ನವದೆಹಲಿ:ಕೇಂದ್ರ ಸರ್ಕಾರ, ಕಂದಾಯ ಇಲಾಖೆಯ ಕಾರ್ಯದರ್ಶಿ ಆಗಿರುವ ಅಜಯ್ ಭೂಷಣ್ ಪಾಂಡೆ ಅವರನ್ನು ವಿತ್ತೀಯ ಸಚಿವಾಲಯದ ಹಣಕಾಸು ಕಾರ್ಯದರ್ಶಿ ಆಗಿ ನೇಮಿಸಿದೆ ಎಂದು ಸಚಿವಾಲಯದ ಆಪ್ತ ಮೂಲಗಳು ತಿಳಿಸಿವೆ.
ಹಣಕಾಸು ಕಾರ್ಯದರ್ಶಿ ಹುದ್ದೆಗೆ ಆಧಾರ್ ಪ್ರಾಧಿಕಾರದಿಂದ ಬಂದ ಹೊಸ ಸಾರಥಿ - ಹಣಕಾಸು ಕಾರ್ಯದರ್ಶಿ
ಕಾರ್ಯದರ್ಶಿ ಹುದ್ದೆ ಹಣಕಾಸು ಸಚಿವಾಲಯದ ಅತ್ಯುನ್ನತ ಜವಾಬ್ದಾರಿಯಾಗಿದೆ. ಅಜಯ್ ಭೂಷಣ್ ಪಾಂಡೆ ಅವರು ಪ್ರಸ್ತುತ ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಕಾರ್ಯದರ್ಶಿ ಆಗಿದ್ದಾರೆ. ರಾಜೀವ್ ಕುಮಾರ್ ಅವರ ನಿವೃತ್ತಿಯಿಂದ ತೆರವಾದ ಸ್ಥಾನದಲ್ಲಿ ಅವರು ಮುಂದುವರಿಯಲಿದ್ದಾರೆ.

ಅಜಯ್ ಭೂಷಣ್ ಪಾಂಡೆ
ಮಹಾರಾಷ್ಟ್ರ ಮೂಲದ ಪಾಂಡೆ ಅವರು, 1984ರ ಐಎಎಸ್ ಬ್ಯಾಚ್ನ ಅಧಿಕಾರಿಯಾಗಿ ಕೇಂದ್ರೀಯ ನಾಗರಿಕ ಹುದ್ದೆಗೆ ಆಯ್ಕೆ ಆಗಿದ್ದರು. ಇದೀಗ ಇವರಿಗೆ ಸಚಿವ ಸಂಪುಟದ ನೇಮಕಾತಿ ಮಂಡಳಿಯು ಹಣಕಾಸು ಕಾರ್ಯದರ್ಶಿ ಜವಾಬ್ದಾರಿ ಹೊರಿಸಿದೆ.
ಅಜಯ್ ಭೂಷಣ್ ಪಾಂಡೆ ಅವರು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಮಾಜಿ ಮುಖ್ಯಸ್ಥರಾಗಿದ್ದರು. ಇದು ಆಧಾರ್ ಅನುಷ್ಠಾನದ ಜವಾಬ್ದಾರಿ ಹೊತ್ತ ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿ ಆಗಿದೆ.