ಕರ್ನಾಟಕ

karnataka

ETV Bharat / business

ಅಚ್ಚೇ ದಿನಗಳನ್ನು ಹೊತ್ತು ತಂದ ಮೋದಿ 2.0 ಸರ್ಕಾರಕ್ಕೆ 100 ದಿನ: ಎತ್ತ ಸಾಗುತ್ತಿದೆ 'ಅರ್ಥ'ವ್ಯವಸ್ಥೆ? - ಭಾರತದ ಆರ್ಥಿಕತೆ

ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದ ವೇಳೆ ದೇಶದ ಹಣಕಾಸು ನಿಯಂತ್ರಣ ಮತ್ತು ಜಾಗತಿಕ ಅರ್ಥವ್ಯವಸ್ಥೆಯ ಸಂದಿಗ್ಧತೆ ಧುತ್ತೆಂದು ಎದುರಾಗಿತ್ತು. ಅಷ್ಟೇ ಅಲ್ಲ, ದೇಶದೆಲ್ಲೆಡೆ ಹಣಕಾಸೇತರ ಸಂಸ್ಥೆಗಳು ತೀವ್ರ ನಗದು ಕೊರತೆಯನ್ನು ಅನುಭವಿಸೋಕೆ ಶುರುಮಾಡಿದವು. ಮೂಲಸೌಕರ್ಯ ಕ್ಷೇತ್ರ ಆರ್ಥಿಕ ಹಿಂಜರಿತದ ಹೊಡೆತಕ್ಕೆ ನಲುಗಿ ಸಂಕಷ್ಟಕ್ಕೆ ತುತ್ತಾಗಿದ್ದೇ ಇದಕ್ಕೆ ಮೂಲ ಕಾರಣ. ಇಂದಿಗೂ ಸಾರ್ವಜನಿಕ ವಲಯದ ಬ್ಯಾಂಕ್​ಗಳ ದ್ರವ್ಯತೆ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ. ಇದು ದೇಶದ ಆಂತರಿಕ ತೊಂದರೆಗಳಾದ್ರೆ, ಬಾಹ್ಯ ಸಮಸ್ಯೆಗಳೇನೂ ಕಡಿಮೆ ಇಲ್ಲ. ಅಮೆರಿಕ- ಚೀನಾ ನಡುವಿನ ವಾಣಿಜ್ಯ ಸಮರ (Trade War) ತಾರಕಕ್ಕೇರಿದ್ರೆ, ಜಾಗತಿಕ ಆರ್ಥಿಕ ಅಸ್ಥಿರತೆಯೂ ಬಲವಾದ ಪೆಟ್ಟನ್ನೇ ಇವತ್ತಿಗೂ ಕೊಡುತ್ತಿದೆ.

ಸಾಂದರ್ಭಿಕ ಚಿತ್ರ

By

Published : Sep 5, 2019, 3:27 PM IST

2019 ರ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ದಿಗ್ವಿಜಯದೊಂದಿಗೆ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಸರ್ಕಾರ ಶತದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಹೀಗೆ ಅಧಿಕಾರ ಸ್ವೀಕರಿಸುತ್ತಿದ್ದಂತೆ ದೇಶದ ಕೋಟ್ಯಾಂತರ ಕನುಸುಗಳ ಸಾಕಾರದ ಜವಾಬ್ದಾರಿ ಮೋದಿ ಹೆಗಲ ಮೇಲೆ ಬಿತ್ತು. 130 ಕೋಟಿ ಜನರು ಕಂಡ ಬೆಟ್ಟದಷ್ಟು ಕನಸುಗಳನ್ನು ಸಾಕಾರಗೊಳಿವುದು ಅಷ್ಟೇನೂ ಸುಲಭ ಸಾಧ್ಯವಲ್ಲ. ಹೀಗೆ ಅಧಿಕಾರದ ಖುರ್ಚಿಯಲ್ಲಿ ಕುಳಿತುಕೊಂಡ ಮೋದಿ ಇವತ್ತು ಸೆಂಚುರಿ ಬಾರಿಸಿದ್ರು ನಿಜ. ಹಾಗಾದ್ರೆ, ಅವರು ಈ ನೂರು ದಿನಗಳಲ್ಲಿ ಮಾಡಿದ್ದೇನು? ದೇಶದ ಅರ್ಥವ್ಯವಸ್ಥೆಯ ಇಂದಿನ ಚಿತ್ರಣ ಹೇಗಿದೆ? ಆರ್ಥಿಕ ಬೆಳವಣಿಗೆಗೆ ಚೈತನ್ಯ ಒದಗಿಸಲು ಕೇಂದ್ರ ಕೈಗೊಂಡ ಕ್ರಮಗಳೇನು? ಹೀಗೆ ಹಿಂದಿನ ಬೆಳವಣಿಗೆಗಳು, ತೆಗೆದುಕೊಂಡ ಕ್ರಮಗಳು ಹಾಗು ಭವಿಷ್ಯದ ಬಗೆಗೆ ಮುನ್ನೋಟ ಹರಿಸುವ ಪ್ರಯತ್ನ ಇಲ್ಲಿದೆ.

ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದ ವೇಳೆ ದೇಶದ ಹಣಕಾಸು ನಿಯಂತ್ರಣ ಮತ್ತು ಜಾಗತಿಕ ಅರ್ಥವ್ಯವಸ್ಥೆಯ ಸಂದಿಗ್ಧತೆ ಧುತ್ತೆಂದು ಎದುರಾಗಿತ್ತು. ಅಷ್ಟೇ ಅಲ್ಲ, ದೇಶದೆಲ್ಲೆಡೆ ಹಣಕಾಸೇತರ ಸಂಸ್ಥೆಗಳು ತೀವ್ರ ನಗದು ಕೊರತೆಯನ್ನು ಅನುಭವಿಸೋಕೆ ಶುರುಮಾಡಿದವು. ಮೂಲಸೌಕರ್ಯ ಕ್ಷೇತ್ರ ಆರ್ಥಿಕ ಹಿಂಜರಿತದ ಹೊಡೆತಕ್ಕೆ ನಲುಗಿ ಸಂಕಷ್ಟಕ್ಕೆ ತುತ್ತಾಗಿದ್ದೇ ಇದಕ್ಕೆ ಮೂಲ ಕಾರಣ. ಇಂದಿಗೂ ಸಾರ್ವಜನಿಕ ವಲಯದ ಬ್ಯಾಂಕ್​ಗಳ ದ್ರವ್ಯತೆ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ. ಇದು ದೇಶದ ಆಂತರಿಕ ತೊಂದರೆಗಳಾದ್ರೆ, ಬಾಹ್ಯ ಸಮಸ್ಯೆಗಳೇನೂ ಕಡಿಮೆ ಇಲ್ಲ. ಅಮೆರಿಕ- ಚೀನಾ ನಡುವಿನ ವಾಣಿಜ್ಯ ಸಮರ (Trade War) ತಾರಕಕ್ಕೇರಿದ್ರೆ, ಜಾಗತಿಕ ಆರ್ಥಿಕ ಅಸ್ಥಿರತೆಯೂ ಬಲವಾದ ಪೆಟ್ಟನ್ನೇ ಇವತ್ತಿಗೂ ಕೊಡುತ್ತಿದೆ.

ಕೃಷಿ ಕ್ಷೇತ್ರದ ಪ್ರಗತಿ ಹೇಗಿದೆ?
ಈಗ ಕೃಷಿ ಕ್ಷೇತ್ರಕ್ಕೆ ಬರೋಣ. ಕೃಷಿ ಚಟುವಟಿಗಳಲ್ಲಿ ಬಹಳ ಮುಖ್ಯವಾಗಿ ರೈತರ ಆದಾಯ ವೃದ್ಧಿಸುವ ಮೂಲಕ ಅನ್ನದಾತರಿಗೆ ಚೈತನ್ಯ ನೀಡುವುದು ಅನೇಕ ವರ್ಷಗಳಿಂದ ಬಹುದೊಡ್ಡ ಸವಾಲಾಗಿ ಕಾಡುತ್ತಿದೆ. ಹಾಗಂತ ಸರ್ಕಾರಗಳು ಸುಮ್ಮನೆ ಕುಳಿತಿಲ್ಲ ಅನ್ನೋದು ಕೂಡ ನಿಜವಾದೇ ಮಾತೇ. ಹಣಕಾಸು ಬಿಕ್ಕಟ್ಟನ್ನು ಸೂಕ್ತ ರೀತಿಯ ಹಣಕಾಸು ನೀತಿಗಳೊಂದಿಗೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ ನಿಜ. ಹಾಗಿದ್ರೂ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ಕೊಂಡೊಯ್ದು, ವಿತ್ತೀಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ನೀತಿಗಳೆಲ್ಲಾ ನಿರೀಕ್ಷಿತ ಮಟ್ಟದಲ್ಲಿ ಯಶ ಕಂಡಿಲ್ಲ. ಇನ್ನು ಈ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‌ ಕೂಡಾ ಮಾರುಕಟ್ಟೆ ಭಾವನೆಗಳನ್ನು ಆಕರ್ಷಿಸುವಲ್ಲೂ ಅಷ್ಟೇನೂ ಸಫಲವಾಗಿಲ್ಲ ಎಂದೇ ಹೇಳಬೇಕು.

