ಕರ್ನಾಟಕ

karnataka

By

Published : Mar 15, 2023, 11:03 AM IST

ETV Bharat / bharat

ಮಹಾರಾಷ್ಟ್ರದಲ್ಲಿ ಹೆಚ್‌3ಎನ್‌2ಗೆ ವೈದ್ಯಕೀಯ ವಿದ್ಯಾರ್ಥಿ ಸಾವು: ದೇಶದಲ್ಲಿ 4ನೇ ಬಲಿ

ಕರ್ನಾಟಕ, ಗುಜರಾತ್​, ಹರಿಯಾಣ ಬಳಿಕ ಮಹಾರಾಷ್ಟ್ರದಲ್ಲಿ ಹೆಚ್‌3ಎನ್‌2 ಸೋಂಕು ನಾಲ್ಕನೇ ಬಲಿ ಪಡೆದಿದೆ.

ಹೆಚ್‌3ಎನ್‌2ಗೆ ವೈದ್ಯಕೀಯ ವಿದ್ಯಾರ್ಥಿ ಸಾವು
ಹೆಚ್‌3ಎನ್‌2ಗೆ ವೈದ್ಯಕೀಯ ವಿದ್ಯಾರ್ಥಿ ಸಾವು

ಅಹಮದ್‌ನಗರ (ಮಹಾರಾಷ್ಟ್ರ):ಹೆಚ್‌3ಎನ್‌2 ಸೋಂಕಿಗೆ ದೇಶದಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ಖಾಸಗಿ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಸೋಮವಾರ ರಾತ್ರಿ 10.30 ಕ್ಕೆ ನಿಧನ ಹೊಂದಿದ್ದಾನೆ. ಹೆಚ್‌3ಎನ್‌2 ಸೋಂಕು ಜೊತೆಗೆ ಕೊರೊನಾ ಕೂಡ ಈತನಿಗೆ ಅಪ್ಪಳಿಸಿತ್ತು ಎಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.

ಇಲ್ಲಿನ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದ 23 ವರ್ಷದ ಯುವಕ ಇತ್ತೀಚೆಗೆ ತನ್ನ ಸ್ನೇಹಿತರೊಂದಿಗೆ ಅಲಿಬಾಗ್‌ಗೆ ಪ್ರವಾಸಕ್ಕೆ ಹೋಗಿದ್ದ. ನಂತರ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಸೋಮವಾರ ರಾತ್ರಿ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ. ಯುವಕನಿಗೆ ಹೆಚ್‌3ಎನ್‌2, ಕೊರೊನಾ ಟೆಸ್ಟ್​ ಮಾಡಲಾಗಿದ್ದು, ಎರಡೂ ಸೋಂಕು ಪತ್ತೆಯಾಗಿವೆ ಎಂದು ವೈದ್ಯಾಧಿಕಾರಿ ಡಾ.ಅನಿಲ್ ಬೋರ್ಗೆ ತಿಳಿಸಿದ್ದಾರೆ.

ಯುವಕ ಹೆಚ್‌3ಎನ್‌2 ಇನ್​ಫ್ಲುಯೆಂಜಾ ಅಥವಾ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾನೋ ಎಂಬುದು ಪರೀಕ್ಷಾ ವರದಿಯ ನಂತರ ತಿಳಿಯಲಿದೆ. ವಿದ್ಯಾರ್ಥಿಗೆ ಎರಡೂ ಸೋಂಕು ಕಾಣಿಸಿಕೊಂಡಿತ್ತು. ಹೆಚ್‌3ಎನ್‌2 ಸಾವು ಸಂಭವಿಸಿದರೆ ಇದು ಮಹಾರಾಷ್ಟ್ರದಲ್ಲಿ ಮೊದಲ ಮತ್ತು ದೇಶದಲ್ಲಿ ನಾಲ್ಕನೇ ಸಾವು ಇದಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಈ ಬಗ್ಗೆ ತನಿಖೆ ನಡೆಸಲು ಆರೋಗ್ಯ ಇಲಾಖೆಯಿಂದ ಸಮಿತಿ ನೇಮಿಸಲಾಗಿದೆ. ವರದಿ ಬಂದ ನಂತರ ರೋಗಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ. ದೇಶಾದ್ಯಂತ ಈ ಸೋಂಕಿನ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹೆಚ್3ಎನ್2 ರಾಜ್ಯದ ಜನರಲ್ಲಿ ಆತಂಕವ ಉಂಟು ಮಾಡಿದೆ. ವೈರಸ್ ಸೋಂಕಿತರು 15 ರಿಂದ 20 ದಿನಗಳವರೆಗೆ ಶೀತ ಮತ್ತು ಕೆಮ್ಮಿನಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಡಾ.ಅನಿಲ್ ಬೋರ್ಗೆ ಹೇಳಿದರು.

