ಕರ್ನಾಟಕ

karnataka

'ಆರ್ಥಿಕ ಅಸಮಾನತೆ'ಯಲ್ಲಿ ಶತಮಾನಗಳಿಂದ ಬೇಯುತ್ತಿರುವ ಬಡವ: ಸರ್ಕಾರಗಳೇಕೆ ಕುರುಡಾಗಿವೆ?

By

Published : Aug 1, 2020, 10:03 PM IST

ಸ್ವಾತಂತ್ರ್ಯ ಬಂದು 73 ವರ್ಷಗಳ ನಂತರವೂ ಭಾರತದಲ್ಲಿ ಆರ್ಥಿಕ ಅಸಮಾನತೆ ಇನ್ನೂ ಜೀವಂತವಾಗಿದೆ. ಅಧಿಕಾರಕ್ಕೆ ಬಂದ ಸರ್ಕಾರಗಳು 'ಕಲ್ಯಾಣ ರಾಜ್ಯ'ದ ಮೂಲ ತತ್ವಗಳನ್ನು ನಿರ್ಲಕ್ಷಿಸಿವೆ. ಸಮಾನ ಉದ್ಯೋಗಾವಕಾಶ ಮತ್ತು ಸಂಪತ್ತಿನ ಹಂಚಿಕೆಯಂತಹದ್ದು ಮುಖ್ಯವಾಗಿದೆ. ಭಾರತದಲ್ಲಿನ ಸಾಮಾಜಿಕ ಕಲ್ಯಾಣ ಯೋಜನೆಗಳು ತಪ್ಪು ನಿರ್ವಹಣೆ, ಭ್ರಷ್ಟಾಚಾರ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ವಿಫಲಗೊಳ್ಳುತ್ತಿವೆ. ಸರ್ಕಾರದ ಯೋಜನೆಗಳು ಜನರ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಕೊಡುಗೆ ನೀಡಿದಾಗ ಮಾತ್ರವೇ ಕಲ್ಯಾಣ ರಾಜ್ಯ ಸಾಕಾರಗೊಳ್ಳುತ್ತದೆ.

ECONOMIC INEQUALITY
ಆರ್ಥಿಕ ಅಸಮಾನತೆ

ಕೊರೊನಾ ವೈರಸ್ ಸಾಂಕ್ರಾಮಿಕವು ಪ್ರಪಂಚದಾದ್ಯಂತ ತನ್ನ ಕೋಪದ ಪ್ರತಾಪ ತೋರುತ್ತಿದೆ. ಇಂದು ಅದು ಎಷ್ಟರ ಮಟ್ಟಿಗೆ ಕೆಟ್ಟದಾಗಿದೆ ಎಂದರೆ ಕಾಲರಾ, ಪ್ಲೇಗ್, ದಡಾರ, ಪೋಲಿಯೊ, ಎನ್ಸೆಫಾಲಿಟಿಸ್, ಸಿಡುಬು, ಸಾರ್ಸ್​, ಎಬೋಲಾದಂತಹ ಮಾರಕ ಸಾಂಕ್ರಾಮಿಕ ರೋಗಗಳು ಸಹ ಕಣ್ಮರೆಯಾಗಿವೆ. ಈ ಮಧ್ಯೆ ಜನರ ಮತ್ತು ಅವರ ಜೀವನೋಪಾಯದ ಮೇಲೆ ಸಾಂಕ್ರಾಮಿಕ ಪರಿಣಾಮ ಬೀರದಂತೆ ತಡೆಯಲು ಸರ್ಕಾರಗಳು ಪಟ್ಟುಬಿಡದೆ ಕೆಲಸ ಮಾಡಬೇಕಿದೆ. ನಾಯಕರು ಮತ್ತೊಂದು ಸಾಂಕ್ರಾಮಿಕ ರೋಗವಾದ 'ಆರ್ಥಿಕ ಅಸಮಾನತೆ'ಯ ಮೇಲೂ ತಮ್ಮ ಗಮನ ಕೇಂದ್ರೀಕರಿಸಬೇಕಿದೆ. ಇದು ನಿರ್ಣಾಯಕ ಸಮಯವಾಗಿದ್ದು, ಇದೊಂದು ಶತಮಾನಗಳಿಂದ ಮನುಷ್ಯರನ್ನು ಪೀಡಿಸುತ್ತಿರುವ ರೋಗವಾಗಿದೆ.

