ನವದೆಹಲಿ:ಖಾಸಗಿ ವಿಮಾ ಕಂಪನಿಗಳು ಕಳೆದ ಎರಡು ವರ್ಷಗಳಲ್ಲಿ ರೈಲ್ವೆ ಪ್ರಯಾಣಿಕರಿಂದ ವಿಮಾ ಕಂತಿನಡಿ 46 ಕೋಟಿ ರೂ. ಸ್ವೀಕರಿಸಿ 7 ಕೋಟಿ ರೂ.ನಷ್ಟು ಪರಿಹಾರ ಮೊತ್ತ ಪಾವತಿಸಿವೆ.
ಮಾಹಿತಿ ಕಾಯ್ದೆ ಹಕ್ಕು (ಆರ್ಟಿಐ) ಅಡಿ ಕೇಳಲಾದ ಪ್ರಶ್ನೆಗೆ ರೈಲ್ವೆ ಸಚಿವಾಲಯ ಈ ಮಾಹಿತಿ ನೀಡಿದೆ. ಮಧ್ಯಪ್ರದೇಶ ಮೂಲದ ಸಾಮಾಜಿಕ ಕಾರ್ಯಕರ್ತ ಚಂದ್ರ ಶೇಖರ್ ಗೌರ್ ಎಂಬುವವರು ಆರ್ಟಿಐಗೆ ಅರ್ಜಿ ಸಲ್ಲಿಸಿದ್ದರು. ಐಆರ್ಸಿಟಿಸಿ ಪ್ರಯಾಣಿಕರಿಂದ ಪಡೆಯಲಾದ ₹ 38.89 ಕೋಟಿ ವಿಮಾ ಕಂತಿನ ಹಣವನ್ನು ವಿಮಾ ಕಂಪನಿಗಳಿಗೆ ಪಾವತಿಸಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರಯಾಣಿಕರು ₹ 7.29 ಕೋಟಿ ಪರಿಹಾರ ಮೊತ್ತ ಪಡೆದಿದ್ದಾರೆ ಎಂದು ತಿಳಿಸಿದೆ.
ರೈಲ್ವೆ ಸಚಿವಾಲಯದ ಸ್ವಾಮ್ಯದ ಐಆರ್ಸಿಟಿಸಿಯು ಶ್ರೀರಾಮ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ರಾಯಲ್ ಸುಂದರಂ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಜೊತೆಗೆ ಸೀಮಿತ ಒಪ್ಪಂದ ಮಾಡಿಕೊಂಡಿದೆ. 2016ರ ಸೆಪ್ಟೆಂಬರ್ನಲ್ಲಿ ಆರಂಭವಾದ ಈ ಸೇವೆಯು ರೈಲ್ವೆ ಪ್ರಯಾಣಿಕ ವೆಚ್ಚದಲ್ಲಿ 92 ಪೈಸೆಯಷ್ಟು ವಿಮಾ ಮೊತ್ತ ಸೇರಿರುತ್ತದೆ.
ರೈಲು ಅಪಘಾತ/ ಅಹಿತಕರ ಘಟನೆಗಳಿಂದ ಪ್ರಯಾಣಿಕರ ಸಾವು/ ಗಾಯಗಳಾದಾಗ ಸಂತ್ರಸ್ತರ ಕುಟುಂಬಸ್ಥರಿಗೆ ವಿಮಾ ಹಣ ನೀಡಲಾಗುತ್ತದೆ. ರೈಲು ದರೋಡೆ, ದೌರ್ಜನ್ಯ ಮತ್ತು ಇತರೆ ಹಿಂಸಾತ್ಮಕ ಕೃತ್ಯಗಳು ವಿಮಾ ನೀತಿಯ ವ್ಯಾಪ್ತಿಗೆ ಬರುತ್ತವೆ. ಎರಡು ವರ್ಷಗಳಲ್ಲಿ ಬಂದ 206 ಪರಿಹಾರ ಅರ್ಜಿಗಳಲ್ಲಿ 72 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದೆ.
ರೈಲು ಅಪಘಾತ ಅಥವಾ ಇತರ ಅಹಿತಕರ ಘಟನೆಯಿಂದ ಸಾವು ಸಂಭವಿಸಿದಾಗ ಇಲ್ಲವೇ ಶಾಶ್ವತ ಅಂಗವೈಕಲ್ಯಕ್ಕೆ ₹ 10 ಲಕ್ಷ, ಶಾಶ್ವತ/ ಭಾಗಶಃ ಅಂಗವೈಕಲ್ಯಕ್ಕೆ ₹ 7.5 ಲಕ್ಷ ಹಾಗೂ ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸೆ ವೆಚ್ಚಕ್ಕೆ ₹ 2 ಲಕ್ಷ ವಿಮಾ ಪರಿಹಾರ ನೀಡಲಾಗುತ್ತದೆ.