ಕರ್ನಾಟಕ

karnataka

ಎಕ್ಸಿಟ್ ಪೋಲ್: ಉತ್ತರ ಪ್ರದೇಶದಲ್ಲಿ ಭವಿಷ್ಯ ನಿಜವಾಗುವುದೇ?, ಏನಿದರ ಲೆಕ್ಕಾಚಾರ?

By

Published : Mar 9, 2022, 11:55 AM IST

Updated : Mar 10, 2022, 7:54 AM IST

2017ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲೇ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಯಾವುದೇ ಸಮೀಕ್ಷಾ ವರದಿಗಳು ಹೇಳುವ ಗೋಜಿಗೂ ಹೋಗಿರಲಿಲ್ಲ. ಹೀಗಾಗಿ ಈ ಬಾರಿ ಮತದಾನೋತ್ತರ ಸಮೀಕ್ಷಾ ವರದಿಗಳ ಭವಿಷ್ಯ ನಿಜವಾಗುತ್ತದೆಯೇ ಎಂಬುವುದೇ ಈಗಿರುವ ಪ್ರಶ್ನೆ.

UP
UP

ನವದೆಹಲಿ:ಇಡೀ ದೇಶದ ಚಿತ್ತ ಇಂದು (ಮಾ.10) ಹೊರ ಬೀಳುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದತ್ತ ನೆಟ್ಟಿದೆ. ಅದರಲ್ಲೂ ಉತ್ತರ ಪ್ರದೇಶದ ಚುನಾವಣೆಯನ್ನು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳು ತಮ್ಮ ಬಲಾಬಲ ಪ್ರದರ್ಶನಕ್ಕೆ ವೇದಿಕೆಯಾಗಿ ಮಾಡಿಕೊಂಡಿವೆ. ಈ ನಡುವೆ ಮತದಾನೋತ್ತರ ಸಮೀಕ್ಷಾ (ಎಕ್ಸಿಟ್ ಪೋಲ್) ವರದಿಗಳು ಮೂರು ರೀತಿಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಒಳಪಡುವಂತೆ ಮಾಡಿವೆ.

ಹೌದು, ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಯೇ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹೀಗಾಗಿ ಪೂರ್ವ ಉತ್ತರ ಪ್ರದೇಶದಲ್ಲಿ ಅಂತಿಮ ಎರಡು ಮತ್ತು ನಿರ್ಣಾಯಕ ಹಂತದ ಚುನಾವಣೆಯ ಹೊಣೆಯನ್ನು ಸ್ವತಃ ಪ್ರಧಾನಿ ಮೋದಿ ವಹಿಸಿಕೊಳ್ಳುವ ಮೂಲಕ ಬಿಜೆಪಿ ಪರವಾಗಿ ಮತದಾರರ ಚಿತ್ತವನ್ನು ಸೆಳೆಯುವಲ್ಲಿ ಯಶಸ್ವಿಯಾದರು ಎಂಬ ಒಂದು ರೀತಿ ಚರ್ಚೆ ನಡೆದಿದೆ.

ಎರಡನೆಯದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನೇತೃತ್ವದ ಸರ್ಕಾರದ ಆಡಳಿತ ವಿರೋಧಿ ಅಲೆಯನ್ನು ಸಮಾಜವಾದಿ ಪಕ್ಷಗಳು ಮತ್ತು ವಿರೋಧಪಕ್ಷಗಳು ನಂಬಿದ್ದರೂ, ಅದನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾದವು. ಮೂರನೆಯದಾಗಿ ಬಿಜೆಪಿಯ ಹಿಂದುತ್ವದ ಮೇಲಿನ ಓಲೈಕೆ ಉತ್ತರ ಪ್ರದೇಶದ ಮತದಾರರಲ್ಲಿ ಬಹುಮಟ್ಟಿಗೆ ಹಾಗೇ ಉಳಿದಿದೆ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ. ಆದರೆ, ಮತದಾನೋತ್ತರ ಸಮೀಕ್ಷಾ ವರದಿಗಳ ಭವಿಷ್ಯ ನಿಜವಾಗುತ್ತದೆಯೇ ಎಂಬುವುದೇ ಈಗಿರುವ ಪ್ರಶ್ನೆ.