ಕೋವಿಡ್​-19 ಸೋಂಕಿನಂತೆ ಸ್ಪ್ಯಾನಿಷ್ ಫ್ಲೂ 1920ರಲ್ಲಿ ಜಗತ್ತನ್ನು ಬೆಚ್ಚಿಬೀಳಿಸಿತ್ತು. ಮಾನವರು ಮತ್ತು ಸಾಂಕ್ರಾಮಿಕ ರೋಗಗಳ ನಡುವಿನ ಹೋರಾಟ ಹೊಸತೇನಲ್ಲ. ಆದರೆ, ಸಾಮಾಜಿಕ ಅಸಮಾನತೆಯು ಕೋಟ್ಯ ತರ ಜನರಿಗೆ ದೊಡ್ಡ ಬೆದರಿಕೆಯಾಗತ್ತಿದೆ. 'ಕಲ್ಯಾಣ ರಾಜ್ಯ' ಎಂಬ ಪರಿಕಲ್ಪನೆಯನ್ನು 1880ರ ದಶಕದಲ್ಲಿ ಜಗತ್ತಿಗೆ ಪರಿಚಯಿಸಲಾಯಿತು. ಎರಡನೆಯ ಮಹಾಯುದ್ಧದ ತರುವಾಯ ಸಾಮಾಜಿಕ ಆರ್ಥಿಕ ಸಂಕಷ್ಟಗಳ ಜೊತೆಗೆ ಕಲ್ಯಾಣ ರಾಜ್ಯದ ಅವಶ್ಯಕತೆ ಬಲವಾಯಿತು.

ಸ್ವಾತಂತ್ರ್ಯ ಬಂದು 73 ವರ್ಷಗಳ ನಂತರವೂ ಭಾರತದಲ್ಲಿ ಆರ್ಥಿಕ ಅಸಮಾನತೆ ಹೆಚ್ಚು ಪ್ರಚಲಿತದಲ್ಲಿದೆ. ಅಧಿಕಾರಕ್ಕೆ ಬಂದ ಸರ್ಕಾರಗಳು 'ಕಲ್ಯಾಣ ರಾಜ್ಯ'ದ ಮೂಲ ತತ್ವಗಳನ್ನು ನಿರ್ಲಕ್ಷಿಸಿವೆ. ಸಮಾನ ಉದ್ಯೋಗಾವಕಾಶ ಮತ್ತು ಸಂಪತ್ತಿನ ಹಂಚಿಕೆಯಂತಹದ್ದು ಮುಖ್ಯವಾಗಿದೆ. ಭಾರತದಲ್ಲಿನ ಸಾಮಾಜಿಕ ಕಲ್ಯಾಣ ಯೋಜನೆಗಳು ತಪ್ಪು ನಿರ್ವಹಣೆ, ಭ್ರಷ್ಟಾಚಾರ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ವಿಫಲಗೊಳ್ಳುತ್ತವೆ. ಸರ್ಕಾರದ ಯೋಜನೆಗಳು ಜನರ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಕೊಡುಗೆ ನೀಡಿದಾಗ ಮಾತ್ರವೇ ಕಲ್ಯಾಣ ರಾಜ್ಯ ಸಾಕಾರಗೊಳ್ಳುತ್ತದೆ.

