ಹೈದರಾಬಾದ್ : ಮೋಜಿಗಾಗಿ ಬೃಹತ್ ಬಂಡೆ ಹತ್ತಿದ ಯುವಕನೋರ್ವ ಆ ಬಂಡೆಗಳ ನಡುವೆ ಸಿಲುಕಿರುವ ಘಟನೆ ತಿರುಮಲಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಮಹಾರಾಷ್ಟ್ರ ಮೂಲದ ರಾಜು ಎಂಬಾತ ಬಂಡೆಗಳ ನಡುವೆ ಸಿಲುಕಿದ್ದ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ರಕ್ಷಿಸಿದ್ದಾರೆ.
ಮೋಜು ತಂದ ಪಜೀತಿ:ರಾಜು ಕೆಲಸ ಅರಿಸಿಕೊಂಡು ಹೈದರಾಬಾದ್ಗೆ ಬಂದಿದ್ದ. ಸೋಮವಾರ ಸಂಜೆ ಇಲ್ಲಿನ ತಿರುಮಲಗಿರಿ ಕೆನ್ ಕಾಲೇಜು ಬಳಿಯ ಖಾಲಿ ಜಾಗಕ್ಕೆ ಹೋಗಿದ್ದಾನೆ. ಅಲ್ಲಿ ಬೃಹತ್ ಬಂಡೆಗಳನ್ನು ಕಂಡ ಆತ ಅದರ ಮೇಲೆ ಹತ್ತಿದ್ದಾನೆ. ಈ ವೇಳೆ ಕೈ ಜಾರಿ ಬಿದ್ದು ಎರಡು ಬಂಡೆಗಳ ನಡುವೆ ಸಿಲುಕಿದ್ದಾನೆ.
ಸಾವು-ಬದುಕಿನ ಹೋರಾಟ:ಸುಮಾರು ಮೂರು ಗಂಟೆಗಳ ಕಾಲ ಯುವಕ ಬಂಡೆಗಳ ನಡುವೆ ಸಿಲುಕಿ ಒದ್ದಾಡಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ತಿರುಮಲಗಿರಿ ಠಾಣಾ ಪೊಲೀಸರು ಯುವಕನ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕಾನ್ಸ್ಟೇಬಲ್ಗಳಾದ ರಾಂಬಾಬು, ಬಾಷಾ, ರಾಜು ಎಂಬವರು ಹರಸಾಹಸಪಟ್ಟು ಯುವಕನ ಪ್ರಾಣ ಕಾಪಾಡಿದ್ದಾರೆ.
ರಕ್ಷಣೆಯ ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸೋಮವಾರ ರಾತ್ರಿ ಯುವಕ ಸ್ವಗ್ರಾಮಕ್ಕೆ ತೆರಳಿದ್ದಾನೆ ಎಂದು ತಿಳಿದುಬಂದಿದೆ. ರಾಜುವನ್ನು ರಕ್ಷಿಸಿದ ಕಾನ್ಸ್ಟೇಬಲ್ಗಳನ್ನು ಸಿಐ ಶ್ರವಣ್ ಕುಮಾರ್ ಅಭಿನಂದಿಸಿದ್ದಾರೆ.
ಇದನ್ನೂ ಓದಿ:ಲೈಟ್ ಆನ್ ಆಫ್ ಮಾಡುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿದ ತಂದೆ: ಮಸಾಲೆ ರುಬ್ಬುವ ಕಲ್ಲಿನಿಂದ ಅಪ್ಪನ ಕೊಲೆ