ಈ ಹಿಂದೆ ಏನು ಹೇಳಿದ್ದವು?:ಪ್ರಸ್ತುತ ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಹುಪಾಲು ಮತದಾನೋತ್ತರ ಸಮೀಕ್ಷಾ ವರದಿಗಳು ಬಿಜೆಪಿಗೆ ಅನುಕೂಲಕರವಾದ ಗೆಲುವನ್ನೇ ಊಹಿಸಿವೆ. ಇಂಡಿಯಾ ಟುಡೆ-ಮೈ ಆಕ್ಸಿಸ್ ಸಮೀಕ್ಷಾ ವರದಿಗಳು 2017ರ ಚುನಾವಣೆಕ್ಕಿಂತ ಈ ಬಾರಿ ಕೇಸರಿ ಪಡೆಯು ಬಹುದೊಡ್ಡ ಗೆಲುವು ಸಾಧಿಸಲಿದೆ ಹೇಳಿವೆ. ಆದರೆ, ಈ ಹಿಂದೆ ಅನೇಕ ಚುನಾವಣೆಗಳಲ್ಲೂ ಇಂತಹ ಭವಿಷ್ಯ ವಾಣಿಗಳು ತಲೆ ಕೆಳಗೆಯಾಗಿದ್ದವು ಎಂಬುವುದೂ ಇಲ್ಲಿ ಗಮನಾರ್ಹ.

ಕಳೆದ ವರ್ಷ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗಲಿದೆ ಎಂದು ಸಮೀಕ್ಷಾ ವರದಿಗಳು ಭವಿಷ್ಯ ನುಡಿದಿದ್ದವು. ಅದೇ ರೀತಿಯಾಗಿ ಈ ಹಿಂದೆ 2018ರ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗಳಲ್ಲೂ ಭವಿಷ್ಯವಾಣಿಗಳು ಸಂಪೂರ್ಣವಾಗಿ ಹೊಂದಾಣಿಕೆ ಆಗಲಿರಲ್ಲ. ಇಷ್ಟೇ ಯಾಕೆ 2017ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲೇ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಯಾವುದೇ ಸಮೀಕ್ಷಾ ವರದಿಗಳು ಹೇಳುವ ಗೋಜಿಗೂ ಹೋಗಿರಲಿಲ್ಲ!.

ಆದ್ದರಿಂದ ಈಗಿನ ಮತದಾನೋತ್ತರ ಸಮೀಕ್ಷಾ ವರದಿಗಳಿಗೆ ಸೋಮವಾರ ನಡೆದ ಅಂತಿಮ ಹಂತದಲ್ಲಿ ನಡೆದ ಪೂರ್ವ ಉತ್ತರಪ್ರದೇಶದ ಮತದಾನದ ಲೆಕ್ಕಾಚಾರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂಬ ಪ್ರಶ್ನೆಯೂ ಮೂಡಿದೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈ ಪೂರ್ವ ಉತ್ತರಪ್ರದೇಶದ ವಾರಾಣಸಿ, ಮಿರ್ಜಾಪುರ್, ಅಜಂಗಢ್, ಭಡೋಹಿ, ಜೌನಪುರ ಮತ್ತು ಸೋನಧಾಹಿ, ಜೌನಪುರ ಮತ್ತು ಸೋನಭದ್ರ ಸೇರಿ ಇತರ ಭಾಗದಲ್ಲಿ 2014 ರವರೆಗೆ ಸಮಾಜವಾದಿ ಪಕ್ಷ (ಎಸ್​​ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ತಮ್ಮ ಬಿಗಿ ಹಿಡಿತವನ್ನು ಹೊಂದಿದ್ದವು. ಈಗ ಇಲ್ಲಿ ಬಿಜೆಪಿ ಪಾಬಲ್ಯ ಹೊಂದಿರುವುದು ಸುಳ್ಳಲ್ಲ.

2017ರ ವಿಧಾನಸಭಾ ಚುನಾವಣೆಯುಲ್ಲಿ ಉಂಟಾದ ಬಿಜೆಪಿ ಅಲೆಯಲ್ಲಿ ಈ ಭಾಗದ 54 ಸ್ಥಾನಗಳ ಪೈಕಿ 29 ಸ್ಥಾನದಲ್ಲಿ ಕೇಸರಿ ಪಡೆ ಅಭ್ಯರ್ಥಿಗಳು ಗೆದ್ದಿದ್ದರು. ಅಲ್ಲದೇ, ಬಿಜೆಪಿ ಮೈತ್ರಿ ಪಾಲುದಾರ ಪಕ್ಷಗಳು ಸಹ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಇತ್ತ, ಯಾದವ ಸಮುದಾಯದ ಪ್ರಾಬಲ್ಯ ಹೊಂದಿರುವ ಇಟಾಹ್, ಇಟಾವಾ ಮತ್ತು ಮೈನಪುರಿಯಲ್ಲೇ ಸಮಾಜವಾದಿ ಪಕ್ಷ ಮುಗ್ಗರಿಸಿದ್ದರೂ, ಈ ಭಾಗದಲ್ಲಿ 11 ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಸಮಾಜವಾದಿ ಪಕ್ಷ ಯಶಸ್ವಿಯಾಗಿತ್ತು. ಬಹುಜನ ಸಮಾಜ ಪಕ್ಷ ಸಹ 5 ಕಡೆಗಳಲ್ಲಿ ಗೆಲುವು ಸಾಧಿಸಿತ್ತು.

