ನವದೆಹಲಿ: ಸಂಸತ್ತಿನಲ್ಲಿ ಫೆಬ್ರವರಿ 1ರಂದು 2021-22ರ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಮೋದಿ ಸರ್ಕಾರವು ಭಾರತದ ಆರ್ಥಿಕತೆಗೆ ಮತ್ತಷ್ಟು ಉತ್ತೇಜನ ನೀಡುವಂತೆ ಕಾಣುತ್ತಿರುವುದರಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 'ಹಿಂದೆಂದೂ ಇರದಂತಹ ಬಜೆಟ್ ಇರಲಿದೆ' ಎಂಬ ಭರವಸೆ ನೀಡಿದ್ದಾರೆ. ಸಹಜವಾಗಿ ಆದಾಯ ತೆರಿಗೆದಾರರ ಕುತೂಹಲ ಸಹ ಹೆಚ್ಚಾಗಿದೆ.
2020ರ ಕೊರೊನಾ ಪ್ರಕ್ಷುಬ್ಧತೆಯ ನಂತರ ಪ್ರಮುಖ ಸುಧಾರಣೆಗಳು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ನಿರೀಕ್ಷೆಯಿದೆ. ಆದರೂ ಆರ್ಥಿಕ ಕುಸಿತ ಮತ್ತು ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದಾಗಿ ಆದಾಯ ನಷ್ಟವಾಗಿದ್ದು, ಸರ್ಕಾರವು ಅನೇಕ ಪ್ರೋತ್ಸಾಹ ನೀಡಲು ಸೀಮಿತ ವ್ಯಾಪ್ತಿ ಹೊಂದಿದೆ.
ಕಳೆದ ವರ್ಷ 2.5 ಲಕ್ಷ ರೂ. ಆದಾಯಕ್ಕೆ ತೆರಿಗೆ ವಿನಾಯತಿ ನೀಡಲಾಗಿತ್ತು. 2.5-5 ಲಕ್ಷ ಆದಾಯಕ್ಕೆ ಶೇ. 5ರಷ್ಟು, 5-7.5 ಲಕ್ಷ ರೂ.ಗೆ ಶೇ. 10ರಷ್ಟು, 7.5-10 ಲಕ್ಷ ಆದಾಯಕ್ಕೆ ಶೇ. 15ರಷ್ಟು, 10-12.5 ಲಕ್ಷ ರೂ.ಗೆ ಶೇ. 20ರಷ್ಟು ಹಾಗೂ 15 ಲಕ್ಷಕ್ಕೂ ಅಧಿಕ ಆದಾಯಕ್ಕೆ ಶೇ. 30ರಷ್ಟು ತೆರಿಗೆ ಸ್ಲ್ಯಾಬ್ ವಿಧಿಸಲಾಗಿತ್ತು.
ಆದಾಯ ತೆರಿಗೆ ವಿಭಾಗದಲ್ಲಿ ಈ ವರ್ಷವೂ ಭಿನ್ನವಾಗಿರುವುದಿಲ್ಲ. ಕೋವಿಡ್ ಸಾಂಕ್ರಾಮಿಕದ ಮುಂಚೆ ಇದ್ದಂತೆ ಉತ್ತೇಜಕ ಮತ್ತು ನಿರೀಕ್ಷೆಗಳು ಹಿಂದೆಂದಿಗಿಂತಲೂ ದೊಡ್ಡದಾಗಿವೆ. ವಿವಿಧ ಶಿಫಾರಸು ಮತ್ತು ನಿರೀಕ್ಷೆಗಳ ಪರ ಈಗಾಗಲೇ ಧ್ವನಿ ಎತ್ತಲಾಗಿದೆ. ಅಂತಹ ಕೆಲವು ನಿರೀಕ್ಷೆಗಳು ಈ ಕೆಳಗಿನಂತಿವೆ.
ಸೆಕ್ಷನ್ 80 'ಸಿ' ಅಡಿಯಲ್ಲಿ ಕಡಿತದ ಮಿತಿಯ ಹೆಚ್ಚಳ
ಪ್ರಸ್ತುತ ಸೆಕ್ಷನ್ 80 'ಸಿ' ಅಡಿಯಲ್ಲಿ ಈಗಿನ 1.5 ಲಕ್ಷ ರೂ. ತೆರಿಗೆ ಕಡಿತವನ್ನು 2 ಲಕ್ಷ ರೂ.ಗೆ ಏರಿಸುವ ಬೇಡಿಕೆ ಇದೆ. ಕೊನೆಯ ಬಾರಿಗೆ ಈ ಕಡಿತದ ಮಿತಿಯನ್ನು 2014ರಲ್ಲಿ ಪರಿಷ್ಕರಿಸಲಾಗಿತ್ತು. ಆಗ ವಾರ್ಷಿಕ 1 ಲಕ್ಷ ರೂ. ಈ ಮಿತಿ ಇತ್ತು. ಆದರೆ ವರ್ಷಕ್ಕೆ ಕನಿಷ್ಠ 2 ಲಕ್ಷ ರೂ.ಗೆ ಪರಿಷ್ಕರಿಸಿ ತೆರಿಗೆದಾರರಿಗೆ ಸ್ವಲ್ಪ ವಿನಾಯಿತಿ ನೀಡುವುದು ಇದು ಅತ್ಯುತ್ತಮ ಸಮಯ. ಇದು ದೀರ್ಘಾವಧಿಯ ಹಣವನ್ನು ನಿಗದಿತ ದರದಲ್ಲಿ ಸುಲಭವಾಗಿ ಪಡೆಯಲು ಸರ್ಕಾರಕ್ಕೆ ನೆರವಾಗುತ್ತದೆ.
