ಕರ್ನಾಟಕ

karnataka

ETV Bharat / briefs

ಸೈಕ್ಲೋನ್‌ಗಳು ದೇಶದ ಪೂರ್ವತೀರವನ್ನೇ ಹೆಚ್ಚು ಕಾಡಲು ಕಾರಣ ಗೊತ್ತೇ?

ಒಡಿಶಾಗೆ 'ಫನಿ' ಚಂಡಮಾರುತ ಅಪ್ಪಳಿಸಿದೆ. ದೇಶದ ಪೂರ್ವತೀರದ ರಾಜ್ಯಗಳಾದ ಪಶ್ಚಿಮ ಬಂಗಾಲ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಆದ್ರೆ, ಈ ಹಿಂದಿನ ಅಂಕಿಅಂಶಗಳನ್ನು ಗಮನಿಸಿದಾಗ ಚಂಡಮಾರುತಗಳು ದೇಶದ ಪೂರ್ವತೀರದಲ್ಲೇ ಹೆಚ್ಚು ಅಪ್ಪಳಿಸುತ್ತಿವೆ. ಇದಕ್ಕೆ ನಿಖರವಾದ ಕಾರಣಗಳಿವೆ.

By

Published : May 3, 2019, 12:20 PM IST

ಚಂಡಮಾರುತಗಳು ಪೂರ್ವತೀರವನ್ನೇ ಹೆಚ್ಚು ಅಪ್ಪಳಿಸೋದೇಕೆ..?

ಭಾರತದಲ್ಲೀಗ ರಾಜಕೀಯ ಚಂಡಮಾರುತದ ಜೊತೆಗೆ ಪ್ರಕೃತಿದತ್ತ ಚಂಡಮಾರುತವೂ ಶುರುವಾಗಿದೆ. 'ಫನಿ' ಎಂದು ಹೆಸರಿಡಲಾದ ಚಂಡಮಾರುತ ಸಮುದ್ರವನ್ನು ಸೀಳಿಕೊಂಡು ಭೂಮಿಯತ್ತ ಧಾವಿಸಿ ಬರುತ್ತಿದ್ದು, ದೇಶದ ಪೂರ್ವತೀರದ ರಾಜ್ಯಗಳಲ್ಲಿ ಅದರ ಪರಿಣಾಮ ಈಗಾಗಲೇ ಆರಂಭವಾಗಿದೆ. ದಟ್ಟವಾದ ಕಾರ್ಮೋಡ,ಧಾರಾಕಾರ ಮಳೆ, ಜೋರಾಗಿ ಬೀಸುವ ಗಾಳಿ ಇವೆಲ್ಲಾ ಸೈಕ್ಲೋನ್‌ನ ಮುನ್ಸೂಚನೆಗಳಾಗಿವೆ.

ಉಷ್ಣವಲಯದ ಸೈಕ್ಲೋನ್‌ ಗಳೆಂದರೇನು..?
ಉಷ್ಣವಲಯದ ಸೈಕ್ಲೋನ್‌ಗಳೆಂದರೆ, ಸಮುದ್ರದಲ್ಲಿ ಕಡಿಮೆ ಒತ್ತಡ ಪ್ರದೇಶಗಳು ನಿರ್ಮಾಣಗೊಳ್ಳುವುದು.

