ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಇಂದು ಬಜೆಟ್ ಪೂರ್ವ ಸಭೆ ನಡೆಯಿತು. ಸಭೆಯಲ್ಲಿ ಮೂಲಸೌಕರ್ಯಗಳ ಯೋಜನೆ ತ್ವರಿತಗೊಳಿಸಲು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಸಂಗ್ರಹಿಸಲು ಕೇಂದ್ರ ಸರ್ಕಾರವು ಹೆಚ್ಚಿನ ಅನುದಾನ ನೀಡಬೇಕೆಂದು ವಿವಿಧ ರಾಜ್ಯಗಳು ಆಗ್ರಹಿಸಿವೆ.
ಈ ವೇಳೆ ದೆಹಲಿಯ ಹಣಕಾಸು ಸಚಿವ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾತನಾಡಿ, 2001ರಿಂದ ಇಲ್ಲಿಯವರೆಗೆ ದೆಹಲಿಗೆ ಕೇಂದ್ರದಿಂದ 325 ಕೋಟಿ ರೂಗಳನ್ನು ಮಾತ್ರ ನೀಡಲಾಗುತ್ತಿದೆ. ಆದರೆ ಈ ಬಾರಿ ದೆಹಲಿ ಸೇರಿದಂತೆ ರಾಜ್ಯದ ಇತರ ಮಹಾನಗರ ಪಾಲಿಕೆ ಹಾಗೂ ಯು.ಟಿಗಳಿಗೆ 8,150 ಕೋಟಿ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟರು.
ಇದೇ ವೇಳೆ ಕೇಂದ್ರ ಸರ್ಕಾರವು ಹುಲ್ಲು ಸುಡುವ (ಧಾನ್ಯಗಳನ್ನು ಬೆಳೆದ ನಂತರ ಉಳಿದಿರುವ ಒಣಹುಲ್ಲಿಗೆ ಬೆಂಕಿ ಹಚ್ಚುವುದು) ಉತ್ತರ ಪ್ರದೇಶ, ಹರಿಯಾಣ ರಾಜ್ಯದ ರೈತರ ಬಗ್ಗೆ ನಿರ್ದಿಷ್ಟವಾದ ನೀತಿ ಜಾರಿಗೆ ತರುವುದು ಹಾಗೂ ಆ ರೈತರಿಗೆ ಸಬ್ಸಿಡಿ ರೂಪದಲ್ಲಿ ಹಣ ನೀಡಬೇಕೆಂದು ಒತ್ತಾಯಿಸಿದರು.
ಹಿಮಾಚಲ ಪ್ರದೇಶದ ಕೈಗಾರಿಕಾ ಸಚಿವ ವಿಕ್ರಮ್ ಸಿಂಗ್ ಮಾತನಾಡಿ, ಮೂಲಸೌಕರ್ಯವಿಲ್ಲದೆ ರಾಜ್ಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸ್ಥಗಿತಗೊಂಡಿರುವ ರೈಲ್ವೆ ಯೊಜನೆಗಳಿಗೆ ಮತ್ತು ರಸ್ತೆ ಮಾರ್ಗಗಳಿಗೆ ಪಿಎಂಜಿಎಸ್ವೈ ಅಡಿಯಲ್ಲಿ ಹಣವನ್ನು ನೀಡಬೇಕು ಎಂದು ಕೋರಿದರು.