ಕರ್ನಾಟಕ

karnataka

ETV Bharat / briefs

20 ಲಕ್ಷ ಕೋಟಿ ರೂ ಪ್ಯಾಕೇಜ್​​​​​​​​​ನಲ್ಲಿ ರೈತರಿಗಾದ ಅನುಕೂಲವೇನು?: ಖಂಡ್ರೆ

ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್​ ಘೋಷಿಸಿದೆ. ಆದರೆ, ಶೀಘ್ರ ಅನುಷ್ಠಾನಗೊಳಿಸಬೇಕು. ಈ ಹಿಂದೆಯೂ ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದರು. ಈವರೆಗೂ ನಯಾ ಪೈಸೆ ತಂದಿಲ್ಲ ಎಂದು ಈಶ್ವರ ಖಂಡ್ರೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

By

Published : May 14, 2020, 12:53 PM IST

Ishwar Khandre, a barrage against the central government
ಈಶ್ವರ ಖಂಡ್ರೆ

ಬೆಂಗಳೂರು:ಕೇಂದ್ರ ಸರ್ಕಾರ ​ಘೋಷಿಸಿರುವ 20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್​​​ನಲ್ಲಿ ರೈತರಿಗಾದ ಅನುಕೂಲವೇನು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರಶ್ನಿಸಿದರು.

ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕಿತ್ತು. ಅಸಂಘಟಿತ ಕಾರ್ಮಿಕರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಗುಡುಗಿದ ಅವರು, ಪ್ರಸ್ತುತ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಪ್ಯಾಕೇಜ್​ ಘೋಷಿಸಿದರೆ ಸಾಲದು ಶೀಘ್ರ ಅನುಷ್ಠಾನಗೊಳಿಸಬೇಕು ಎಂದರು.

ಕಾರ್ಮಿಕರು ನೂರಾರು ಕಿ.ಮೀ ಕಾಲ್ನಡಿಗೆ ಮೂಲಕವೇ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಅದರಲ್ಲಿ ಗರ್ಭಿಣಿಯರೂ ಸೇರಿದ್ದಾರೆ. ಅವರಿಗೆ ಯಾವ ಪ್ಯಾಕೇಜ್​ ಘೋಷಿಸಲಾಗಿದೆ. ಕೇಂದ್ರ ಜನರ ನಿರೀಕ್ಷೆಗೆ ತಕ್ಕಂತೆ ಪ್ಯಾಕೇಜ್ ಘೋಷಿಸಿಲ್ಲ ಎಂದು ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಶಿಕ್ಷಕರಿಗೆ ವೇತನ ಸೇರಿದಂತೆ ಯಾವುದೇ ಕೆಲಸಕ್ಕೂ ಆರ್ಥಿಕ ನೆರವು ಬಿಡುಗಡೆ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರ ರಾಜ್ಯದತ್ತ ತಿರುಗಿ ನೋಡಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನ ನೀಡಿಲ್ಲ. ಐಟಿ - ಬಿಟಿ ರಾಜ್ಯ ನಮ್ಮದು. ಹೆಚ್ಚಿನ ತೆರಿಗೆಯನ್ನ ಕೇಂದ್ರಕ್ಕೆ ಕೊಡುವವರು ನಾವು. ಆದರೆ, ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. 25 ಸಂಸದರಿದ್ದರೂ ಪ್ರಯೋಜನವಿಲ್ಲ ಎಂದರು.

ಎಂಎಸ್ಇಪಿಗೆ ₹ 3 ಲಕ್ಷ ನೆರವು ಘೋಷಿಸಿದೆ. ಈ ಹಣವನ್ನ ಮುಂದೆಯಾದರೂ ಕಟ್ಟಲೇಬೇಕಿದೆ. ಕೊರೊನಾ ಪರಿಹಾರ ವಿತರಣೆಯಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ. 'ಕೊಲಾ ಪಹಾಡ್ ತೋ ಚೋರ್ ನಿಕಲಾ' ಅನ್ನುವಂತಾಗಿದೆ. ಬರೀ ಮಾಯಾಬಜಾರ್ ತೋರಿಸಿ ಜನರನ್ನ ಯಾಮಾರಿಸುತ್ತಿದೆ. ಕೇವಲ ಉದ್ಯಮಿಗಳಿಗೆ ಮಾತ್ರ ನೆರವು ಘೋಷಿಸಿದೆ. ರೈತ, ಕೃಷಿ ಕಾರ್ಮಿಕ, ಕಾರ್ಮಿಕರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

