿವಿಧ ಕಾಯಿದೆಗಳ ಅಂಗೀಕಾರ ಮತ್ತು ಕ್ರೋಡೀಕರಣದೊಂದಿಗೆ ಪರಿಸರ ರಕ್ಷಣೆ ಕಾಳಜಿಯ ಸುದೀರ್ಘ ಇತಿಹಾಸವನ್ನು ದೇಶ ಹೊಂದಿದೆ. ಇತ್ತೀಚೆಗೆ, ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಲಷಿತವಾಗಿದ್ದ ಗಂಗಾ ನದಿಯನ್ನು ಸ್ವಚ್ಛಗೊಳಿಸಿ ಪುನರ್‌ನಿರ್ಮಾಣ ಮಾಡಿದ ನಮಾಮಿ ಗಂಗಾ ಯೋಜನೆ ಸರ್ಕಾರದ ಉಪಕ್ರಮಗಳಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ಅಲ್ಲದೆ, ದೇಶದಲ್ಲಿ ಅಸ್ತಿತ್ವದಲ್ಲಿರುವ ಪರಿಸರ ನಿಯಮಗಳು ಬೇರೆಡೆ ಇರುವ ಅತ್ಯಂತ ಕಠಿಣ ಕಾನೂನುಗಳಲ್ಲಿ ಸೇರಿವೆ. ಆದಾಗ್ಯೂ, ಅವುಗಳ ಅನುಷ್ಠಾನ ಮತ್ತು ಜಾರಿಗೊಳಿಸುವಿಕೆಯು ಅಸಮರ್ಪಕವಾಗಿದೆ. ಇದು ವಾಯು ಮತ್ತು ನೀರಿನ ಮಾಲಿನ್ಯ ಸೇರಿದಂತೆ ಪರಿಸರದ ನಿರಂತರ ಹದಗೆಡುವಿಕೆಗೆ ಕಾರಣವಾಗಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಬೆಳೆ ಅವಶೇಷಗಳನ್ನು ಸುಡುವುದರಿಂದ ದೆಹಲಿಯ ವಾಯುಮಾಲಿನ್ಯವು ಪ್ರತಿವರ್ಷ ಅಪಾಯಕಾರಿ ಮಟ್ಟ ತಲುಪುತ್ತದೆ. ಇದರ ನಿಯಂತ್ರಣದಲ್ಲಿ ಅಲ್ಲಿನ ಸರ್ಕಾರಗಳು ವಿಫಲವಾಗುತ್ತಿವೆ. ಆದರೆ, ನಾವು ರೈತರಿಗೆ ಈ ಅವಶೇಷಗಳ ವಿಲೇವಾರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಬೇಕಾಗಿದೆ. ಕೈಗಾರಿಕಾ, ವಾಹನ ಮತ್ತು ಕಟ್ಟಡ ನಿರ್ಮಾಣ ಮಾಲಿನ್ಯವು ದೆಹಲಿಯ ವಾಯುಮಾಲಿನ್ಯಕ್ಕೆ ಹೆಚ್ಚು ಕಾರಣವಾಗಿದೆ. ವಾಯುಮಾಲಿನ್ಯ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಕಡಿಮೆ ಮಾಡುವ ಬಗ್ಗೆ ಚೀನಾದ ಬೀಜಿಂಗ್ ಮತ್ತು ಶಾಂಘೈ ನಗರಗಳಿಂದ ನಾವು ಕಲಿಯುವುದು ಸಾಕಷ್ಟಿದೆ.

ಪರಿಸರ ನೀತಿಗಳ ಸೀಮಿತ ಯಶಸ್ಸಿಗೆ ವಿವಿಧ ಕಾರಣಗಳೆಂದರೆ, ಸಾಂಸ್ಥಿಕ ವೈಫಲ್ಯ ಮತ್ತು ಸಾಮಾನ್ಯ ನಿರಾಸಕ್ತಿ. ಮಾಲಿನ್ಯದ ಸಮಸ್ಯೆಗಳಿಗೆ ಜನಸಾಮಾನ್ಯರ “ನನ್ನ ಹಿತ್ತಲಿನಲ್ಲಿಲ್ಲ” ವರ್ತನೆ ಸಮಾನವಾಗಿ ಕಾರಣವಾಗಿದೆ. ಪರಿಸರ ರಕ್ಷಣೆ ನನ್ನ ಮೂಲಭೂತ ಕರ್ತವ್ಯ ಎಂಬ ಕಲ್ಪೊನೆ ಜನರಿಗಿಲ್ಲ. ಎಲ್ಲೆಂದರೆ ಕಸ ಎಸೆಯುವುದು, ನೀರು ಮಲಿನಗೊಳಿಸುವುದನ್ನು ಜನ ಮಾಡುತ್ತಿದ್ದಾರೆ. ಒಂದೆಡೆ, ನಿಯಂತ್ರಕ ಅಧಿಕಾರಿಗಳು, ಸಕ್ರಿಯವಾದ ಪಾತ್ರವನ್ನು ವಹಿಸುವ ಮೂಲಕ ‘ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ’ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಮತ್ತೊಂದೆಡೆ, ಜನಸಾಮಾನ್ಯರು ಪರಸ್ಪರ ಸಹಕರಿಸಬೇಕು ಮತ್ತು ಪರಿಸರ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ತಮ್ನನ್ನು ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಳ್ಳಬೇಕು.

