ನವದೆಹಲಿ:ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಎಜಿಆರ್) ಮೊತ್ತದಲ್ಲಿ ಬಡ್ಡಿ ಮತ್ತು ದಂಡ ಪಾವತಿಗೆ ಸಂಬಂಧಿಸಿದಂತ ಸುಪ್ರೀಕೋರ್ಟ್ ನೀಡಿರುವ ತೀರ್ಪು ಪರಾಮರ್ಶೆಗೆ ಭಾರ್ತಿ ಏರ್ಟೆಲ್ ಮತ್ತು ವೊಡಾಪೋನ್- ಐಡಿಯಾ ಅರ್ಜಿ ಸಲ್ಲಿಸಿವೆ.
ಎಜಿಆರ್ ಪ್ರಕರಣದಲ್ಲಿ ಅಕ್ಟೋಬರ್ 24ರಂದು ಕೇಂದ್ರದ ಪರ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, 92.642 ಕೋಟಿ ರೂ. ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣ ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಿತ್ತು.
ಭಾರತಿ ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಇತರ ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ನೀಡಬೇಕಾದ ಬಾಕಿ ಮೊತ್ತ 1.47 ಲಕ್ಷ ಕೋಟಿ ರೂ.ಗಳಷ್ಟು ಇದೆ ಎಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು ಸಂಸತ್ತಿನಲ್ಲಿ ಬುಧವಾರ ಹೇಳಿದ್ದರು.
ಲೋಕಸಭೆಯಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಸಾದ್, ಟೆಲಿಕಾಂ ಕಂಪನಿಗಳು ಪಾವತಿಸದ ಪರವಾನಗಿ ಶುಲ್ಕ 92,642 ಕೋಟಿ ರೂ. ಮತ್ತು ಬಾಕಿ ಇರುವ ಸ್ಪೆಕ್ಟ್ರಮ್ ಶುಲ್ಕ 55,054 ಕೋಟಿ ರೂ. ಇದೆ. ಭಾರ್ತಿ ಏರ್ಟೆಲ್ನದ್ದು ಸುಮಾರು 35,586 ಕೋಟಿ ರೂ. ಸೇರಿದ್ದು, ಇದರಲ್ಲಿ 21,682 ಕೋಟಿ ರೂ. ಪರವಾನಗಿ ಶುಲ್ಕ ಮತ್ತು 13,904 ಕೋಟಿ ರೂ. ಎಸ್ಯುಸಿ ಬಾಕಿ (ಟೆಲಿನರ್ ಮತ್ತು ಟಾಟಾ ಟೆಲಿ ಸರ್ವಿಸಸ್) ಇದೆ ಎಂದಿದ್ದರು.
ಎಜಿಆರ್ ಪ್ರಕರಣದಲ್ಲಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ತರಂಗಾಂತರ ಬಳಕೆ ಮತ್ತು ಲೈಸೆನ್ಸ್ ಶುಲ್ಕವನ್ನು ದಂಡ, ಬಡ್ಡಿ ಜತೆ ಪಾವತಿಸಬೇಕಿದೆ. ಭಾರ್ತಿ ಏರ್ಟೆಲ್ ಸೆಪ್ಟೆಂಬರ್ ಅಂತ್ಯವಾದ ತ್ರೈಮಾಸಿಕದಲ್ಲಿ 23,045 ಕೋಟಿ ರೂ. ನಷ್ಟ ಅನುಭವಿಸಿದೆ. ಜೊತೆಗೆ 6,164 ಕೋಟಿ ರೂ. ಪ್ರಿನ್ಸಿಪಲ್, 12,219 ಕೋಟಿ ರೂ. ದಂಡ, 3,760 ಕೋಟಿ ರೂ. ಬಡ್ಡಿ ಹಾಗೂ 6,307 ಕೋಟಿ ರೂ. ದಂಡದ ಮೇಲಿನ ಶುಲ್ಕ ಪಾವತಿಸಬೇಕಿದೆ. ಈಗಾಗಲೇ ಕೋಟ್ಯಾಂತರ ರೂ. ನಷ್ಟವಾಗಿದ್ದು, ಬಡ್ಡಿ ಮತ್ತು ದಂಡ ಪಾವತಿಗೆ ವಿನಾಯಿತಿ ನೀಡುವಂತೆ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಭಾರ್ತಿ ಏರ್ಟೆಲ್ ಮತ್ತು ವೊಡಾಪೋನ್- ಐಡಿಯಾ ಸಲ್ಲಿಸಿವೆ.