ಕೊಪ್ಪಳ: ನಗರದಲ್ಲಿ ಶೌಚಾಲಯಗಳ ಸಮಸ್ಯೆ ಹಿನ್ನೆಯಲ್ಲಿ ನಗರಸಭೆ ವಿರುದ್ಧ ಭಾನುವಾರ ವಿನೂತನ ಪ್ರತಿಭಟನೆ ನಡೆಯಿತು.
ನಗರದ ಅಲ್ಲಲ್ಲಿ ಇಟ್ಟಿರುವ ರೆಡಿಮೇಡ್ ಮೂತ್ರಾಲಯಗಳಿಗೆ ಪೂಜೆ ಸಲ್ಲಿಸಿ ಪ್ರತಿಭಟನೆ ಮಾಡಲಾಯಿತು. ರೆಡಿಮೇಡ್ ಮೂತ್ರಾಲಯಗಳಿಗೆ ವಿಭೂತಿ, ಅರಿಶಿಣ, ಕುಂಕುಮ ಹಚ್ಚಿ, ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಕಾಂಗ್ರೆಸ್ ಮುಖಂಡ ಮಂಜುನಾಥ್ ಗೊಂಡಬಾಳ ನೇತೃತ್ವದಲ್ಲಿ ಈ ರೀತಿ ವಿನೂತನ ಪ್ರತಿಭಟನೆ ನಡೆಸಲಾಯಿತು. ನಗರಸಭೆ ಬಳಿ ಇಟ್ಟಿರುವ ರೆಡಿಮೇಡ್ ಮೂತ್ರಾಲಯಕ್ಕೆ ಪೂಜೆ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಮೂತ್ರಾಲಯಗಳಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆಗ ನಗರಸಭೆಯವರು ಸುಮಾರು 8 ಲಕ್ಷ ರೂಪಾಯಿ ಖರ್ಚು ಮಾಡಿ 10 ರೆಡಿಮೇಡ್ ಮೂತ್ರಾಲಯವನ್ನು ನಗರದ ಅಲ್ಲಲ್ಲಿ ಇಟ್ಟಿದ್ದಾರೆ.
ಆದರೆ, ಅವುಗಳನ್ನು ಈವರೆಗೂ ಸಾರ್ವಜನಿಕರ ಬಳಕೆಗೆ ಒದಗಿಸಿಲ್ಲ. ಹೆಸರಿಗೆ ಮಾತ್ರ ಇವು ಮೂತ್ರಾಲಯ ಎನ್ನುವಂತಾಗುವೆ. ಬಳಕೆಗೆ ಇರದ ಈ ಮೂತ್ರಾಲಯಳನ್ನು ಸಾರ್ವಜನಿಕರ ಬಳಕೆಗೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.