ನವದೆಹಲಿ:ಪ್ರಸಕ್ತ ಹಣಕಾಸು ವರ್ಷದಲ್ಲಿ ಯಾವುದೇ ಹೊಸ ಯೋಜನೆಯನ್ನು ಪ್ರಾರಂಭಿಸದಂತೆ ಹಾಗೂ ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಂಪನ್ಮೂಲಗಳನ್ನು ವಿವೇಕಯುತವಾಗಿ ಬಳಸಿಕೊಳ್ಳುವ ಅವಶ್ಯಕತೆಯಿದೆ ಎಂದು ಹಣಕಾಸು ಸಚಿವಾಲಯವು ಎಲ್ಲ ಸಚಿವಾಲಯ ಮತ್ತು ಇಲಾಖೆಗಳಿಗೆ ತಿಳಿಸಿದೆ.
ಅಡಕ್ಕತ್ತರಿಯಲ್ಲಿ ಹಳೆ ಯೋಜನೆಗಳು: ಹೊಸ ಸ್ಕೀಮ್ಗಳಿಗೆ ಹಣ ಕೊಡಲ್ಲ- ವಿತ್ತ ಸಚಿವಾಲಯ
21 ಲಕ್ಷ ಕೋಟಿ ರೂ. ಆತ್ಮನಿರ್ಭರ್ ಭಾರತ ಪ್ಯಾಕೇಜ್ ವ್ಯಾಪ್ತಿಯಿಂದ ಹೊರಗಿರುವ ಯೋಜನೆ ಮತ್ತು ಪ್ರಸ್ತಾಪಗಳಿಗೆ ಬ್ರೇಕ್ ಹಾಕುವಂತೆ ಹಣಕಾಸು ಸಚಿವಾಲಯ ಇತರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಕೇಳಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಲು ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ ಅನುಮೋದನೆ ಪಡೆದಿರುವ ಯೋಜನೆಗಳು ಮುಂದಿನ ಆದೇಶಗಳವರೆಗೆ ಸ್ಥಗಿತಗೊಳ್ಳುತ್ತವೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಖರ್ಚು ಇಲಾಖೆಯ ಕಚೇರಿ ಪ್ರತಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ನಿರ್ಮಲ ಸೀತಾರಾಮನ್ ನೇತೃತ್ವದ ಹಣಕಾಸು ಸಚಿವಾಲಯ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್, ಆತ್ಮನಿರ್ಭರ ಭಾರತ ಅಭಿಯಾನ ಪ್ಯಾಕೇಜ್ ಮತ್ತು ಕೊರೊ ವೈರಸ್ ಬಿಕ್ಕಟ್ಟಿನ ವಿರುದ್ಧ ಹೋರಾಡುವ ಉದ್ದೇಶದಿಂದ ಘೋಷಿಸಲಾದ ವಿಶೇಷ ಪ್ಯಾಕೇಜ್ ಅಡಿ ಯೋಜನೆಗಳಿಗೆ ಹಣ ಸಂಗ್ರಹಿಸುವತ್ತ ಗಮನ ಹರಿಸಲಾಗುವುದು ಎಂದು ಹೇಳಿದೆ.