ಕರ್ನಾಟಕ

karnataka

ETV Bharat / briefs

ವಿಧಾನ ಪರಿಷತ್ ಕಲಾಪ ಆರಂಭ: ಅಗಲಿದ ಗಣ್ಯರಿಗೆ ಸಂತಾಪ

ಪ್ರಸಕ್ತ ಅಧಿವೇಶನದ ಮೊದಲ ದಿನದ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಅವರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು.

By

Published : Sep 21, 2020, 1:51 PM IST

Vidhana parishath session
Vidhana parishath session

ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಅಗಲಿದ ಗಣ್ಯರಿಗೆ ವಿಧಾನ ಪರಿಷತ್​​ನಲ್ಲಿ ಸಂತಾಪ ಸೂಚಿಸಲಾಯಿತು.

ಪ್ರಸಕ್ತ ಅಧಿವೇಶನದ ಮೊದಲ ದಿನದ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಅವರು ಪ್ರಣಬ್ ಮುಖರ್ಜಿ, ಎಂ.ವಿ.ರಾಜಶೇಖರನ್, ಅಶೋಕ್ ಗಸ್ತಿ, ವಿ.ಸತ್ಯನಾರಾಯಣ, ವಿನ್ನಿಫ್ರೆಡ್ ಫರ್ನಾಂಡೀಸ್, ರಾಜಾ ರಂಗಪ್ಪ ನಾಯಕ, ಮದನ ಗೋಪಾಲ‌ ನಾಯಕ್, ಜಿ.ರಾಮಮೂರ್ತಿ, ಹೊಸ್ತೋಟ ಗಜಾನನ ಭಟ್ಟ, ನಿಸಾರ್ ಅಹಮದ್, ಡಾ. ಶಾಮಲಾ ಜಿ. ಭಾವೆ, ಶಾಂತಾದೇವಿ, ಸುಭದ್ರಮ್ಮ, ಪಂಡಿತ್ ಜಸರಾಜ್ ಕೇಶವಾನಂದ ಭಾರತಿ ಶ್ರೀಗಳು ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಗೊತ್ತುವಳಿ ಮಂಡಿಸಿದರು.

ಸಂತಾಪ ಸೂಚನೆ ವೇಳೆ ಮಾತನಾಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ದೇಶಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೊಡುಗೆಯನ್ನು ಸ್ಮರಿಸಿದರು. ಭಯೋತ್ಪಾದಕರಾದ ಅಫ್ಜಲ್ ಗುರು, ಕಸಬ್ ಕ್ಷಮಾದಾನ ಅರ್ಜಿ ಸಲ್ಲಿಸಿದಾಗ ಕ್ಷಣವೂ ವಿಳಂಬ ಮಾಡದೆ ತಿರಸ್ಕಾರ ಮಾಡಿ, ದೇಶದ‌ ಪರ ನಿರ್ಧಾರ ಮಾಡಿದ್ದರು. ರಾಜಕೀಯ ಏನೇ ಇದ್ದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಭೇಟಿ ನೀಡಿದ್ದರು. ತಮ್ಮ ಪುಸ್ತಕದಲ್ಲೂ ದೇಶದ ಹೆಮ್ಮೆಯ ಪುತ್ರ ಹೆಗಡೇವಾರ್ ಜನ್ಮಸ್ಥಳಕ್ಕೆ‌ ಬಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ. ರಾಜಕಾರಣವನ್ನು ಮೀರಿ ಅವರಿಗೆ ಭಾರತ ರತ್ನ ಬಂದಿದೆ ಎಂದರು.

ಹಿರಿಯ ರಾಜಕಾರಣಿ ಎಂ.ವಿ.ರಾಜಶೇಖರನ್ ನಿಧನ ಅಪಾರ ನೋವು ತಂದಿದೆ. ಹಿರಿಯರು, ಆಳ ಜ್ಞಾನ ಹೊಂದಿದ್ದವರಾಗಿದ್ದರು. ಜೊತೆಗೆ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ನಿಧನ ಸಹ ಅಪಾರ ನಷ್ಟ ಉಂಟು ಮಾಡಿದೆ. ಸವಿತಾ ಸಮಾಜದಂತಹ ಸಣ್ಣ ಸಮಾಜದಿಂದ ಬಂದು ಸೇವೆ ಸಲ್ಲಿಸಿದ್ದಾರೆ. ನಗರಸಭೆ ಸದಸ್ಯರಾಗಿ ರಾಜ್ಯಸಭೆವರೆಗೆ ಬಂದಿದ್ದರು. ಸರಳ, ಸಜ್ಜನಿಕೆ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು.