ಅಂತಿಮವಾಗಿ, ಕಳೆದ ಒಂದು ವರ್ಷದಲ್ಲಿ, ಬಳಕೆಯ ಬೆಳವಣಿಗೆ ಸೇರಿದಂತೆ ಆರ್ಥಿಕ ಬೆಳವಣಿಗೆ ಕುಸಿದಿದೆ. ವಿಶ್ವ ಆರ್ಥಿಕ ವರದಿಯಲ್ಲಿ ಉಲ್ಲೇಖಿಸಲಾದ ಮೂರು ಸವಾಲುಗಳ ಪ್ರಗತಿಯು ಮಿಶ್ರವಾಗಿದೆ. ಉದ್ಯೋಗದ ಪರಿಸ್ಥಿತಿಯಲ್ಲಿ ಕ್ಷೀಣತೆ ಮತ್ತು ನಿರುದ್ಯೋಗ ಹೆಚ್ಚಳವಾಗಿದ್ದರೆ ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ನಿಬಂಧನೆ, ವಿದ್ಯುತ್ ಹೆಚ್ಚಳ, ಆರ್ಥಿಕ ಸೇರ್ಪಡೆ ಮತ್ತು ಮುಕ್ತ ಮಲವಿಸರ್ಜನೆ ಕಡಿಮೆಯಾಗಿದೆ. ಆರೋಗ್ಯ ಕ್ಷೇತ್ರವು ಗಮನ ಸೆಳೆಯುತ್ತಿದೆ ಆದರೆ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚುತ್ತಿವೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಅಗತ್ಯವಿದೆ. ಪರಿಸರ ಮತ್ತು ಮಾಲಿನ್ಯದ ಮಟ್ಟಗಳು ಏರುತ್ತಿರುವಂತೆ ತೋರುತ್ತದೆಯಾದರೂ ಅದೇ ಸಮಯದಲ್ಲಿ ಜಾಗೃತಿ ಹೆಚ್ಚುತ್ತಿದೆ. ಭಾರತವು ದೊಡ್ಡ ದೇಶವಾಗಿದ್ದು, ಸಮಸ್ಯೆಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾಗುತ್ತವೆ. ಆದ್ದರಿಂದ, ಈ ಮೂರು ನಿರ್ಣಾಯಕ ಸವಾಲುಗಳನ್ನು ಎದುರಿಸಲು ಕೇಂದ್ರ ಮಟ್ಟದ ಹೊರತಾಗಿ, ರಾಜ್ಯ ಮಟ್ಟದ ನೀತಿಗಳು ಮತ್ತು ಕ್ರಮಗಳು ಅಗತ್ಯ. ಬಳಕೆ, ಬೆಳವಣಿಗೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಈ ಸವಾಲುಗಳ ಗುರಿಗಳನ್ನು ಸಾಧಿಸಲು ಮಧ್ಯಮ ಅವಧಿಯ ಯೋಜನೆ ಅಗತ್ಯವಿದೆ. ಕೃಷಿ ಅಭಿವೃದ್ಧಿಯ ಸವಾಲನ್ನು ಮೇಲಿನ ಮೂರು ಸವಾಲುಗಳಿಗೆ ಸೇರಿಸಬೇಕಾಗಿರುವುದರಿಂದ ಕೃಷಿ ಆದಾಯವು ಬಳಕೆಗೆ ಮುಖ್ಯವಾಗಿದೆ.

-ಎಸ್.ಮಹೇಂದ್ರ ದೇವ್, ಉಪಕುಲಪತಿ, ಐಜಿಐಡಿಆರ್

Last Updated : Dec 30, 2019, 7:14 AM IST

ABOUT THE AUTHOR

...view details