ಸೆಕ್ಷನ್ 80 ಡಿಡಿಬಿ
ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುವಾಗ ಕೆಲವು ತೆರಿಗೆ ಕ್ರಮ ಅಥವಾ ಉತ್ತೇಜಕ ಘೋಷಿಸಲಿದೆ ಎಂಬ ಹೆಚ್ಚು ನಿರೀಕ್ಷೆಗಳಿವೆ. ದೇಶದಲ್ಲಿ ಆರೋಗ್ಯ ವಿಮೆ ಪ್ರಮಾಣ ಹೆಚ್ಚಿಲ್ಲ. ಆಸ್ಪತ್ರೆಯ ಸಂಪೂರ್ಣ ವೆಚ್ಚ ಪೂರೈಸಲು ಸಹ ಹಲವರಿಗೆ ಆಗುತ್ತಿಲ್ಲ. ಹೀಗಾಗಿ ಅವರೆಲ್ಲ ಆಸ್ಪತ್ರೆಗಳಿಂದ ದೂರ ಉಳಿಯುತ್ತಿದ್ದಾರೆ.
ಆದಾಯ ತೆರಿಗೆ ಕಾನೂನುಗಳ ಪ್ರಕಾರ, ಮಾರಣಾಂತಿಕ ಕ್ಯಾನ್ಸರ್, ದೀರ್ಘಕಾಲದ ಮೂತ್ರಪಿಂಡ ವೈಫಲ್ಯ, ಏಡ್ಸ್ನಂತಹ ಕೆಲವು ಕಾಯಿಲೆಗಳಿಗೆ ಆಗುವ ವೆಚ್ಚಗಳು ಸೆಕ್ಷನ್ 80 ಡಿಡಿಬಿ ಅಡಿಯಲ್ಲಿ ಕಡಿತಕ್ಕೆ ಅರ್ಹತೆ ಪಡೆಯುತ್ತವೆ. ಈ ಕಡಿತದ ಮಿತಿ 40,000 ರೂ.ಗೆ ನಿಗದಿಪಡಿಸಲಾಗಿದೆ. ಹಿರಿಯ ಮತ್ತು ಸೂಪರ್ ಹಿರಿಯ ನಾಗರಿಕರಿಗೆ ವರ್ಷಕ್ಕೆ 1,00,000 ರೂ.ನಷ್ಟಿದೆ.
ವಿಮಾ ರಕ್ಷಣೆಯಿಂದ ಮರುಪಾವತಿ ಹೊರತಾಗಿ ಜೇಬಿನಿಂದ ಮಾಡುವ ವೆಚ್ಚಗಳಿಗೆ ಸೆಕ್ಷನ್ 80 ಡಿಡಿಬಿ ಅಡಿಯಲ್ಲಿ ಕೋವಿಡ್ 19ರ ಚಿಕಿತ್ಸೆಯ ಆಸ್ಪತ್ರೆ ವೆಚ್ಚವನ್ನು ಸರ್ಕಾರವು ಭರಿಸಬೇಕೆಂಬ ಶಿಫಾರಸಿದೆ. ಕೋವಿಡ್-19 ಆರೋಗ್ಯ ತೆರಿಗೆ ಕಡಿತ ಸೇರಿಸುವ ಮೂಲಕ ತೆರಿಗೆದಾರರಿಗೆ ವಿಶೇಷವಾಗಿ ವಿಮೆಯ ವ್ಯಾಪ್ತಿಗೆ ಒಳಪಡದವರಿಗೆ ದೊಡ್ಡ ಪರಿಹಾರ ನಿರೀಕ್ಷಿಸಬಹುದು.
ಇದನ್ನೂ ಓದಿ: ನಾಳೆ ಕೇಂದ್ರ ಬಜೆಟ್: ನಿರ್ಮಲಾ ಸೀತಾರಾಮನ್ ಮೇಲೆ ನಿರೀಕ್ಷೆಗಳ ಮಹಾಪೂರ!
