ಹೈದರಾಬಾದ್: ಸುಮಾರು ದಿನಗಳ ಕಾಲ ಪ್ರತಿಷ್ಠಿತ ತಾರಾ ಹೋಟೆಲ್ವೊಂದರಲ್ಲಿ ತಂಗಿದ್ದ ಉದ್ಯಮಿ ಅರ್ಧ ಬಿಲ್ ಪಾವತಿಸದೆ ಪರಾರಿಯಾದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ತಾಜ್ ಬಂಜಾರ ಹೋಟೆಲ್ ಸಿಬ್ಬಂದಿ ನೀಡಿದ್ದ ದೂರಿನನ್ವಯ ವಿಶಾಖಪಟ್ಟಣಂ ಮೂಲದ ಉದ್ಯಮಿ ಎ. ಶಂಕರ್ ನಾರಾಯಣ ಅವರು 12.34 ಲಕ್ಷ ರೂ. ಬಿಲ್ ಪಾವತಿಸದೆ ಕಾಲ್ಕಿತ್ತಿದ್ದಾರೆ. ಆರೋಪಿಯ ವಿರುದ್ಧ ವಂಚನೆ ಮತ್ತು ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕರ್ ನಾರಾಯಣ ಎಂಬುವವರು ಐಷಾರಾಮಿ ಕೊಠಡಿಯಲ್ಲಿ 102 ದಿನಗಳ ಕಾಲ ಉಳಿದುಕೊಂಡಿದ್ದರು. 102 ದಿನಕ್ಕೆ ಒಟ್ಟು ₹ 25.96 ಲಕ್ಷ ಬಿಲ್ ಆಗಿದ್ದು, ಇದರಲ್ಲಿ ₹ 13.62 ಲಕ್ಷ ಪಾವತಿಸಿದ್ದಾರೆ. ಉಳಿದ ₹ 12.34 ಲಕ್ಷ ಬಿಲ್ ಪಾವತಿಸದೆ ಎಸ್ಕೇಪ್ ಆಗಿದ್ದಾರೆ ಎಂದು ಹೋಟೆಲ್ ಸಿಬ್ಬಂದಿ ದೂರಿದ್ದಾರೆ.
ಉದ್ಯಮಿ ನಾರಾಯಣ ಅವರು ಹೋಟೆಲ್ ಸಿಬ್ಬಂದಿಯ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಬಿಲ್ ಪಾವತಿ ಮಾಡಿಯೇ ಹೋಟೆಲ್ ಖಾಲಿ ಮಾಡಿದ್ದೇನೆ. ಅವರ ಆರೋಪದಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ, ಅವರ ವಿರುದ್ಧ ಕಾನೂನಿನ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.