ಆರ್ಥಿಕ ಹಿಂಜರಿತದ ದಾಪುಗಾಲು:
ಮೋದಿ 2.0 ಸರ್ಕಾರ ಮೂರು ತಿಂಗಳ ಆಡಳಿತಾವಧಿ ಮುಗಿಸುತ್ತಿದ್ದಂತೆ ಆರ್ಥಿಕ ಹಿಂಜರಿತದ ಸ್ಪಷ್ಟ ಚಿತ್ರಣ ಎನ್​ಡಿಎಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಗ್ರಾಹಕ ದಿನ ಬಳಕೆ ವಸ್ತು ಆಧಾರಿತ ಕಾರ್ಖಾನೆಗಳು ಹಾಗೂ ಆಟೋಮೊಬೈಲ್ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಉದ್ಯೋಗಳನ್ನು ಕಡಿತಗೊಳಿಸುತ್ತಿದೆ. ದೇಶಾದ್ಯಂತ ವಾಹನ ತಯಾರಿಕಾ ಕ್ಷೇತ್ರವೊಂದೇ ಸುಮಾರು 3.50 ಲಕ್ಷ ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ. ಈ ಬೆಳವಣಿಗೆ ನಡೆದಿದ್ದು 2019ರ ಏಪ್ರಿಲ್ ಮತ್ತು ಆಗಸ್ಟ್ ನಡುವಿನ ವೇಳೆಯಲ್ಲಿ ಅಂದ್ರೆ ನಿಮಗೆ ಅಚ್ಚರಿಯಾಗಲೇಬೇಕು. ಇನ್ನು ಆತಂಕದ ವಿಚಾರ ಏನಪ್ಪಾ ಅಂದ್ರೆ, ಅತ್ಯಂತ ವೇಗದಲ್ಲಿ ಬೆಳವಣಿಗೆ ಹೊಂದುತ್ತಿರುವ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ಕ್ಷಿಪ್ರ ವೇಗದಲ್ಲಿ ಬೆಳವಣಿಗೆ ಹೊಂದಬೇಕಿತ್ತು. ಆದ್ರೆ, ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕೇವಲ ಶೇ10 ರಷ್ಟು ಅಭಿವೃದ್ದಿ ಕಂಡಿದೆಯಷ್ಟೇ. ಇದಕ್ಕಿಂತಲೂ ಹೆಚ್ಚು ಆತಂಕದ ವಿಚಾರ ಎಂದರೇ ದೇಶಾದ್ಯಂತ ಹೆಸರು ಮಾಡಿದ ಪಾರ್ಲೇ ಬಿಸ್ಕೆಟ್ ಸಂಸ್ಥೆಯ ದುಸ್ಥಿತಿ. ಗ್ರಾಮೀಣ ಭಾಗ ಹಾಗೂ ಬಡ ಮತ್ತು ಮಧ್ಯಮ ವರ್ಗಕ್ಕೆ ಸೇವೆ ಒದಗಿಸುತ್ತಿದ್ದ ಪಾರ್ಲೆ ಸಂಸ್ಥೆಯು ತನ್ನ ಒಟ್ಟು ಉದ್ಯೋಗಿಗಳ ಪೈಕಿ 10 ನೇ 1ರಷ್ಟು ಉದ್ಯೋಗವನ್ನು ಕಡಿತಗೊಳಿಸಿದೆ. ತನ್ನ ಉತ್ಪಾದನೆಗಳಿಗೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಅನಿವಾರ್ಯವಾಯ್ತು ಎಂದು ಸಂಸ್ಥೆ ಸಬೂಬು ನೀಡಿದೆ. ಇದು ಪಾರ್ಲೆ ವೇದನೆ ಮಾತ್ರವಲ್ಲ. ದಿನಬಳಕೆ ವಸ್ತುಗಳಾದ ಸೋಪು, ಸಾಂಬಾರ ಪದಾರ್ಥಗಳು ಮತ್ತು ಟೀ ವ್ಯವಹಾರವೆಲ್ಲವೂ ದೇಶದ ಬಡ, ಮಧ್ಯಮ ವರ್ಗದ ಅನಭೋಗದ ಸಾಮರ್ಥ್ಯವನ್ನೇ ಅವಲಂಬಿಸಿದೆ. ಈ ಎಲ್ಲಾ ಉತ್ಪನ್ನಗಳಿಗೂ ದೇಶದೆಲ್ಲೆಡೆ ಬರಬರುತ್ತಾ ಬೇಡಿಕೆ ಕಡಿಮೆಯಾಗುತ್ತಿದೆ.