ಗುಜರಾತ್‌ನ ವಡೋದರಾದಲ್ಲಿ ಒಬ್ಬ ಶಂಕಿತ H3N2 ವ್ಯಕ್ತಿ ನಿನ್ನೆ (ಮಂಗಳವಾರ) ಸಾವನ್ನಪ್ಪಿದ ವರದಿಯಾಗಿತ್ತು. ಮೃತರು 58 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. H3N2 ಇನ್​ಫ್ಲುಯೆಂಜಾಗೆ ಕರ್ನಾಟಕದಲ್ಲಿ ಮೊದಲ ಸಾವಾಗಿತ್ತು. ಬಳಿಕ ಹರಿಯಾಣದಲ್ಲಿ ವರದಿಯಾಗಿತ್ತು. ಇದೀಗ ಗುಜರಾತ್ ಮತ್ತು ಮಹಾರಾಷ್ಟ್ರದಿಂದಲೂ ತಲಾ ಒಂದು ಬಲಿಯಾಗಿದೆ. ಈ ರೋಗವನ್ನು 4-5 ದಿನಗಳಲ್ಲಿ ಗುಣಪಡಿಸಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ, ಸೋಂಕು ವೇಗವಾಗಿ ಹರಡುತ್ತಿದ್ದು, ದೇಶಾದ್ಯಂತ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಒಡಿಶಾದಲ್ಲಿ 59 ಹೆಚ್‌3ಎನ್‌2 ಕೇಸ್​ ಪತ್ತೆ:ಒಡಿಶಾದಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಸಂಗ್ರಹಿಸಲಾದ 225 ಮಾದರಿಗಳ ಪೈಕಿ 59 ಎಚ್3ಎನ್2 ಪ್ರಕರಣಗಳು ದೃಢಪಟ್ಟಿವೆ. ಭುವನೇಶ್ವರದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ (ಆರ್‌ಎಂಆರ್‌ಸಿ) ನಿರ್ದೇಶಕ ಡಾ. ಸಂಘಮಿತ್ರ ಪತಿ ಈ ಕುರಿತು ಮಾಹಿತಿ ನೀಡಿದ್ದರು. ಜ್ವರ, ಕೆಮ್ಮು ಇದರ ಸಾಮಾನ್ಯ ಲಕ್ಷಣಗಳು ಎಂದು ಅವರು ತಿಳಿಸಿದ್ದರು.

ರಾಜ್ಯದಲ್ಲಿ ಎಚ್3ಎನ್2 ವೈರಸ್ ಪ್ರಕರಣಗಳ ಏರಿಕೆಯ ಮಧ್ಯೆ ಆರೋಗ್ಯ ಕಾರ್ಯದರ್ಶಿ ಸಭೆ ನಡೆಸಿ, ಎಲ್ಲ ಜಿಲ್ಲಾಡಳಿತಗಳು ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಇನ್​ಪ್ಲುಯೆಂಜಾ ತರಹದ ಅನಾರೋಗ್ಯ ಮತ್ತು ತೀವ್ರ ಉಸಿರಾಟ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಮೇಲ್ವಿಚಾರಣೆಯನ್ನು ಸಮುದಾಯ ಮಟ್ಟದಲ್ಲಿ ಮಾಡುವಂತೆ ಸೂಚಿಸಿದ್ದರು.

ಮುನ್ನೆಚ್ಚರಿಕೆ ವಹಿಸಿ:ಹೆಚ್1ಎನ್1 ಮತ್ತು ಹೆಚ್3ಎನ್2 ಇನ್​ಪ್ಲುಯೆಂಜಾ ಎ ವೈರಸ್​ನ ಉಪವಿಭಾಗಗಳಾಗಿವೆ. ಕಳೆದ ಡಿಸೆಂಬರ್‌ನಿಂದ ಪ್ರಸಕ್ತ ವರ್ಷದ ಮಾರ್ಚ್‌ವರೆಗೆ ಮಕ್ಕಳು ಮತ್ತು ವೃದ್ಧರಲ್ಲಿ ಇದು ಸಾಮಾನ್ಯ ಜ್ವರದಂತೆ ಕಂಡುಬಂದಿದೆ. ಇಂತಹ ಸಂದರ್ಭದಲ್ಲಿ ಕೈ ತೊಳೆಯುವುದು, ವೈಯಕ್ತಿಕ ನೈರ್ಮಲ್ಯ ಮತ್ತು ಜನಸಂದಣಿ ಸ್ಥಳಗಳಿಂದ ದೂರವಿರಬೇಕು. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಅನುಸರಿಸಿದ ಕ್ರಮಗಳನ್ನೇ ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಇದನ್ನೂ ಓದಿ:ಒಡಿಶಾ: ಎರಡೇ ತಿಂಗಳಲ್ಲಿ 59 ಹೆಚ್‌3ಎನ್‌2 ಸೋಂಕು ಪ್ರಕರಣಗಳು ಪತ್ತೆ

ABOUT THE AUTHOR

...view details