ಶಾಸಕ ವಿ.ಸತ್ಯನಾರಾಯಣ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಜನರ ಮಧ್ಯೆ ಕೆಲಸ ಮಾಡುತ್ತಿದ್ದರು. ಬಡವರ, ದುರ್ಬಲರ ಪರ ಕೆಲಸ ಮಾಡಿದ್ದರು. ಇವರ‌ ಹಠಾತ್ ನಿಧನವು ನೋವುಂಟು ಮಾಡಿದೆ. ಸರಳ ಸಜ್ಜನ ರಾಜಕಾರಣಿ ಕಳೆದುಕೊಂಡಿದ್ದೇವೆ ಎಂದರು.

ಇನ್ನು ಪ್ರೊ. ಕೆ.ಎಸ್.ನಿಸಾರ್ ಅಹಮದ್ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ನಿತ್ಯೋತ್ಸವ ಕವಿಯನ್ನು ಕಳೆದುಕೊಂಡಿದ್ದೇವೆ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಹಾಗಾಗಿ ನಿಸಾರ್ ಅಹಮದ್ ಹೆಸರಿನಲ್ಲಿ ಶಾಶ್ವತ ಥೀಮ್ ಪಾರ್ಕ್ ಮಾಡಲು ನಿರ್ಧರಿಸಲಾಗಿದೆ ಎಂದರು.

ಕೇಶವಾನಂದ ಭಾರತಿ ಸ್ವಾಮೀಜಿ ಕಲೆ, ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು. ಇಡೀ ಕರ್ನಾಟದಾದ್ಯಂತ ಬಹುದೊಡ್ಡ ಹೆಸರು ಪಡೆದಿದ್ದರು. ನ್ಯಾಯಂಗ ವ್ಯವಸ್ಥೆಯಲ್ಲಿ ಹೋರಾಟ ನಡೆಸಿದ್ದರು. ಸಂವಿಧಾನದ ಮೂಲ ಸ್ವರೂಪ ಬದಲಿಸಬಾರದು ಎನ್ನುವ ಕುರಿತು ಹೋರಾಟ ನಡೆಸಿ, ತೀರ್ಪು ಬರಲು ಕಾರಣೀಕರ್ತರಾಗಿದ್ದಾರೆ ಎಂದರು.

ಅಗಲಿದ ಇತರ ಗಣ್ಯರು, ಕೊರೊನಾ ವಾರಿಯರ್ಸ್‌, ಹುತಾತ್ಮ ಯೋಧರು, ಜೊತೆಗೆ ನೆರೆ ಹಾನಿಯಲ್ಲಿ ಮೃತರಾದವರಿಗೂ ಸಂತಾಪ ಸೂಚಿಸಿದರು.

ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸಂತಾಪ ಸೂಚನಾ ಗೊತ್ತುವಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಸಚಿವರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಿದೇಶಾಂಗ ಸಚಿವ, ನಾಲ್ಕು ಬಾರಿ ರಾಜ್ಯಸಭೆ, ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನಕ್ಕೆ ಅವರು ಅರ್ಹರು. ಅವರಿಗೆ 14 ವಿವಿಗಳು ಗೌರವ ಡಾಕ್ಟರೇಟ್‌ ಕೊಟ್ಟಿವೆ. ಜೊತೆಗೆ 371 (ಜೆ) ತ್ವರಿತ ಜಾರಿಗೆ ಶ್ರಮಿಸಿದ್ದರು ಎಂದು ಪ್ರಣಬ್ ಕೊಡುಗೆಯನ್ನು ಬಣ್ಣಿಸಿದರು.

ಎಂ.ವಿ.ರಾಜಶೇಖರನ್ ಗಾಂಧಿ ವಾದಿಯಾಗಿದ್ದರು. ಕೇಂದ್ರದ ಮಾಜಿ ಸದಸ್ಯರು, ಮಾನವೀಯ ಮೌಲ್ಯವುಳ್ಳ ರಾಜಕಾರಣಿ, ಕೃಷಿಕರು, ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಉತ್ತಮ ಸಂಸದೀಯ ಪಟುವನ್ನು ಕಳೆದುಕೊಂಡಿದ್ದೇವೆ. ಅಶೋಕ್ ಗಸ್ತಿ ಕೂಡ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದರು. ನಮ್ಮ ರಾಜ್ಯದಲ್ಲಿ ಕೋವಿಡ್​​ಗೆ ಬಲಿಯಾದ ಮೊದಲ ಜನಪ್ರತಿನಿಧಿ ಎಂದರು.

ಬಳಿಕ ಅಗಲಿದ ಗಣ್ಯರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸುವ ಮೂಲಕ ಸದನ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಯಿತು. ನಂತರ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಯಿತು.

ABOUT THE AUTHOR

...view details