ಹೈದರಾಬಾದ್:ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ಮದುವೆಯಾಗುತ್ತಿದ್ದಾಳೆ ಎಂದರಿತ ಪ್ರೇಮಿ, ನಿಶ್ಚಿತಾರ್ಥದ ದಿನ ಆಕೆಯ ಮನೆಗೆ ಬಂದು ಕುಟುಂಬಸ್ಥರನ್ನು ಥಳಿಸಿ ಪ್ರಿಯತಮೆಯನ್ನು ಅಪಹರಿಸಿದ ಘಟನೆ ನಡೆದಿದೆ. ಕುಟುಂಬಸ್ಥರು ನೀಡಿದ ದೂರಿನ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸರು 6 ತಾಸಿನಲ್ಲೇ ಆರೋಪಿಯನ್ನು ಬಂಧಿಸಿ ಯುವತಿಯನ್ನು ರಕ್ಷಿಸಲಾಗಿದೆ.
ನವೀನ್ರೆಡ್ಡಿ(29) ಬಂಧಿತ ಆರೋಪಿ ಪ್ರೇಮಿ. 100 ಜನರನ್ನು ಕರೆದುಕೊಂಡು ಬಂಧು ಯುವತಿಯ ಕುಟುಂಬಸ್ಥರ ಮೇಲೆ ದೊಣ್ಣೆ, ಕಬ್ಬಿಣದ ರಾಡ್ ಥಳಿಸಿ, ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಅಲ್ಲದೇ, ಘಟನೆಯಲ್ಲಿ ಭಾಗಿಯಾದ 8 ಜನರನ್ನು ಬಂಧಿಸಲಾಗಿದೆ.
ಪ್ರಕರಣವೇನು?:ಹೈದರಾಬಾದ್ನ ಮನ್ನೆಗುಡ ಪ್ರದೇಶದ ನಿವಾಸಿಯಾದ ಯುವತಿ 2021 ರಲ್ಲಿ ನವೀನ್ರೆಡ್ಡಿ ಎಂಬಾತನ ಜೊತೆ ಪ್ರೀತಿ ಬೆಳೆಸಿಕೊಂಡಿದ್ದರು. ಬ್ಯಾಡ್ಮಿಂಟನ್ ತರಬೇತಿ ಕೇಂದ್ರದಲ್ಲಿ ಇಬ್ಬರ ಪರಿಚಯವಾಗಿತ್ತು. ಬಳಿಕ ಇಬ್ಬರೂ ಅನ್ಯೋನ್ಯವಾಗಿದ್ದು, ಗೋವಾ, ವಿಶಾಖಪಟ್ಟಣ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಇದು ಎರಡೂ ಕುಟುಂಬಗಳಿಗೆ ಗೊತ್ತಾಗಿ ವಿವಾಹಕ್ಕೆ ಸಂಬಂಧಿಸಿದಂತೆ ಮನಸ್ತಾಪ ಉಂಟಾಗಿತ್ತು.
ಕುಟುಂಬಸ್ಥರ ವಿರೋಧದಿಂದ ಯುವತಿ ನವೀನ್ ರೆಡ್ಡಿಯಿಂದ ದೂರವಾಗಿದ್ದಳು. ಆದರೆ, ಪ್ರೇಮಿ ನವೀನ್ ಆಕೆಯ ಮೊಬೈಲ್ಗೆ ಕರೆ, ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ಮದುವೆಗೆ ಒತ್ತಾಯಿಸುತ್ತಿದ್ದ. ಅಲ್ಲದೇ, ಬೆದರಿಕೆಯೂ ಹಾಕಿದ್ದನಂತೆ. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಪೊಲೀಸರು ನವೀನ್ ರೆಡ್ಡಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದ ನವೀನ್, ಯುವತಿಯ ಮನೆಯ ಪಕ್ಕದಲ್ಲೇ ರೆಸ್ಟೋರೆಂಟ್ ಆರಂಭಿಸಿದ್ದ.
ಮದುವೆ ವಿಷಯ ಗೊತ್ತಾಗಿ ದಾಳಿ:ಇತ್ತ ಯುವತಿಗೆ ಕುಟುಂಬಸ್ಥರು ಬೇರೊಬ್ಬ ವರನ ಜೊತೆ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾರೆ. ಇದು ಪ್ರೇಮಿ ನವೀನ್ ರೆಡ್ಡಿಗೆ ಗೊತ್ತಾಗಿದೆ. ಇದರಿಂದ ಕುಪಿತಗೊಂಡ ಆತ 5 ಕಾರು, ಬೈಕ್ಗಳಲ್ಲಿ 100 ಸಹಚರರನ್ನು ಕರೆದುಕೊಂಡು ಬಂದು ಯುವತಿಯ ಮನೆಯ ಮೇಲೆ ದಾಳಿ ಮಾಡಿದ್ದಾನೆ. ಅಂದು ಯುವತಿಯ ನಿಶ್ಚಿತಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೊಣ್ಣೆಗಳಿಂದ ಸಿಕ್ಕಸಿಕ್ಕವರನ್ನು ಥಳಿಸಲಾಗಿದೆ. ತಡೆಯಲು ಬಂದ ಯುವತಿಯ ತಂದೆಗೂ ತೀವ್ರವಾಗಿ ಥಳಿಸಿದ್ದಾರೆ. ಬಳಿಕ ಪ್ರೇಮಿ ನವೀನ್ ರೆಡ್ಡಿ ಕಾರಿನಲ್ಲಿ ಯುವತಿಯನ್ನು ಅಪಹರಿಸಿದ್ದಾನೆ.