ಕರ್ನಾಟಕ

karnataka

ವೈರಲ್ ವಿಡಿಯೋ ಪ್ರಕರಣ: ಯೂಟ್ಯೂಬರ್ ಮನೀಶ್ ಕಶ್ಯಪ್ ಶರಣಾಗತಿ

By

Published : Mar 18, 2023, 1:16 PM IST

ತಪ್ಪು, ಸುಳ್ಳು ಮತ್ತು ಪ್ರಚೋದನಕಾರಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಯೂಟ್ಯೂಬರ್ ಮನೀಶ್ ಕಶ್ಯಪ್ ಬೆಟ್ಟಿಯಾದಲ್ಲಿನ ಜಗದೀಶ್‌ಪುರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ ಎಂದು ಬಿಹಾರ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Manish Kashyap surrender
ಯೂಟ್ಯೂಬರ್ ಮನೀಶ್ ಕಶ್ಯಪ್ ಶರಣಾಗತಿ

ಪಾಟ್ನಾ:ತಮಿಳುನಾಡಿನ ವಲಸೆ ಕಾರ್ಮಿಕರ ಮೇಲಿನ ದಾಳಿಯ ನಕಲಿ ವಿಡಿಯೋಗಳನ್ನು ಶೇರ್ ಮಾಡಿದ್ದಕ್ಕಾಗಿ ಯೂಟ್ಯೂಬರ್ ಮನೀಶ್ ಕಶ್ಯಪ್ ಅವರು ಶನಿವಾರ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಬಿಹಾರ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ (ಇಒಯು) ಕಶ್ಯಪ್ ಮತ್ತು ಇತರರ ವಿರುದ್ಧ "ತಮಿಳುನಾಡಿನಲ್ಲಿ ವಲಸಿಗರನ್ನು ಕೊಲ್ಲುವ ಮತ್ತು ಥಳಿಸುವ ನಕಲಿ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಆರೋಪದ ಮೇಲೆ ಮೂರು ಪ್ರಕರಣಗಳನ್ನು ದಾಖಲಿಸಿದೆ. ಇಒಯು ಕಶ್ಯಪ್ ಅವರಿಗೆ ಸೇರಿದ ನಾಲ್ಕು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ.

"ಇಒಯು ರಚಿಸಿರುವ ಆರು ತಂಡಗಳು ಪಾಟ್ನಾ ಮತ್ತು ಚಂಪಾರಣ್ ಪೊಲೀಸರೊಂದಿಗೆ ನಿನ್ನೆಯಿಂದ (ಶುಕ್ರವಾರದಿಂದ) ವಿವಿಧ ಸ್ಥಳಗಳು ಮತ್ತು ಅಡಗುತಾಣಗಳ ಮೇಲೆ ನಿರಂತರವಾಗಿ ದಾಳಿ ನಡೆಸಿದ್ದವು. ತಪ್ಪು, ಸುಳ್ಳು ಮತ್ತು ಪ್ರಚೋದನಕಾರಿ ಸುದ್ದಿಗಳನ್ನು ಹರಡಿದ ಕಾರಣಕ್ಕಾಗಿ ಬಂಧನ ಮತ್ತು ಇತರ ಕಾನೂನು ಕ್ರಮಗಳ ಭಯದಿಂದ ಅವರು ಶನಿವಾರ ಬೆಟ್ಟಿಯ ಜಗದೀಶ್‌ಪುರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ" ಎಂದು ಅದು ಹೇಳಿದೆ. ಇಒಯು ಮತ್ತು ಬೆಟ್ಟಿಯಾ ಪೊಲೀಸರ ಜಂಟಿ ಕ್ರಮದ ನಂತರ ಮನೀಶ್ ಕಶ್ಯಪ್ ಒತ್ತಡದಲ್ಲಿ ಶರಣಾಗಿದ್ದಾರೆ ಎಂದು ಬೆಟ್ಟಿಯಾ ಎಸ್​ಪಿ ಉಪೇಂದ್ರ ನಾಥ್ ತಿಳಿಸಿದ್ದಾರೆ.

ನಾಲ್ವರ ವಿರುದ್ಧ ಪ್ರಕರಣ:ಪ್ರಕರಣಕ್ಕೆ ಸಂಬಂಧಿಸಿದಂತೆ ಇಒಯು ಮಾ.6 ರಂದು ತನ್ನ ಮೊದಲ ಎಫ್‌ಐಆರ್ ದಾಖಲಿಸಿದೆ ಮತ್ತು ಕಶ್ಯಪ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದೆ. ಮೊದಲ ಎಫ್‌ಐಆರ್‌ನ ತನಿಖೆಗೆ ಸಂಬಂಧಿಸಿದಂತೆ ಇಒಯು ಈಗಾಗಲೇ ಅಮನ್ ಕುಮಾರ್ ಎಂಬಾತನನ್ನು ಬಂಧಿಸಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದವರಲ್ಲಿ ಅಮನ್ ಕುಮಾರ್, ರಾಕೇಶ್ ತಿವಾರಿ, ಯುವರಾಜ್ ಸಿಂಗ್ ರಜಪೂತ್ ಮತ್ತು ಮನೀಶ್ ಕಶ್ಯಪ್ ಸೇರಿದ್ದಾರೆ.