ಫೋರ್ಬ್ಸ್ ವಾರ್ಷಿಕ ಪಟ್ಟಿಯ ಪ್ರಕಾರ, ಜಗತ್ತಿನಲ್ಲಿ 2,095 ಶತಕೋಟ್ಯಧಿಪತಿಗಳು ಇದ್ದಾರೆ. ಅದರಲ್ಲಿ 102 ಭಾರತೀಯರಿದ್ದಾರೆ. ರಾಷ್ಟ್ರದ ಜನಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆ ತೀರಾ ಚಿಕ್ಕದ್ದು. ಆಕ್ಸ್‌ಫ್ಯಾಮ್ ಇಂಟರ್‌ನ್ಯಾಷನಲ್‌ ವರದಿ ಅನ್ವಯ, ಭಾರತದಲ್ಲಿ 1 ಪ್ರತಿಶತದಷ್ಟು ಶ್ರೀಮಂತರು ಶೇ 73ರಷ್ಟು ಸಂಪತ್ತಿಗೆ ಒಡೆಯರು ಎಂದಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಪರಿಣಾಮವಾಗಿ ಭಾರತದಲ್ಲಿನ ಬಡವರು ಹಸಿವು ಮತ್ತು ಕಾಯಿಲೆಯಿಂದ ಪೀಡಿತರಾಗುತ್ತಿದ್ದಾರೆ.

ದುರದೃಷ್ಟವಶಾತ್, ನಮ್ಮ ಸರ್ಕಾರಗಳು ಜನರಿಗೆ ಮೀನುಗಳನ್ನು ಹೇಗೆ ಹಿಡಿಯಬೇಕು ಎಂಬುದನ್ನು ಕಲಿಸುವ ಬದಲು, ಮೇಲ್ನೋಟದ ಯೋಜನೆಗಳ ಮುಖೇನ ಅವರಿಗೆ ಮೀನು ನೀಡುತ್ತಿವೆ. ರಾಜಕೀಯ ಪಕ್ಷಗಳು ಕಲ್ಯಾಣ ಯೋಜನೆಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿ ಚುನಾವಣೆಯಿಂದ ಚುನಾವಣೆಗೆ ಜಯಗಳಿಸುತ್ತಿವೆ. ಜನರ ಹಿತದೃಷ್ಟಿ ಬದಿಗಿಟ್ಟು ಚುನಾವಣೆಗಳನ್ನು ಗೆಲ್ಲುವುದೇ ಪಕ್ಷಗಳ ಮೂಲ ಧ್ಯೇಯ ಆಗಿದ್ದರಿಂದ ಬಡವರು ಇನ್ನಷ್ಟು ಕಡು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ.

ವಸಾಹತುಶಾಹಿ ಆಳ್ವಿಕೆಗೆ ಮುನ್ನ ಭಾರತವು ಸ್ವಾವಲಂಬಿ ರಾಷ್ಟ್ರವಾಗಿತ್ತು. ಬ್ರಿಟಿಷರ ಆಡಳಿತ ಮತ್ತು ನಿಯಮಗಳು ನಮ್ಮನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲಗೊಳಿಸಿತ್ತು. ಸ್ವಾತಂತ್ರ್ಯದ ನಂತರ ನಮ್ಮ ಅಗ್ರಗಣ್ಯ ನಾಯಕರು ದೇಶವನ್ನು ಮೇಲೆತ್ತಲು ಹಲವು ನೀತಿಗಳನ್ನು ರೂಪಿಸಿದ್ದರು. ಜನಸಂಖ್ಯೆಯ ಸ್ಫೋಟದೊಂದಿಗೆ 1965ರಲ್ಲಿ ಹಸಿರು ಕ್ರಾಂತಿ ಶುರುವಾಯಿತು. ಇದು ಆಹಾರ ಧಾನ್ಯ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಯಿತು. 1990ರ ದಶಕದಲ್ಲಿ ಭಾರತವು ಪ್ರಮುಖ ಆರ್ಥಿಕ ಸುಧಾರಣೆ ಪರಿಚಯಿಸಿ, ಜಾಗತಿಕ ಮಾರುಕಟ್ಟೆಗಳಿಗೆ ತನ್ನ ಬಾಗಿಲು ತೆರೆಯಿತು.

