ಕರ್ನಾಟಕ

karnataka

ETV Bharat / bharat

ಮನೆ ಮುಂಭಾಗ ಕಾರು ಪಾರ್ಕ್​ ಮಾಡುತ್ತಿದ್ದ ವೇಳೆ ಸ್ಫೋಟಗೊಂಡು ಯುವಕ ಸಾವು - ಏಕಾಏಕಿ ಕಾರಿಗೆ ಬೆಂಕಿ

ಕಾರು ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ..

Young man died after car exploded
ಮನೆ ಮುಂಭಾಗ ಕಾರು ಪಾರ್ಕ್​ ಮಾಡುತ್ತಿದ್ದ ವೇಳೆ ಸ್ಫೋಟಗೊಂಡು ಯುವಕ ಸಾವು

By

Published : Aug 7, 2023, 1:27 PM IST

ಆಲಪ್ಪುಳ (ಕೇರಳ): ಮನೆಯ ಮುಂಭಾಗ ಕಾರು ಪಾರ್ಕ್​ ಮಾಡುತ್ತಿದ್ದ ವೇಳೆ ಕಾರು ಸ್ಫೋಟಗೊಂಡು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ ಆಲಪ್ಪುಳ ಜಿಲ್ಲೆಯ ಮಾವೆಲಿಕ್ಕಾರದಲ್ಲಿ ನಡೆದಿದೆ. ಮೃತರನ್ನು ಆಲಪ್ಪುಳದ ಕರಜ್ಮಾ ನಿವಾಸಿ ಕಿನ್ನೆತುಂ ಕಟ್ಟಿಲ್​ ಕೃಷ್ಣ ಪ್ರಕಾಶ್​ (35) ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ 12.45ಕ್ಕೆ ಈ ದುರಂತ ನಡೆದಿದೆ.

ಮೃತ ಕೃಷ್ಣ ಪ್ರಕಾಶ್ ಅವರು ಮನೆಯ ಮುಂಭಾಗದಲ್ಲಿ ಕಾರು ಪಾರ್ಕ್​ ಮಾಡಲು ಪ್ರಯತ್ನಿಸುತ್ತಿದ್ದರು. ಆ ವೇಳೆ, ಏಕಾಏಕಿ ಕಾರಿಗೆ ಬೆಂಕಿ ತಗುಲಿ ದೊಡ್ಡ ಶಬ್ಧದೊಂದಿಗೆ ಕಾರು ಸ್ಫೋಟಗೊಂಡಿದೆ. ಮಾವೇಲಿಕ್ಕರ ಬಾಲಕಿಯರ ಶಾಲೆಯ ಬಳಿ ಕಂಪ್ಯೂಟರ್ ಸಂಸ್ಥೆ ನಡೆಸುತ್ತಿದ್ದ ಕೃಷ್ಣ ಪ್ರಕಾಶ್ ಅವರು​ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪುಲಿಮೂಡ್​ ಜ್ಯೋತಿ ಅವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಕಾರು ಸ್ಫೋಟದ ಹಿಂದಿನ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಹಾಗೂ ಫಾರೆನ್ಸಿಕ್​ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಗೊಂಡ ಕಾರಿನ ಅವಶೇಷಗಳನ್ನು ಪರಿಶೀಲನೆ ನಡೆಸಿದರು.

ನಿನ್ನೆ ಮನೆಯಿಂದ ಹೊರ ಹೋಗಿದ್ದ ಕೃಷ್ಣ ಪ್ರಕಾಶ್​ ಅವರು ಪ್ರಯಾಣ ಮುಗಿಸಿ, ತಡರಾತ್ರಿ ಮನೆಗೆ ಹಿಂದಿರುಗಿದ್ದರು. ಬಂದವರೇ ಮನೆಯ ಮುಂಭಾಗ ಕಾರು ಪಾರ್ಕಿಂಗ್​ ಜಾಗದಲ್ಲಿ ಕಾರು ಪಾರ್ಕ್​ ಮಾಡಲು ಪ್ರಯತ್ನಿಸುತ್ತಿದ್ದರು. ಈ ವೇಳೆ, ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು, ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಭಾರೀ ಶಬ್ದ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ಬೆಂಕಿ ನಂದಿಸುವ ವೇಳೆಗಾಗಲೇ ಡ್ರೈವರ್​ ಸೀಟ್​ನಲ್ಲಿದ್ದ ಕೃಷ್ಣ ಪ್ರಕಾಶ್​ ಅವರು ಸಾವನ್ನಪ್ಪಿದ್ದರು. ಈ ದುರಂತ ಘಟನೆಯ ಕುರಿತು ಸಮಗ್ರ ತನಿಖೆ ಆರಂಭಿಸುವುದಾಗಿ ಮಾವೇಲಿಕ್ಕರ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರು ಕಾಲುವೆಗೆ ಉರುಳಿ ವಿದ್ಯಾರ್ಥಿಗಳು ಸಾವು: ಕಾಲುವೆಗೆ ಕಾರು ಉರುಳಿ ಮೂವರು ಇಂಜಿನಿಯರಿಂಗ್​ ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಿನ್ನೆ ಬೆಳಿಗ್ಗೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಬಿಟೆಕ್​ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಗೋದಾವರಿ ಜಿಲ್ಲೆಯ ಕೊರುಗೊಂಡ ಮಂಡಲದ ಬುರುಗುಪುಡಿ ಗ್ರಾಮದ ಬಳಿಯ ಕಾಲುವೆಗೆ ಬಿದ್ದಿದೆ. 10 ವಿದ್ಯಾರ್ಥಿಗಳ ತಂಡ ಜಲಪಾತವೊಂದಕ್ಕೆ ಎರಡು ಕಾರುಗಳಲ್ಲಿ ಪಿಕ್ನಿಕ್​ಗೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಬುರುಗುಪುಡಿ ಗೇಟ್​ ಬಳಿ ಹಳೇ ಸೇತುವೆ ಮತ್ತು ಹೊಸ ಸೇತುವೆ ಮಧ್ಯದ ಕಾಲುವೆಗೆ ಒಂದು ಕಾರು ಧುಮುಕಿದೆ. ಕಾರಲ್ಲಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರೆ, ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಅತೀವೇಗದ ಚಲಾವಣೆ ಕಾರಣ ಎಂದು ಶಂಕಿಸಲಾಗಿದ್ದರೂ, ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್: ತಂದೆ ಮಗ ಸಾವು, ಅಳಿಯನ ಸ್ಥಿತಿ ಗಂಭೀರ..

ABOUT THE AUTHOR

...view details