ಕರ್ನಾಟಕ

karnataka

ETV Bharat / bharat

ಸ್ನಾನ ಮಾಡಲು ಯಮುನಾ ನದಿಗಿಳಿದ ರಾಷ್ಟ್ರೀಯ ಮಹಿಳಾ ಕುಸ್ತಿಪಟು ನೀರುಪಾಲು - ರಾಷ್ಟ್ರಮಟ್ಟದ ಕುಸ್ತಿಪಟು ತನಿಷ್ಕಾ

ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ಗೆದ್ದಿದ್ದು, ಕೆಲವೇ ದಿನಗಳಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಪಂದ್ಯವೊಂದರಲ್ಲಿ ಭಾಗವಹಿಸಬೇಕಿದ್ದ ಮಹಿಳಾ ಕುಸ್ತಿಪಟುವೊಬ್ಬರು ಯಮುನೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

woman-wrestler-dies-in-yamuna-river-in bihar
ಯಮುನೆಯಲ್ಲಿ ಸ್ನಾನ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಉದಯೋನ್ಮುಖ ಮಹಿಳಾ ಕುಸ್ತಿಪಟು, ಇಬ್ಬರ ರಕ್ಷಣೆ

By

Published : Apr 17, 2022, 5:53 PM IST

ಪಾಣಿಪತ್(ಹರಿಯಾಣ):ಕುಸ್ತಿ ಅಭ್ಯಾಸ ನಡೆಸಿ, ಯಮುನಾ ನದಿಯಲ್ಲಿ ಸ್ನಾನ ಮಾಡಲು ಹೋದ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ಗೆದ್ದಿದ್ದ ಮಹಿಳಾ ಕುಸ್ತಿಪಟುವೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯ ಸಮಾಲ್ಖಾ ಪಟ್ಟಣದ ಸಮೀಪದಲ್ಲಿರುವ ಹತ್ವಾಲಾ ಗ್ರಾಮದಲ್ಲಿ ನಡೆದಿದೆ. ಪಟ್ಟಿಕಲ್ಯಾಣಾ ಗ್ರಾಮಕ್ಕೆ ಸೇರಿದ, 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಕುಸ್ತಿಪಟು ತನಿಷ್ಕಾ ಮೃತಪಟ್ಟವರು.

ತನಿಷ್ಕಾ ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳಿಗೆ ತಯಾರಿ ನಡೆಸುತ್ತಿದ್ದರು. ಕೆಲವೇ ದಿನಗಳಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಪಂದ್ಯವೊಂದರಲ್ಲಿ ಭಾಗವಹಿಸಬೇಕಿತ್ತು. ಇದಕ್ಕಾಗಿ ಕಠಿಣ ತರಬೇತಿ ಪಡೆಯುತ್ತಿದ್ದರು. ವಾರದ ಆರು ದಿನ ಅಕಾಡಮಿಯಲ್ಲಿಯೇ ತಯಾರಿ ನಡೆಸುತ್ತಿದ್ದು ಪ್ರತಿ ಭಾನುವಾರ ಯಮುನಾ ನದಿ ಸಮೀಪದಲ್ಲಿರುವ ಹತ್ವಾಲಾ ಗ್ರಾಮಕ್ಕೆ ಬಂದು ಮತ್ತೊಬ್ಬ ರಾಷ್ಟ್ರಮಟ್ಟದ ಆಟಗಾರ್ತಿ ರೇಣು ಮತ್ತು ಇನ್ನೊಬ್ಬ ಆಟಗಾರ್ತಿಯೊಂದಿಗೆ ಅಭ್ಯಾಸ ಮಾಡುತ್ತಿದ್ದರು.

ಕುಸ್ತಿ ಅಭ್ಯಾಸವಾದ ಬಳಿಕ ಯಮುನಾ ನದಿಗೆ ಸ್ನಾನ ಮಾಡಲು ಮೂವರು ತೆರಳಿದ್ದು, ಆಕಸ್ಮಿಕವಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇದನ್ನು ಕಂಡ ಸ್ಥಳೀಯರು ರೇಣು ಸೇರಿದಂತೆ ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ತನಿಷ್ಕಾ ಪ್ರಾಣ ಕಳೆದುಕೊಂಡಿದ್ದಾರೆ. ನಂತರ ಅವರ ಮೃತದೇಹವನ್ನು ಪಾಣಿಪತ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ತನಿಷ್ಕಾ ಮೃತದೇಹದ ಮರಣೋತ್ತರ ಪರೀಕ್ಷೆಗೆ ಒಪ್ಪದ ಕುಟುಂಬಸ್ಥರು, ವೈದ್ಯರಿಗೆ ಲಿಖಿತವಾಗಿ ಮನವಿ ಮಾಡಿ, ಮೃತದೇಹವನ್ನು ತಮ್ಮೂರಿಗೆ ಕೊಂಡೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ: 2 ತಿಂಗಳ ಹಿಂದೆ ಮದುವೆಯಾಗಿದ್ದ ಯೋಧ ಹುತಾತ್ಮ

ABOUT THE AUTHOR

...view details