ಇಷ್ಟೆಲ್ಲ ಆದರೂ ಸ್ವಾವಲಂಬನೆ ಎಂಬುದು ಗಗನ ಕುಸುಮವಾಗಿ ಉಳಿದಿದೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ, ನಮ್ಮ ಆಮದು ಜಿಡಿಪಿಯ ಶೇ 23.64ರಷ್ಟಿದ್ದರೇ ರಫ್ತು ಶೇ 19.74ರಷ್ಟಿದೆ. ನಾವು ಇನ್ನೂ ಔಷಧ, ಎಲೆಕ್ಟ್ರಾನಿಕ್ಸ್, ರಕ್ಷಣಾ ಸಾಮಗ್ರಿ, ಕಚ್ಚಾ ತೈಲ ಮತ್ತು ಅರೆವಾಹಕಗಳಿಗಾಗಿ ಇತರ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಪ್ರಸ್ತುತ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ ಬಳಿಕ ನಮ್ಮ ಆರೋಗ್ಯ ಮತ್ತು ಆರ್ಥಿಕ ವ್ಯವಸ್ಥೆಗಳು ಅಲುಗಾಡಿ ಅಂತಿಮವಾಗಿ ಕುಸಿದಿವೆ. ವಲಸೆ ಕಾರ್ಮಿಕರ ಅವ್ಯವಸ್ಥೆ ಜಾಗತಿಕ ರಂಗದಲ್ಲಿ ನಾಚಿಕೆಗೇಡಿನ ಸಂಗತಿಯಾಗಿದೆ.

ಬ್ರೂಕಿಂಗ್ಸ್ ವಾರ್ಷಿಕ ವರದಿಯ ಪ್ರಕಾರ, 7.30 ಕೋಟಿ ಭಾರತೀಯರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ. ಮಧ್ಯಮ ವರ್ಗದವರೂ ಸಹ ಅದರ ಸುಳಿಯಲ್ಲಿದ್ದಾರೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ವರದಿಯ ಪ್ರಕಾರ, 2019-20ರಲ್ಲಿ ನಿರುದ್ಯೋಗ ದರವು ಶೇ 6.3ಕ್ಕೆ ಏರಿದೆ. ಪ್ರಸ್ತುತ, ಸಂಘಟಿತ ಮತ್ತು ಅಸಂಘಟಿತ ವಲಯಗಳು ಸಮಾನವಾಗಿ ಕುಸಿಯುತ್ತಿದೆ. ಲಕ್ಷಾಂತರ ಜನರು ಉದ್ಯೋಗ ಮತ್ತು ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಆತ್ಮ ನಿರ್ಭಾರ ಭಾರತ ಬದಲಾವಣೆ ತರುತ್ತದೆಯೋ ಎಂದು ನೋಡಬೇಕಾಗಿದೆ. ಉದ್ಯೋಗ, ಆದಾಯ ಮತ್ತು ಖರೀದಿ ಶಕ್ತಿಯ ಸ್ವತಂತ್ರ ನಿಯತಾಂಕಗಳಾಗಿ ಪರಿಗಣಿಸುವವರೆಗೆ ಸ್ವಾವಲಂಬನೆ ಅಸಾಧ್ಯ. ಆದ್ದರಿಂದ ಉದ್ಯೋಗ ಸೃಷ್ಟಿ ಮತ್ತು ಸಂಪತ್ತು ಪುನರ್ವಿತರಣೆಗೆ ಸರ್ಕಾರಗಳು ತನ್ನ ನೀತಿಗಳಲ್ಲಿ ಬದಲಾವಣೆಗಳನ್ನು ಮಾಡುವ ಅವಶ್ಯಕತೆಯಿದೆ. ಕೋವಿಡ್​-19 ಸಾಂಕ್ರಾಮಿಕವು ಬಿಕ್ಕಟ್ಟುಗಳನ್ನು ಪ್ರತಿಬಿಂಬಿಸಲು ಮತ್ತು ಆರ್ಥಿಕ ಅಸಮಾನತೆಯ ಮಟ್ಟ ತಗ್ಗಿಸಲು ಸರ್ಕಾರಗಳಿಗೆ ಸರಿಯಾದ ಸಮಯದಲ್ಲಿ ಒಂದು ಮಾರ್ಗ ರೂಪಿಸುವ ಅವಕಾಶವಾಗಿದೆ.

ABOUT THE AUTHOR

...view details