ಕರ್ನಾಟಕ

karnataka

ETV Bharat / bharat

ರಾಜಸ್ಥಾನ ಕಾಂಗ್ರೆಸ್‌ ಸಚಿವನ ಪುತ್ರನಿಂದ ಯುವತಿ ಮೇಲೆ ಅತ್ಯಾಚಾರ: ಎಫ್‌ಐಆರ್‌ ದಾಖಲು

ಜೈಪುರದ ಮೂಲದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರಾಜಸ್ಥಾನ ಸರ್ಕಾರದ ಸಚಿವನ ಪುತ್ರನ ಮೇಲೆ ಪ್ರಥಮ ವರ್ತಮಾನ ಮಾಹಿತಿ(ಎಫ್‌ಐಆರ್) ದಾಖಲಿಸಿದ್ದಾರೆ. ಪಾನೀಯದಲ್ಲಿ ಮತ್ತು ಬರಿಸುವ ದ್ರಾವಣ ಬೆರೆಸಿ ಆರೋಪಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

By

Published : May 9, 2022, 9:15 AM IST

ರಾಜಸ್ಥಾನ ಕಾಂಗ್ರೆಸ್‌ ಸಚಿವನ ಪುತ್ರನ ಯುವತಿ ಮೇಲೆ ಅತ್ಯಾಚಾರ
ರಾಜಸ್ಥಾನ ಕಾಂಗ್ರೆಸ್‌ ಸಚಿವನ ಪುತ್ರನ ಯುವತಿ ಮೇಲೆ ಅತ್ಯಾಚಾರ

ನವದೆಹಲಿ:ಯುವತಿಯ ಮೇಲೆ ಅತ್ಯಾಚಾರ ಸಂಬಂಧಿಸಿದಂತೆ ರಾಜಸ್ಥಾನದ ಕಾಂಗ್ರೆಸ್‌ ಸಚಿವನ ಪುತ್ರನ ಮೇಲೆ ರಾಜಧಾನಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಚಿವ ಮಹೇಶ್‌ ಜೋಶಿ ಪುತ್ರ ರೋಹಿತ್‌ ಜೋಶಿ ಕಳೆದ ವರ್ಷದ ಜೈಪುರ ಮತ್ತು ದೆಹಲಿಯಲ್ಲಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ 23 ವರ್ಷದ ಯುವತಿ ಭಾನುವಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ದಕ್ಷಿಣ ದೆಹಲಿಯ ಪೊಲೀಸರು ಅತ್ಯಾಚಾರ, ಮತ್ತು ಬರಿಸುವ ಪದಾರ್ಥ ನೀಡಿರುವುದು, ಗರ್ಭಪಾತ, ಮದುವೆಯಾಗಲು ಬಲವಂತ-ಅಪಹರಣ, ಅನೈಸರ್ಗಿಕ ಅಪರಾಧ, ಬೆದರಿಕೆ ಮತ್ತು ಲೈಂಗಿಕ ದೌರ್ಜನ್ಯ ಎಂಬೆಲ್ಲಾ ಗುರುತರ ಆರೋಪಗಳ ಮೇಲೆ ಐಪಿಸಿಯ ವಿವಿಧ ಕಲಂಗಳಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.

'ಸಚಿವರ ಪುತ್ರ ಫೇಸ್‌ಬುಕ್‌ ಮೂಲಕ ನನಗೆ ಕಳೆದ ವರ್ಷ ಪರಿಚಯವಾಗಿದ್ದರು. ನಾವು ಜೈಪುರದಲ್ಲಿ ಭೇಟಿಯಾಗಿದ್ದೆವು. ನಂತರ ನನ್ನನ್ನು ಜನವರಿ 8, 2021ರಂದು ಜೈಪುರದ ಸವಾಯಿ ಮಾಧವ್ ಪುರಕ್ಕೆ ಕರೆಸಿಕೊಂಡರು. ಈ ಸಂದರ್ಭದಲ್ಲಿ ರಾತ್ರಿ ನನಗೆ ಮತ್ತು ಬರುವ ಪಾನೀಯ ಸೇವಿಸಲು ಕೊಟ್ಟಿದ್ದಾರೆ. ಮರುದಿನ ಬೆಳಗ್ಗೆದ್ದಾಗ ನಾನು ನಗ್ನವಾಗಿರುವ ಫೋಟೋ ಮತ್ತು ವಿಡಿಯೋವನ್ನು ಅವರು ನನಗೆ ತೋರಿಸಿದರು. ನನಗೆ ತುಂಬಾ ಭಯವಾಯಿತು ಮತ್ತು ನಾನು ಅಳುವುದಕ್ಕೆ ಶುರು ಮಾಡಿದೆ' ಎಂದು ಎಫ್ಐಆರ್‌ನಲ್ಲಿ ದಾಖಲಾಗಿದೆ.

