ಕರ್ನಾಟಕ

karnataka

By

Published : Mar 15, 2022, 12:18 PM IST

ETV Bharat / bharat

ಪವನ್ ಕಲ್ಯಾಣ್ ಸಿದ್ಧಾಂತವಿರದ, ಗೊಂದಲದಲ್ಲಿರುವ ನಾಯಕ : ಆಂಧ್ರ ಸಚಿವ

ವೈಎಸ್‌ಆರ್‌ಸಿಪಿ ಸರ್ಕಾರವನ್ನು ಟೀಕಿಸುವುದು ಮತ್ತು ತೆಲುಗು ದೇಶಂ ಪಕ್ಷವನ್ನು ಬೆಂಬಲಿಸುವುದು ಪವನ್ ಕಲ್ಯಾಣ್ ಅವರ ಕಾರ್ಯಸೂಚಿಯಾಗಿದೆ ಎಂದು ಆಂಧ್ರಪ್ರದೇಶದ ಸಾರಿಗೆ ಸಚಿವ ಪೆರ್ಣಿ ವೆಂಕಟರಾಮಯ್ಯ ಟೀಕಿಸಿದ್ದಾರೆ..

YSRCP hits back at Pawan Kalyan, calls him confused leader
ಪವನ್ ಕಲ್ಯಾಣ್ ಸಿದ್ಧಾಂತವಿರದ, ಗೊಂದಲದಲ್ಲಿರುವ ನಾಯಕ: ಆಂಧ್ರ ಸಚಿವ

ಅಮರಾವತಿ, ಆಂಧ್ರಪ್ರದೇಶ :ಟಾಲಿವುಡ್ ಪವರ್​ಸ್ಟಾರ್​​ ಮತ್ತು ರಾಜಕಾರಣಿಯಾಗಿರುವ ಪವನ್ ಕಲ್ಯಾಣ್ ಯಾವುದೇ ಸಿದ್ಧಾಂತವನ್ನು ಹೊಂದಿರದ ಹಾಗೂ ಗೊಂದಲದಲ್ಲಿರುವ ನಾಯಕ ಎಂದು ಆಂಧ್ರಪ್ರದೇಶದ ಸಾರಿಗೆ ಸಚಿವ ಪೆರ್ಣಿ ವೆಂಕಟರಾಮಯ್ಯ ವ್ಯಂಗ್ಯವಾಡಿದ್ದಾರೆ.

ಸೋಮವಾರ ಜನಸೇನಾ ಪಕ್ಷ ರಚನೆಯಾದ ದಿನವಾಗಿದೆ. ಆ ಕಾರ್ಯಕ್ರಮದಲ್ಲಿ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಮತ್ತು ಪಕ್ಷದ ವಿರುದ್ಧ ಕಿಡಿಕಾರಿದ್ದರು. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪೆರ್ಣಿ ವೆಂಕಟರಾಮಯ್ಯ, ಪವನ್ ಕಲ್ಯಾಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈಎಸ್‌ಆರ್‌ಸಿಪಿ ಸರ್ಕಾರವನ್ನು ಟೀಕಿಸುವುದು ಮತ್ತು ತೆಲುಗು ದೇಶಂ ಪಕ್ಷವನ್ನು (ಟಿಡಿಪಿ) ಬೆಂಬಲಿಸುವುದು ಪವನ್ ಕಲ್ಯಾಣ್ ಅವರ ಕಾರ್ಯಸೂಚಿಯಾಗಿದೆ. 2014-2019ರ ವೇಳೆಯಲ್ಲಿ ಟಿಡಿಪಿ ಅಧಿಕಾರದಲ್ಲಿತ್ತು. ಆಗ ಎಷ್ಟೇ ಅನ್ಯಾಯ ನಡೆದರೂ ಪವನ್ ಕಲ್ಯಾಣ್ ಮೌನವಾಗಿದ್ದರು. ಈ ಮೂಲಕ ಅವರು ಟಿಡಿಪಿಯನ್ನು ಬೆಂಬಲಿಸುತ್ತಿರುವುದು ಗೊತ್ತಾಗುತ್ತದೆ ಎಂದು ಪೇರ್ಣಿ ವೆಂಕಟರಾಮಯ್ಯ ಹೇಳಿದ್ದಾರೆ.

ಈ ಮೊದಲು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಪವನ್ ಕಲ್ಯಾಣ್, 2024ರಲ್ಲಿ ಜನಸೇನೆ ಅಧಿಕಾರಕ್ಕೆ ಬರಲಿದೆ. ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿ ಪಕ್ಷದ ವಿರೋಧಿ ಮತಗಳು ವಿಭಜನೆಯಾಗದೇ ನಮ್ಮನ್ನು ಅಧಿಕಾರಕ್ಕೆ ತರಲಿವೆ ಎಂದು ಹೇಳಿದ್ದರು.

ಇದರ ಜೊತೆಗೆ ಬಿಜೆಪಿ ಪಕ್ಷ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲ. ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆಯಲ್ಲಿರುವ ಅಂಶಗಳನ್ನು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಸರಿಯಾಗಿ ಅನುಷ್ಠಾನ ಮಾಡಿಲ್ಲ. ಆದರೆ, ಪವನ್ ಕಲ್ಯಾಣ್ ಬಿಜೆಪಿಯನ್ನು ಟೀಕಿಸದೇ ಮೌನವಾಗಿರುವುದೇಕೆ? ಎಂದು ಪೆರ್ಣಿ ವೆಂಕಟರಾಮಯ್ಯ ಪ್ರಶ್ನಿಸಿದರು.

ಇದನ್ನೂ ಓದಿ:ಪಂಜಾಬ್​​ನಲ್ಲಿ ಕಮಾಲ್​: ಹರಿಯಾಣದಲ್ಲಿ ಬಿಜೆಪಿ - ಕಾಂಗ್ರೆಸ್​​​​​​ ತೊರೆದು ಆಪ್​ ಸೇರಿದ ಮಾಜಿ ಸಚಿವರು, ಶಾಸಕರು

ಪೊಲಾವರಂ ಯೋಜನೆ ಮತ್ತು ಕಡಪದಲ್ಲಿ ಉಕ್ಕಿನ ಸ್ಥಾವರದ ಬಗ್ಗೆ ಪವನ್ ಮಾತನಾಡಲಿ ಎಂದ ಪೆರ್ಣಿ ವೆಂಕಟರಾಮಯ್ಯ, ಕಾಂಗ್ರೆಸ್, ಟಿಡಿಪಿ, ಬಿಜೆಪಿ, ಸಿಪಿಐ, ಸಿಪಿಐಎಂಗಳನ್ನು ಒಂದೇ ಸೂರಿನಡಿ ತಂದು ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಗನ್ ವಿರುದ್ಧ ಹೋರಾಡುವುದು ಪವನ್ ಕಲ್ಯಾಣ್ ಗುರಿಯಾಗಿದೆ ಎಂದು ಆರೋಪಿಸಿದರು.

ವೈಎಸ್‌ಆರ್‌ಸಿಪಿ ಸರ್ಕಾರ ಜಾರಿಗೊಳಿಸುತ್ತಿರುವ ಕಲ್ಯಾಣ ಯೋಜನೆಗಳ ಬಗ್ಗೆ ಉಲ್ಲೇಖಿಸಿದ ಸಚಿವರು, ಪವನ್ ಕಲ್ಯಾಣ್ ಅವರು ಟಿಡಿಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಮುಖವಾಣಿಯಾಗಿದ್ದಾರೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.

ABOUT THE AUTHOR

...view details