ಸಂಬಳ ಪಡೆಯುವ ವರ್ಗ ಮತ್ತು ಮಧ್ಯಮ ವರ್ಗದವರು ಕೆಲವು ತೆರಿಗೆ ಸಡಿಲಿಸುವಿಕೆಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಉದ್ಯಮ ವಲಯಗಳ ಉತ್ತೇಜನಕ್ಕೆ ಸರ್ಕಾರವು ಈಗಾಗಲೇ ಕಾಲಕಾಲಕ್ಕೆ ಸಾಕಷ್ಟು ಪ್ರಚೋದಕ ಪ್ಯಾಕೇಜ್ಗಳನ್ನು ನೀಡಿದೆ. ಸರ್ಕಾರವು 80 ಸಿ ಮಿತಿಯನ್ನು 1.5 ಲಕ್ಷ ರೂ.ಗಳಿಂದ 2.5ರಿಂದ 3 ಲಕ್ಷ ರೂ.ಗೆ ಹೆಚ್ಚಿಸಲಿದೆ ಎಂಬ ನಿರೀಕ್ಷೆ ಇದೆ ಎಂದು ತೆರಿಗೆ ತಜ್ಞ ಡಿ.ಕೆ.ಮಿಶ್ರಾ ಹೇಳಿದರು.
ಹೊಸ ಬಾಂಡ್ಗಳ ನಿರೀಕ್ಷೆ
ಸರ್ಕಾರದ ಹಣಕಾಸು ಅತ್ಯಂತ ವಿಸ್ತಾರವಾಗಿದೆ ಹಾಗೂ ಹಣಕಾಸಿನ ಕೊರತೆಯು ದಾಖಲೆಯ ಮಟ್ಟದಲ್ಲಿದೆ. ಕೋವಿಡ್-19 ವ್ಯಾಕ್ಸಿನೇಷನ್ಗಾಗಿ ದೊಡ್ಡ ಪ್ರಮಾಣದ ವೆಚ್ಚ ಸಹ ಹೊಂದಿಸಬೇಕಿದೆ. ಅಂತಹ ಖರ್ಚುಗಳಿಗೆ ಸಂಪನ್ಮೂಲಗಳನ್ನು ಸಂಗ್ರಹಿಸಲು ಹಣಕಾಸು ಸಚಿವರು ಕೆಲವು ಉಳಿತಾಯ ಯೋಜನೆಗಳನ್ನು ಅಥವಾ ತೆರಿಗೆ ಮುಕ್ತ ಬಾಂಡ್ಗಳಂತಹ ಬಾಂಡ್ ವಿತರಣೆ ಘೋಷಿಸಬಹುದೆಂದು ನಿರೀಕ್ಷಿಸಲಾಗಿದೆ.
ವರ್ಕ್ ಫ್ರಂ ಹೋಮ್ ಮಾಡುವವರಿಗೆ ತೆರಿಗೆ ಮಿತಿ
ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮನೆಯಿಂದ ಕೆಲಸ ಮಾಡುವುದು ಸಾಮಾನ್ಯವಾಗಿದೆ. ಈಗ ಮನೆಯಲ್ಲಿ ಕೆಲಸದ ಕೇಂದ್ರ ಸ್ಥಾಪಿಸಲು ಕೆಲವು ಹೂಡಿಕೆಗಳ ಅಗತ್ಯವಿದೆ. ಕೆಲವು ಪ್ರಮುಖ ಕಾರ್ಪೋರೇಟ್ಗಳು ಮನೆ ಭತ್ಯೆಗಳಾದ ಆಫೀಸ್ ಪೀಠೋಪಕರಣಗಳ ವೆಚ್ಚ ಮರುಪಾವತಿ, ದೂರವಾಣಿ ಮತ್ತು ಇಂಟರ್ನೆಟ್ ವೆಚ್ಚಗಳನ್ನು ಒದಗಿಸಿವೆ. ಇತರ ಕೆಲವು ಉದ್ಯೋಗಿಗಳು ತಮ್ಮ ಜೇಬಿನಿಂದ ವಿನಿಯೋಗಿಸಿದ್ದಾರೆ. ಮನೆ ಖರ್ಚಿನಿಂದಾಗುವ ಕೆಲಸ ಸಂಬಂಧ ಸಂಬಳ ಪಡೆಯುವ ನೌಕರರಿಗೆ ಪ್ರಮಾಣಿತ ‘ಮನೆಯಿಂದ ಕೆಲಸ’ ಕಡಿತ ನಿರೀಕ್ಷಿಸಬಹುದು.
