ಇಸ್ಲಾಮಾಬಾದ್:ವಿಶ್ವಕಪ್ ಟೂರ್ನಿ ಅತ್ಯಂತ ಮಹತ್ವದ ಪಂದ್ಯವೆಂದೇ ಪರಿಗಣಿಸಲಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು ಈ ನಡುವೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ತಂಡಕ್ಕೆ ಮೂರು ಸಲಹೆ ನೀಡಿದ್ದಾರೆ.
1992ರ ವಿಶ್ವಕಪ್ ವಿಜೇತ ಪಾಕಿಸ್ತಾನ ತಂಡದ ನಾಯಕರಾಗಿದ್ದ ಪಾಕಿಸ್ತಾನದ ಹಾಲಿ ಪ್ರಧಾನಿ ಇಮ್ರಾನ್ ಖಾನ್ ಸಹ ಇಂದಿನ ಪಂದ್ಯದ ಮೇಲೆ ಕುತೂಹಲದ ಕಣ್ಣಿಟ್ಟಿದ್ದಾರೆ. ಸರಣಿ ಟ್ವೀಟ್ ಮೂಲಕ ಪಾಕ್ ಪಿಎಂ ತಂಡವನ್ನು ಹುರಿದುಂಬಿಸುವ ಕಾರ್ಯ ಮಾಡಿದ್ದಾರೆ.
"ನಾನು ಕ್ರಿಕೆಟ್ ಕರಿಯರ್ ಆರಂಭಿಸುವ ವೇಳೆ ಯಶಸ್ಸು ಎನ್ನುವುದು ಶೇ.70ರಷ್ಟು ಪ್ರತಿಭೆ ಹಾಗೂ ಉಳಿದ ಶೇ.30ರಷ್ಟು ಮನೋಬಲ ಎಂದು ತಿಳಿದಿದ್ದೆ. ಆದರೆ ನನ್ನ ನಿವೃತ್ತಿ ವೇಳೆಗೆ ಅದು ಶೇ.50-50 ಆಗಿತ್ತು. ಆದರೆ ಸದ್ಯ ನನ್ನ ಗೆಳೆಯ ಗವಾಸ್ಕರ್ ಮಾತಿನಂತೆ ಶೇ.60ರಷ್ಟು ಮನೋಬಲ ಹಾಗೂ ಶೇ.40ರಷ್ಟು ಪ್ರತಿಭೆಯೇ ಯಶಸ್ಸಿನ ಮೂಲ ಎಂದು ಒಪ್ಪುತ್ತೇನೆ. ಆದರೆ ಇಂದಿನ ಪಂದ್ಯದಲ್ಲಿ ಆ ಮನೋಬಲದ ಶೇಕಡಾವಾರು ತುಂಬಾ ಹೆಚ್ಚಿರಲಿದೆ" ಎಂದು ಟ್ವೀಟ್ ಮಾಡಿದ್ದಾರೆ.
"ಪಾಕಿಸ್ತಾನ ಸರ್ಫರಾಜ್ ನಾಯಕತ್ವವನ್ನು ಪುಣ್ಯ ಮಾಡಿದೆ. ಇಂತಹ ತಂಡಕ್ಕೆ ನಾನು ಮೂರು ಸಲಹೆ ನೀಡಲು ಇಚ್ಛಿಸುತ್ತೇನೆ. ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಹಾಗೂ ಬೌಲರ್ಗಳ ಮೂಲಕ ಕಣಕ್ಕಿಳಿಯಿರಿ. ಒದ್ದೆ ಕ್ರೀಡಾಂಗಣವಿಲ್ಲದಿದ್ದಲ್ಲಿ ಸರ್ಫರಾಜ್ ಟಾಸ್ ಗೆದ್ದರೆ ಖಂಡಿತಾ ಬ್ಯಾಟಿಂಗ್ ಆಯ್ದುಕೊಳ್ಳಬೇಕು. ಟೀಮ್ ಇಂಡಿಯಾ ನೆಚ್ಚಿನ ತಂಡವಾದರೂ ಸೋಲಿನ ಭಯದಿಂದ ಹೊರಬಂದು ಉತ್ತಮ ಹೋರಾಟ ನೀಡಬೇಕು" ಎಂದು ಮಾಜಿ ಕ್ರಿಕೆಟಿಗ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಪುಲ್ವಾಮಾ ಉಗ್ರದಾಳಿ ಹಾಗೂ ನಂತರದ ಸರಣಿ ಬೆಳವಣಿಗೆಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಎದುರಾಗುತ್ತಿವೆ. ಮೇಲ್ನೋಟಕ್ಕೆ ಇಂದಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಪಾಕಿಸ್ತಾನವನ್ನು ಕಡೆಗಣಿಸುವಂತಿಲ್ಲ. ಇದರ ಜೊತೆಗೆ ಪಂದ್ಯಕ್ಕೆ ಮಳೆ ಭೀತಿಯೂ ಇದೆ.