ಶ್ರೀನಗರ: ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರಗಿನ ಜನರು ಭೂಮಿಯನ್ನು ಖರೀದಿಸಲು ಅವಕಾಶ ನೀಡುವ ಕಾನೂನುಗಳನ್ನು ತಿದ್ದುಪಡಿ ಮಾಡಿದ ಕೆಲವೇ ಗಂಟೆಗಳ ನಂತರ, ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರವನ್ನು ಅನ್ನು ಮಾರಾಟಕ್ಕೆ ಇಟ್ಟಿದೆ. ಅದು ಸಹ ಟೋಕನಿಸಂ ಲೆಕ್ಕದಲ್ಲಿ ಎಂದು ಟೀಕಿಸಿದರು.
ಈ ಹಿಂದಿನ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ 2019ರ ಆಗಸ್ಟ್ 5ರಂದು ರದ್ದುಗೊಳಿಸಿದ ಒಂದು ವರ್ಷದ ನಂತರ, ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ಭೂ ಕಾನೂನುಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿತು. ಸಾರ್ವಜನಿಕ ಉದ್ದೇಶದ ಸೌಲಭ್ಯಗಳನ್ನು ಸ್ಥಾಪಿಸಲು ಕೃಷಿ ಭೂಮಿಯನ್ನು ಬಳಸಲು ಅವಕಾಶ ನೀಡುವುದು ಇದರಲ್ಲಿ ಸೇರಿದೆ.
ಇತ್ತೀಚಿನ ತಿದ್ದುಪಡಿಯಲ್ಲಿ, ಕೇಂದ್ರಾಡಳಿತ ಪ್ರದೇಶ ಭೂಮಿ ವಿಲೇವಾರಿ ಮಾಡುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆಯ ಸೆಕ್ಷನ್ 17ರಿಂದ ಕೇಂದ್ರವು "ರಾಜ್ಯದ ಶಾಶ್ವತ ನಿವಾಸಿ" ಎಂಬ ಪದ ತೆಗೆದು ಹಾಕಿದೆ. ಯಾವುದೇ ಭಾರತೀಯರು ಅಲ್ಲಿ ಭೂಮಿ ಖರೀದಿಸುವ ಅವಕಾಶ ಪಡೆಯುತ್ತಾರೆ. ಆದರೂ ಕಾಯ್ದೆಯಲ್ಲಿನ ಹಲವು ವಿನಾಯಿತಿಗಳು, ಕೃಷಿ ಅಥವಾ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ವರ್ಗಾವಣೆ ಮಾಡಲು ಅನುವು ಮಾಡಿಕೊಡುತ್ತದೆ.
ಹೊಸ ಭೂ ಕಾನೂನುಗಳನ್ನು ಖಂಡಿಸಿದ ಒಮರ್, ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸದಾಗಿ ಪರಿಚಯಿಸಲಾದ ಜೆ&ಕೆ ಅಭಿವೃದ್ಧಿ ಕಾಯ್ದೆ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ಈ ಹೊಸ ಕಾನೂನುಗಳೊಂದಿಗೆ, ಕೃಷಿಯೇತರ ಭೂಮಿಯನ್ನು ಖರೀದಿಸುವುದನ್ನು ಸುಲಭಗೊಳಿಸಲಾಗಿರುವುದರಿಂದ ನಿವಾಸ ಪ್ರಮಾಣಪತ್ರದ ಟೋಕನಿಸಂ ಅನ್ನು ದೂರ ಮಾಡಲಾಗಿದೆ. ಈ ಹೊಸ ಕಾನೂನುಗಳು ಜೆಕೆ ಮತ್ತು ಲಡಾಖ್ ಜನರಿಗೆ ಸ್ವೀಕಾರಾರ್ಹವಲ್ಲ ಎಂದು ಕಿಡಿಕಾರಿದ್ದಾರೆ.