ಅನಿವಾಸಿ ಹೂಡಿಕೆದಾರರಿಗೆ ತೆರಿಗೆ ಪ್ರೋತ್ಸಾಹ
ಕೋವಿಡ್-19 ಬಳಿಕ ಅನೇಕ ವಿದೇಶಿ ಕಂಪನಿಗಳು ಮತ್ತು ದೇಶಿಗರು ತಮ್ಮ ಉತ್ಪಾದನಾ ಕಾಳಜಿಗಳಿಗಾಗಿ ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಸಿದ್ಧವಾಗಿವೆ. ಇದರ ಲಾಭ ಪಡೆಯಲು ಮತ್ತು ಹೂಡಿಕೆದಾರರನ್ನು ದೇಶಕ್ಕೆ ಆಕರ್ಷಿಸಲು ಭಾರತ ಪ್ರಯತ್ನಿಸುತ್ತಿದೆ. ಹೂಡಿಕೆದಾರರನ್ನು ಮತ್ತಷ್ಟು ಆಕರ್ಷಿಸಲು 2021ರ ಬಜೆಟ್ನಲ್ಲಿ ತೆರಿಗೆ ವಿನಾಯಿತಿಗಳನ್ನು ಪರಿಚಯಿಸಬಹುದು.
ಸಂಬಳ ಪಡೆಯುವ ನೌಕರರಿಗೆ ಪ್ರಮಾಣಿತ ಕಡಿತದ ಏರಿಕೆ
ವೆಚ್ಚದ ಹಣದುಬ್ಬರ ಸೂಚ್ಯಂಕದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಪ್ರಮಾಣಿತ ಕಡಿತವು (ಸ್ಟಾಂಡರ್ಡ್ ಡಿಡಕ್ಷನ್) 2021ರ ಬಜೆಟ್ನಲ್ಲಿ ರೂ. 1 ಲಕ್ಷಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. ತೆರಿಗೆಯ ಆದಾಯ ಲೆಕ್ಕ ಹಾಕುವ ಮೊದಲು ವ್ಯಕ್ತಿಯ ವೇತನ ಆದಾಯದಿಂದ ಪೂರ್ವನಿರ್ಧರಿತ ಮೊತ್ತ ಕಳೆಯಲು ಸ್ಟಾಂಡರ್ಡ್ ಡಿಡಕ್ಷನ್ ಬಳಸಿಕೊಳ್ಳಲಾಗುತ್ತೆ. ಇದು ಹೆಚ್ಚಿನ ಹಣದುಬ್ಬರ ನೀಡಿದ ವ್ಯಕ್ತಿಗಳ ತೆರಿಗೆ ಹೊರೆ ಮತ್ತು ಜೀವನ ಮಟ್ಟ ಕಾಪಾಡಿಕೊಳ್ಳುವ ಅಗತ್ಯವನ್ನು ಸರಾಗಗೊಳಿಸುತ್ತದೆ.
ಭಾರತೀಯ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದ್ದು, ಈಗ ಅದು ಚೇತರಿಕೆಯ ಹಾದಿಯಲ್ಲಿದೆ. ಆದರೂ ಸರ್ಕಾರದ ಹಣಕಾಸು ಅತ್ಯಂತ ವಿಸ್ತಾರವಾಗಿದೆ. ಆರೋಗ್ಯ ರಕ್ಷಣೆ ಮತ್ತು ಆಸ್ಪತ್ರೆಗೆ ಹೆಚ್ಚಿನ ವೆಚ್ಚ ಮಾಡಲಾಗಿದೆ. ಕೋವಿಡ್ ವ್ಯಾಕ್ಸಿನೇಷನ್ ಹೂಡಿಕೆ ಸಹ ನಡೆಯುತ್ತಿದೆ. ಸರ್ಕಾರವು ತನ್ನ ಖರ್ಚುಗಳಿಗೆ ಹಣ ಸಂಗ್ರಹಿಸಲು ಸಂಪನ್ಮೂಲಗಳನ್ನು ಸಂಗ್ರಹಿಸುವ ಮಾರ್ಗಗಳನ್ನು ಆಶ್ರಯಿಸುತ್ತದೆ. ಅದು ಹೆಚ್ಚಾಗಿ ತೆರಿಗೆಯೇತರ ಆದಾಯವಾಗಿರುತ್ತದೆ. ಜನರ ತೊಂದರೆಗಳನ್ನು ಗಣನೆಗೆ ತೆಗೆದುಕೊಂಡು ಆರ್ಥಿಕತೆಯನ್ನು ಬೆಳವಣಿಗೆಯ ಹಾದಿಯಲ್ಲಿ ಕೊಂಡೊಯ್ಯಲು ಈ ಬಜೆಟ್ಗೆ ಸರ್ಕಾರದ ಆದಾಯ ಮತ್ತು ವೆಚ್ಚಗಳ ನಡುವೆ ತೀವ್ರವಾದ ಸಮತೋಲನದ ಅತ್ಯಗತ್ಯವಿದೆ.