ತಮಿಳುನಾಡಿನಲ್ಲಿ ವಲಸಿಗರನ್ನು ಹೊಡೆದು ಸಾಯಿಸುವ 30 ನಕಲಿ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಕಾರ್ಮಿಕರಲ್ಲಿ ಭೀತಿಯನ್ನು ಉಂಟು ಮಾಡಿತ್ತು. ಬಿಹಾರ ಪೊಲೀಸ್ (ಪ್ರಧಾನ ಕಚೇರಿ) ಹೆಚ್ಚುವರಿ ಮಹಾನಿರ್ದೇಶಕ ಜೆಎಸ್ ಗಂಗ್ವಾರ್ ಕಳೆದ ವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದರು.

ಈ ಬಗ್ಗೆ ತನಿಖೆ ನಡೆಸಲು ತಮಿಳುನಾಡು ಪೊಲೀಸರು 13 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದಕ್ಕೂ ಮೊದಲು ಬಿಹಾರ ಸರ್ಕಾರ ತಮಿಳುನಾಡಿನಲ್ಲಿ ಈ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ನಾಲ್ವರು ಸದಸ್ಯರನ್ನೊಳಗೊಂಡ ಉನ್ನತ ಅಧಿಕಾರಿಗಳ ತಂಡವನ್ನು ತಮಿಳುನಾಡಿಗೆ ಕಳುಹಿಸಿತ್ತು.

ತನಿಖೆಗೆ ಆದೇಶಿಸಿದ್ದ ಬಿಹಾರ ಸಿಎಂ: ತಮಿಳುನಾಡಿನಲ್ಲಿ ಬಿಹಾರದ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಮನೀಶ್ ಕಶ್ಯಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದರು. ಇದಲ್ಲದೆ, ಈ ದಾಳಿಯಲ್ಲಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವದಂತಿ ಹಬ್ಬಿಸಿದ್ದರು. ಮನೀಶ್ ಕಶ್ಯಪ್ ಹೇಳಿಕೆಯ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ತನಿಖೆ ನಡೆಸಿದಾಗ ತಮಿಳುನಾಡಿನಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂಬುದು ತಿಳಿದು ಬಂದಿದೆ. ಇದಾದ ಬಳಿಕ ಬಿಹಾರ ಪೊಲೀಸರು ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕಾಗಿ ಮನೀಶ್ ಕಶ್ಯಪ್ ಸೇರಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಹಣಕಾಸು ಅವ್ಯವಹಾರ: ಯೂಟ್ಯೂಬರ್ ಮನೀಶ್ ಕಶ್ಯಪ್ ಅವರು ಸುಳ್ಳು ಸುದ್ದಿ ಹಬ್ಬಿಸಿದ ಆರೋಪ ಮಾತ್ರವಲ್ಲದೆ, ಆರೋಪಿಗಳ ಬ್ಯಾಂಕ್ ಖಾತೆಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಇಒಯು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಬಾಗಿಲು, ಕಿಟಕಿಯ ಚೌಕಟ್ಟು ವಶಕ್ಕೆ: ಇದಕ್ಕೂ ಮುನ್ನ ಪೊಲೀಸರು ಮಂಜೌಲಿಯಾದಲ್ಲಿರುವ ಮನೀಶ್ ಅವರ ಮನೆ ಬಾಗಿಲು ಮತ್ತು ಮೂರು ಕಿಟಕಿ ಚೌಕಟ್ಟುಗಳು, ಮರದ ಕುರ್ಚಿ, ಫ್ಯಾನ್, ಮೂರು ಪೆಟ್ಟಿಗೆಗಳು ಸೇರಿದಂತೆ ಅನೇಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಐಜಿ, ಡಿಐಜಿ, ಬೆಟ್ಟಯ್ಯ ಎಸ್ಪಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಇದನ್ನೂ ಓದಿ:ತಮಿಳುನಾಡಿನ ವೈರಲ್ ವಿಡಿಯೋ ಪ್ರಕರಣ, ಮೂವರು ಆರೋಪಿಗಳ ಬಂಧನ: 42 ಬಳಕೆದಾರರಿಗೆ ನೋಟಿಸ್​

ABOUT THE AUTHOR

...view details