ಹಾಗಾದ್ರೆ, ಈ ಟ್ರೆಂಡ್ ಹೇಳ್ತಿರೋದೇನು?
ದೇಶದಲ್ಲಿ ಜನರಲ್ಲಿ ಹಣದ ಚಲಾವಣೆ ಕಡಿಮೆಯಾಗುತ್ತಿದೆ. ಅವರ ಆದಾಯ ಮಟ್ಟ ಕುಸಿತ ಕಂಡಿದೆ. ಹೀಗಿದಾಗ ಸಹಜವಾಗೇ ಅವರೆಲ್ಲಾ ಖರ್ಚು ಕಡಿಮೆ ಮಾಡುವತ್ತ ಯೋಚಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಯಾವುದೇ ದೇಶದ ಅರ್ಥವ್ಯವಸ್ಥೆ ಆರೋಗ್ಯವಾಗಿರಲು ಸಾಧ್ಯವೇ ಇಲ್ಲ. ಈ ಬೆಳವಣಿಗೆಗಳು ಭಾರಿ ಪ್ರಮಾಣದ ಆರ್ಥಿಕ ತೊಂದರೆಗಳನ್ನು ಹೊತ್ತು ತರುವ ಮುನ್ಸೂಚನೆ ನೀಡುತ್ತಿದ್ದು, ಭವಿಷ್ಯದಲ್ಲಿ ಉದ್ಯೋಗ ಕಡಿತ, ಆದಾಯ, ಉತ್ಪಾದಕತೆ ಇಳಿಕೆ ಅಂತಿಮವಾಗಿ ಇಡೀ ದೇಶದ ರಾಷ್ಟ್ರೀಯ ಆದಾಯದ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಲಿದೆ. ಹಾಗಂತ, ಮೂರು ತಿಂಗಳ ಹಿಂದೆ ಈ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುವ ಸಂದರ್ಭದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇರಲಿಲ್ಲ. ಈಗ ಸಮಸ್ಯೆಯ ತೀವ್ರತೆ ಮತ್ತು ವೇಗ ಜಾಸ್ತಿಯಾಗಿದೆ ಅಷ್ಟೇ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ದೇಶದ ಜಿಡಿಪಿ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ 5ಕ್ಕೆ ಕುಸಿದಿದೆ. ಅರ್ಥವ್ಯವಸ್ಥೆಯ ಈ ತುಮುಲಗಳೇ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗುವಂತೆಯೂ ಮಾಡಿತು. ತಡ ಮಾಡದೆ ಸೂಕ್ತ ಹಣಕಾಸು ನೀತಿಗಳ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ಮುಂದಾಯ್ತು.

ಸರ್ಕಾರ ತೆಗೆದುಕೊಂಡ ಕ್ರಮಗಳೇನು?
ಕಳೆದ 28 ಆಗಸ್ಟ್ 2019ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಅನೇಕ ವಿತ್ತೀಯ ಕ್ರಮಗಳನ್ನು ಪ್ರಕಟಿಸಿದ್ದರು. ಬಹಳ ಮುಖ್ಯವಾಗಿ ಮೊಟ್ಟ ಮೊದಲಿಗೆ ಸ್ಟಾರ್ಟ್‌ ಅಪ್‌ಗಳಿಗೆ ತೆರಿಗೆ ತೊಂದರೆಯಿಂದ ಮುಕ್ತಿ ನೀಡಲಾಯ್ತು. ವಿದೇಶಿ ಮತ್ತು ದೇಶಿ ಹೂಡಿಕೆದಾರರ ಮೇಲೆ ಹಾಕಲಾಗುತ್ತಿದ್ದ ದುಬಾರಿ ತೆರಿಗೆಗಳನ್ನು ಹಿಂಪಡೆಯಲಾಯ್ತು. ಜೊತೆಜೊತೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 70 ಸಾವಿರ ಕೋಟಿ ರೂ. ನಿಧಿ ಪೂರೈಸುವ ನಿರ್ಧಾರ ಪ್ರಕಟಿಸಲಾಯ್ತು. ಆಟೋ ವಲಯದ ಸಮಸ್ಯೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರದ ಇಲಾಖೆಗಳು ಹೊಸ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಖರೀದಿಸಲು ಇದ್ದ ನಿಷೇಧವನ್ನು ಹಿಂಪಡೆಯಲಾಯ್ತು. ಅದೇ ರೀತಿ ಹಳೆಯ ವಾಹನಗಳನ್ನು ನಿಷೇಧಿಸುವ ವಿಚಾರವನ್ನೂ ಬೆಂಬಲಿಸುವ ಬಗ್ಗೆಯೂ ಕೇಂದ್ರ ಯೋಚಿಸಿದೆ.

