ಕರ್ನಾಟಕ

karnataka

By

Published : May 27, 2021, 7:35 PM IST

ETV Bharat / briefs

ಕೊರೊನಾದಿಂದ ಮೃತಪಟ್ಟ ಶಿಕ್ಷಕರ ಕುಟುಂಬದವರಿಗೆ ನೇಮಕಾತಿ ಪತ್ರ ವಿತರಿಸಿದ ಸಚಿವ ಸುರೇಶ್ ಕುಮಾರ್

ದುಡಿಯುವ ಕೈಗಳನ್ನು ಕಳೆದುಕೊಂಡು ನೋವಿನಲ್ಲಿ ಮುಳುಗಿರುವ ಕುಟುಂಬಗಳಿಗೆ ಈ ನೇಮಕಾತಿ ಆದೇಶಗಳು ಆಸರೆಯಾಗಲಿದ್ದು, ತನ್ನದೇ ಆದ ಪ್ರಾಮುಖ್ಯತೆ ಹೊಂದಿವೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

 Minister Suresh Kumar distributing appointment letters to the families of teachers who died from corona
Minister Suresh Kumar distributing appointment letters to the families of teachers who died from corona

ಬೆಂಗಳೂರು: ಸಾರ್ವಜನಿಕ ಬದುಕನ್ನು ತಲ್ಲಣಗೊಳಿಸಿರುವ ಕೊರೊನಾ ಸೋಂಕು ಸೇರಿದಂತೆ ಹಲವು ಕಾರಣಗಳಿಂದ ಮೃತಪಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರ ಅವಲಂಬಿತರಿಗೆ ಅನುಕಂಪದ ನೌಕರಿಯ ಆದೇಶ ಪತ್ರಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿತರಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೊರೊನಾದಿಂದ ಮೃತಪಟ್ಟ 130 ಮಂದಿ ಶಿಕ್ಷಕರ ಹತ್ತಿರದ ರಕ್ತ ಸಂಬಂಧಿಗಳಿಗೆ ಸಾಂಕೇತಿಕವಾಗಿ ಅನುಕಂಪದ ನೌಕರಿಯ ನೇಮಕಾತಿ ಪತ್ರಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕೋವಿಡ್ ಸೋಂಕಿನಿಂದ ನಮ್ಮ ಶಿಕ್ಷಣ ಪರಿವಾರದ ಅನೇಕ ಮಂದಿ ಶಿಕ್ಷಕ ಬಂಧುಗಳು ನಮ್ಮನ್ನು ಅಗಲಿದ್ದು, ನಮ್ಮ ನಾಡಿಗೆ ಅಪಾರ ನಷ್ಟವಾಗಿದೆ. ಮೃತ ಶಿಕ್ಷಕರ ಕುಟುಂಬಗಳಷ್ಟೇ ಅಲ್ಲ ನಮ್ಮ ನಾಡಿನ ಶಾಲಾ ಮಕ್ಕಳೂ ತಮ್ಮ ನೆಚ್ಚಿನ ಹಾಗೂ ಮೆಚ್ಚಿನ ಶಿಕ್ಷಕರನ್ನು ಕಳೆದುಕೊಂಡ ನೋವಿನಿಂದ ಇನ್ನೂ ಹೊರಬಂದಿಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಕುಟುಂಬಗಳಿಗೆ ತಕ್ಷಣವೇ ಸ್ಪಂದಿಸುವ ಸಲುವಾಗಿ ಅನುಕಂಪದ ನೇಮಕಾತಿ ನೀಡಲು ಇಲಾಖೆ ಮುಂದಾಗಿದೆ ಎಂದರು.

ದುಡಿಯುವ ಕೈಗಳನ್ನು ಕಳೆದುಕೊಂಡು ನೋವಿನಲ್ಲಿ ಮುಳುಗಿರುವ ಕುಟುಂಬಗಳಿಗೆ ಈ ನೇಮಕಾತಿ ಆದೇಶಗಳು ಆಸರೆಯಾಗಲಿದ್ದು, ತನ್ನದೇ ಆದ ಪ್ರಾಮುಖ್ಯತೆ ಹೊಂದಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ಮೃತ ಶಿಕ್ಷಕ ಬಂಧುಗಳ ಕುಟುಂಬಗಳ ನೆರವಿಗೆ ಮುಂದಾಗುವುದು ನಮ್ಮ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ತಮ್ಮ ಕುಟುಂಬದ ಹಿರಿಯರನ್ನು ಕಳೆದುಕೊಂಡು ನೋವಿನಲ್ಲಿರುವ ಕುಟುಂಬದ ಸದಸ್ಯರು ತಮಗೆ ನೀಡಿರುವ ಅನುಕಂಪದ ನೌಕರಿಯ ಆದೇಶಗಳನ್ನು ಪಡೆದುಕೊಂಡು ಸೇವೆಗೆ ಸೇರ್ಪಡೆಯಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಂಡು ಕುಟುಂಬವನ್ನು ಸಮಾಧಾನದಿಂದ ಪೊರೆಯುವ ಮೂಲಕ ನೋವನ್ನು ಭರಿಸುವ ಭಗವಂತ ಶಕ್ತಿ ನೀಡಲಿ ಎಂದು ಆಶಿಸಿದರು.

ನೇಮಕಾತಿ ಪತ್ರ ಪಡೆದು ನೌಕರಿಗೆ ಸೇರ್ಪಡೆಯಾಗುತ್ತಿರುವವರಿಗೆ ಪರಿಣಾಮಕಾರಿ ವೃತ್ತಿ ತರಬೇತಿ ಮತ್ತು ಆಡಳಿತ ವ್ಯವಸ್ಥೆ ಕುರಿತ ಪರಿಚಯಾತ್ಮಕ ತರಬೇತಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ABOUT THE AUTHOR

...view details