ಯಾಕೆ ಭಾರತದ ಪೂರ್ವತೀರದಲ್ಲೇ ಹೆಚ್ಚು ಸೈಕ್ಲೋನ್‌?
ಹೌದು. ಇದಕ್ಕೆ ಕಾರಣಗಳಿವೆ. ಪಶ್ಚಿಮ ಭಾಗದಲ್ಲಿರುವ ಅರಬ್ಬಿಸಮುದ್ರಕ್ಕಿಂತ ಹೆಚ್ಚು ಚೆಂಡಮಾರುತಗಳು ಉದ್ಭವವಾಗುವುದು ಬಂಗಾಲ ಕೊಲ್ಲಿ ಸಮುದ್ರದಲ್ಲಿ. ಸಮುದ್ರದಲ್ಲಿ ಸೃಷ್ಟಿಯಾಗುವ ವಿವಿಧ ರೀತಿ ಗಾಳಿಯ ನಮೂನೆಗಳೇ(Patterns) ಇದಕ್ಕೆ ಮುಖ್ಯ ಕಾರಣ. ಹೀಗೆ ಸೃಷ್ಟಿಯಾಗುವ ಗಾಳಿಯ ನಮೂನೆಗಳು ಪೂರ್ವ ತೀರಕ್ಕಿಂತಲೂ ಪಶ್ಚಿಮ ತೀರವನ್ನು ಶಾಂತಿಯುತವಾಗಿಡುತ್ತವೆ. ಆದ್ರೆ, ಪೂರ್ವ ತೀರದಲ್ಲಿ ಭಾರಿ ಗದ್ದಲ ಎಬ್ಬಿಸುತ್ತವೆ. ಇನ್ನು, ಪಶ್ಚಿಮ ತೀರದಲ್ಲಿ ಉಂಟಾಗುವ ಗಾಳಿಯ ಪ್ರಕಾರಗಳು ಭಾರತದತ್ತ ಬರುವುದು ಬಿಟ್ಟು ಮಧ್ಯ ಪ್ರಾಚ್ಯ ದೇಶಗಳತ್ತ ಮುಖ ಮಾಡುತ್ತವೆ. ಪೂರ್ವ ತೀರದಲ್ಲಿ ಸೃಷ್ಟಿಯಾಗುವ ಚಂಡಮಾರುತಗಳು ಹೆಚ್ಚು ಶಕ್ತಿಯುತವಾಗಿರುತ್ತವೆ. ಯಾಕೆಂದರೆ, ಪಶ್ಚಿಮ ತೀರ ಭಾಗಕ್ಕೆ ಹೋಲಿಸಿದರೆ ಪೂರ್ವ ಭೂಮಿ ಹೆಚ್ಚು ಸಮತಟ್ಟವಾದ ಅಥವಾ ಆಯಕಟ್ಟಿನ ಪ್ರದೇಶವಾಗಿದೆ. ಇಲ್ಲಿ ಗಾಳಿಯನ್ನು ಬೇರೆಡೆ ತಿರುಗಿಸುವ ದೊಡ್ಡ ಪ್ರಮಾಣದ ಬೆಟ್ಟಗುಡ್ಡಗಳು ಇಲ್ಲ. ಹಾಗಾಗಿ ಚಂಡಮಾರುತಗಳು ದೇಶದ ಪೂರ್ವತೀರದಲ್ಲಿ ಹೆಚ್ಚು ಸಮಸ್ಯೆ ಉಂಟು ಮಾಡುತ್ತವೆ.

ಅಂಕಿ ಅಂಶಗಳೇನು ಹೇಳುತ್ತವೆ..?
ಅತ್ಯಂತ ಅಪಾಯಕಾರಿಯಾಗಿ ಸಂಭವಿಸಿದ 35 ಉಷ್ಣವಲಯದ ಚಂಡಮಾರುತಗಳಲ್ಲಿ 26 ಚಂಡಮಾರುತಗಳು ಬಂಗಾಲಕೊಲ್ಲಿಯಿಂದಲ್ಲೇ ಉದ್ಭವಿಸಿವೆ. 1892 ರಿಂದ 2002 ರವರೆಗೆ ಒಡಿಶಾ ರಾಜ್ಯ 98 ಭೀಕರ ಚಂಡಮಾರುತಗಳನ್ನು ಎದುರಿಸಿದೆ. ವಿಶೇಷ ಅಂದ್ರೆ, ಇತ್ತೀಚೆಗಿನ ದಿನಗಳಲ್ಲಿ ಈ ರಕ್ಕಸ ಮಾರುತಗಳಿಂದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಸಾವು, ನೋವು ಸಂಭವಿಸಿದೆ.

ABOUT THE AUTHOR

...view details