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಬಾಕಿ ಉಳಿದ ಜಿಎಸ್‌ಟಿ ಮರುಪಾವತಿಯನ್ನು ಮುಂದಿನ 30 ದಿನಗಳಲ್ಲಿ ಪೂರೈಸುವುದಾಗಿ ಭರವಸೆ ಕೊಟ್ಟಿದೆ. ಅದೇ ರೀತಿ ಗುತ್ತಿಗೆಯ ಉತ್ಪಾದಕ ಸಂಸ್ಥೆಗಳು, ಕಲ್ಲಿದ್ದಲು ಗಣಿಗಾರಿಕೆ ಮತ್ತು ಇದಕ್ಕೆ ಸಂಬಂಧಿಸಿದ ಮೂಲಸೌಕರ್ಯ ಉದ್ದಿಮೆಗಳಿಗೆ ಆಟೋಮ್ಯಾಟಿಕ್ ರೂಟ್‌ ಮೂಲಕ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೇ ಸಿಂಗಲ್​ ಬ್ರ್ಯಾಂಡ್ ಚಿಲ್ಲರೆ ಉದ್ಯಮಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗಿದ್ದ ಕಟ್ಟುನಿಟ್ಟಿನ ನಿಯಮಾವಳಿಗಳನ್ನೂ ಸರಳಗೊಳಿಸಲಾಗಿದೆ. ಉದ್ಯಮ ಸ್ಥಾಪಿಸಲು ಶೇ 30ರಷ್ಟು ದೇಶೀಯ ವಸ್ತುಗಳ ಬಳಕೆ ವಿಚಾರದಿಂದಲೂ ಕೇಂದ್ರ ಹಿಂದೆ ಸರಿಯಿತು. ಹೆಚ್ಚುವರಿಯಾಗಿ, ಸಿಂಗಲ್​ ಬ್ರ್ಯಾಂಡ್ ಆನ್‌ಲೈನ್ ಚಿಲ್ಲರೆ ವಹಿವಾಟುಗಳಿಗೂ ಅನುಮತಿ ಕಲ್ಪಿಸಿದೆ. ಡಿಜಿಟಲ್ ಮಿಡಿಯಾದಲ್ಲಿ ಶೇ 26ರಷ್ಟು ಎಫ್‌ಡಿಐಗೆ ಅವಕಾಶ ನೀಡಲಾಯಿತು. ಈ ಮೂಲಕ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಗೆ ಕೇಂದ್ರ ಅನುವು ಮಾಡಿ ಕೊಟ್ಟಿದೆ.

ಇದಕ್ಕಿಂತಲೂ ಮಹತ್ವದ ಸುಧಾರಣೆ ಅಂದ್ರೆ, ಸಾರ್ವಜನಿಕ ವಲಯದ 10 ಬ್ಯಾಂಕ್​ಗಳನ್ನು ಒಟ್ಟುಗೂಡಿಸಿ ಅವುಗಳನ್ನು 4 ಬ್ಯಾಂಕ್​ಗಳೊಂದಿಗೆ ವಿಲೀನಗೊಳಿಸಲಿದೆ. ಈ ಮೂಲಕ ನಷ್ಟದಲ್ಲಿರುವ ಬ್ಯಾಂಕ್​ಗಳನ್ನು ಮೇಲೆತ್ತಿ ಜಾಗತಿಕ ಮಟ್ಟದದಲ್ಲಿ ಮನ್ನಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ದೇಶದಲ್ಲಿ ಸದ್ಯ ಸಾರ್ವಜನಿಕ ವಲಯದ ಬ್ಯಾಂಕ್​ಗಳ ಸಂಖ್ಯೆ 27 ರಿಂದ 12ಕ್ಕೆ ಇಳಿಯಲಿವೆ. ಈ ಮೂಲಕ ದೇಶದಲ್ಲಿ ವಸ್ತುಗಳಿಗೆ ಬೇಡಿಕೆ ಹೆಚ್ಚಿಸುವ ಮತ್ತು ಜನರಲ್ಲಿ ಹಣಕಾಸು ಚಲಾವಣೆಗೆ ಒತ್ತು ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ.

ABOUT THE AUTHOR

...view details