'ಎಪಿಎಂಸಿ ತಿದ್ದುಪಡಿ ಬೇಡ':

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುಂದಾದರೆ ಆರ್ಥಿಕತೆ ಮೇಲೆ ಹೊಡೆತ ಬೀಳಲಿದೆ. ಸದನದಲ್ಲಿ ಚರ್ಚೆಯಾಗದೇ ಕಾಯ್ದೆ ತಿದ್ದುಪಡಿ ಮಾಡಿದರೆ ಹೇಗೆ? ರೈತರ ವಿರೋಧಿ ನೀತಿಗಳನ್ನ ಜಾರಿಗೆ ತರುತ್ತಿದೆ. ಕೋವಿಡ್​-19 ಬಿಕ್ಕಟ್ಟಿನ ಪರಿಸ್ಥಿತಿಯಲ್ಲೇ ಕಾಯ್ದೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರದ ವಿರುದ್ಧ ಕಾಂಗ್ರೆಸ್​ ಹೋರಾಟ ಮಾಡಲಿದೆ ಎಂದರು.

ಕೇಂದ್ರ ಸರ್ಕಾರ ಎಪಿಎಂಸಿಯನ್ನ ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ಬೆಲೆ ನಿಗದಿ ಅಧಿಕಾರ ಸರ್ಕಾರ ಕಳೆದುಕೊಳ್ಳಲಿದೆ. ಹೀಗಾಗಿ ರೈತರು ಶೋಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಕಾಯ್ದೆ ತಿದ್ದುಪಡಿಗೆ ಅವಕಾಶ ನೀಡಬಾರದು ಎಂದರು.

ಕಾರ್ಮಿಕರಿಗೆ ಸಂಕಷ್ಟ:

ಹೊರಗಿನಿಂದ ಉತ್ತರ ಕರ್ನಾಟಕಕ್ಕೆ ಬಂದ ವಲಸೆ ಕಾರ್ಮಿಕರನ್ನು ಶಾಲೆಯಲ್ಲಿ ಕೂಡಿ ಹಾಕಲಾಗುತ್ತಿದೆ. ಅವರಿಗೆ ಶೌಚಾಲಯ ವ್ಯವಸ್ಥೆ, ಉಪಹಾರವಿಲ್ಲ ಎಂದು ಕಿಡಿಕಾರಿದರು.

'ವರ್ಗಾವಣೆ ಬೇಕಾ?'

ಅರಣ್ಯ ಇಲಾಖೆಯ ವರ್ಗಾವಣೆ ದಂಧೆ ಕುರಿತು ಪ್ರತಿಕ್ರಿಯಿಸಿದ ಅವರು, ವರ್ಗಾವಣೆ ದಂಧೆಗೆ ಕಡಿವಾಣ ಹಾಕಬೇಕು. ಇಂತ ಸಂದರ್ಭದಲ್ಲಿ ಅಕ್ರಮ ವರ್ಗಾವಣೆ ಬೇಕಾ? ಇದರ ಬಗ್ಗೆ ಸಿಎಂ ಗಂಭೀರ ಕ್ರಮ ಜರುಗಿಸಬೇಕು ಎಂದ ಅವರು, ಇನ್ನೂ ಕೊರೊನಾ ಕಾಟವೇ ಮುಗಿದಿಲ್ಲ. ಅದಾಗಲೇ ಸಿಮೆಂಟ್, ಸ್ಟೀಲ್​ಗೆ ಬೆಲೆ ಹೆಚ್ಚಳ ಮಾಡಲಾಗಿದೆ. ಇದರಿಂದ ದೊಡ್ಡ ದೊಡ್ಡ ಕಂಪನಿಗಳು ಲಾಭ ಪಡೆದುಕೊಳ್ಳಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details