'ನಾವು ಉಳಿದುಕೊಂಡಿದ್ದ ಹೊಟೇಲ್‌ನಲ್ಲಿ ನಾವಿಬ್ಬರು ಗಂಡ, ಹೆಂಡತಿ ಎಂದು ಅವರು ನಮೂದಿಸಿದ್ದರು. ನಂತರ ಅವರು ನನ್ನನ್ನು ಮದುವೆಯಾಗುವುದಾಗಿ ಭರವಸೆ ಕೊಟ್ಟಿದ್ದರು. ನಂತರ ಕೊಠಡಿಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಅವರು ನನ್ನನ್ನು ನಿಂದಿಸುವುದಕ್ಕೆ ಶುರು ಮಾಡಿದರು. ನನ್ನ ಮೇಲೆ ಹಲ್ಲೆ ಮಾಡುವುದಾಗಿಯೂ, ನನ್ನ ನಗ್ನ ದೃಶ್ಯ ಸೆರೆ ಹಿಡಿಯುವುದಾಗಿಯೂ ಬೆದರಿಕೆ ಹಾಕಿದರು. ಅಷ್ಟೇ ಅಲ್ಲ, ವಿಡಿಯೋವನ್ನು ಅಪ್ಲೋಡ್‌ ಮಾಡಿ ವೈರಲ್‌ ಮಾಡುವುದಾಗಿಯೂ ಎಚ್ಚರಿಕೆ ನೀಡಿದರು' ಎಂದು ಹೇಳಿರುವುದು ಎಫ್‌ಐಆರ್‌ ವಿವರವಾಗಿ ಉಲ್ಲೇಖಿಸಲಾಗಿದೆ. ಕಳೆದ ವರ್ಷದ ಆಗಸ್ಟ್‌ 11ರಂದು ನಾನು ಗರ್ಭವತಿಯಾಗಿದ್ದೆ. ಈ ಸಂದರ್ಭದಲ್ಲಿ ಅವರು ಮಗು ಬೇಡ ಎಂದಿದ್ದರು. ನನಗೆ ಬಲವಂತವಾಗಿ ಮಾತ್ರೆ ನೀಡಿದರು, ಆದರೆ ನಾನು ಸೇವಿಸಲಿಲ್ಲ ಎಂದು ತಿಳಿಸಿದ್ದಾರೆ.

ದೂರಿನಲ್ಲಿ ತಿಳಿಸಿರುವಂತೆ ಕಾಂಗ್ರೆಸ್‌ ಸಚಿವನ ಪುತ್ರ, ಈ ಯುವತಿಯ ಮೇಲೆ ದೆಹಲಿ ಮತ್ತು ಜೈಪುರದಲ್ಲಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ. ಅದಲ್ಲದೆ ಮದುವೆಯಾಗುವಂತೆ ಬಲ ಪ್ರಯೋಗ ಮಾಡಿರುವುದು ಕಾಣುತ್ತದೆ. ದೆಹಲಿಯ ಹಿರಿಯ ಪೊಲೀಸ್‌ ಅಧಿಕಾರಿಗಳು ಈ ವಿಚಾರವಾಗಿ ರಾಜಸ್ಥಾನ ಪೊಲೀಸರನ್ನು ಸಂಪರ್ಕಿಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತನ ವಿರುದ್ಧ ಅತ್ಯಾಚಾರ ಕೇಸು ದಾಖಲು

ABOUT THE AUTHOR

...view details