ಇನ್ನು, ಸದ್ಯ ಮಂಡಲ್ ಪಂಚಾಯಿತಿಗಳಲ್ಲಿ ಸಮಾಜವಾದಿ ಪಕ್ಷ ತನ್ನ ಹಿಡಿತ ಸಾಧಿಸಿದ್ದು, ಇದನ್ನು ಗಮನದಲ್ಲಿ ಇಟ್ಟುಕೊಂಡೇ ಈ ಭಾಗದಲ್ಲಿ ಪಾಬಲ್ಯ ಮರು ಸ್ಥಾಪಿಸುವ ಹುಮ್ಮಸ್ಸಿನಲ್ಲಿ ಇದೆ. ಆದರೆ, ಸದ್ಯ ಮತದಾನೋತ್ತರ ಸಮೀಕ್ಷಾ ವರದಿಗಳ ಪ್ರಕಾರ ಹಾಗೆ ಕಾಣಿಸುತ್ತಿಲ್ಲ.

ಮಹಿಳಾ ಮತದಾರರ ಪಾತ್ರ: ಉತ್ತರ ಪ್ರದೇಶದ ಎಲ್ಲ ಹಂತಗಳು ಮತ್ತು ಇದರಲ್ಲಿ ವಿಶೇಷವಾಗಿ ಕೊನೆ ಮೂರು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಮಹಿಳಾ ಮತದಾರರು ಸಾಕಷ್ಟು ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಅವರೇ ಅಧಿಕ ಮತಗಳನ್ನು ಚಲಾಯಿಸಿದ್ದಾರೆ. ಕೆಲವೆಡೆ ಪುರುಷರಿಗೆ ಸರಿಸಮಾನವಾಗಿ ಮಹಿಳಾ ಮತದಾರರು ಇದ್ದರೆ, ಮತ್ತೆ ಕೆಲಕಡೆ ಪುರುಷ ಮತದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದಾರೆ. 5ನೇ ಹಂತದ ಮತದಾನದಲ್ಲಿ ಪುರುಷ ಮತದಾರರಿಗೆ ಹೋಲಿಸಿದರೆ ಶೇ.11ರಷ್ಟು ಮಹಿಳಾ ಮತದಾರರು ಹೆಚ್ಚಿದ್ದಾರೆ. ಆರನೇ ಹಂತದಲ್ಲೂ ಶೇ.3ರಷ್ಟು ಹೆಚ್ಚು ಮಹಿಳಾ ಮತದಾರರ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಆದ್ದರಿಂದ ಬಿಜೆಪಿ ಮತ್ತು ಸಮಾಜವಾದಿ, ಕಾಂಗ್ರೆಸ್​, ಬಿಎಸ್​ಪಿ ಸೇರಿ ಎಲ್ಲ ಪಕ್ಷಗಳು ಮಹಿಳೆಯರ ಮನವೊಲಿಕೆ ಕಸರತ್ತು ಮಾಡಿವೆ. ಬಿಜೆಪಿ ಸರ್ಕಾರ ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಸೇರಿ ರಾಜ್ಯ ಮತ್ತು ಸರ್ಕಾರಗಳ ವಿವಿಧ ಯೋಜನೆಗಳ ಲಾಭ ಮಹಿಳೆಯರಿಗೆ ತಲುಪಿದೆ ಎಂದು ಬಿಜೆಪಿ ವಾದಿಸಿದೆ. ಆದರೆ, ಯೋಗಿ ಆದಿತ್ಯನಾಥ್ ಸರ್ಕಾರಕ್ಕೂ ಆಡಳಿತ ವಿರೋಧಿ ಅಂಶವನ್ನು ಎದುರಿಸಿದೆ ಎಂಬುವುದನ್ನು ಅಲ್ಲಗೆಳೆಯುವಂತಿಲ್ಲ. ಬಿಡಾಡಿ ದನಗಳ ಸಮಸ್ಯೆಯಿಂದ ಸಣ್ಣ ರೈತರ ಕೋಪಕ್ಕೆ ಈ ಸರ್ಕಾರ ಗುರಿಯಾಗಿದೆ. ಈ ವಿಷಯವನ್ನು ಎಸ್‌ಪಿ ನಾಯಕ ಅಖಿಲೇಶ್ ಯಾದವ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆಗಲಿ ಯಾವ ಪ್ರತಿಪಕ್ಷದ ನಾಯಕರೂ ಎತ್ತಲಿಲ್ಲ ಎನ್ನಲಾಗುತ್ತಿದೆ.

(ಇದನ್ನೂ ಓದಿ: ಇಡೀ ದೇಶದ ಚಿತ್ತ ಯುಪಿ ಫಲಿತಾಂಶದತ್ತ!: ಜಿದ್ದಾಜಿದ್ದಿನ ಮತಸಮರದಲ್ಲಿ ಗೆದ್ದು ಬೀಗುವವರಾರು?)

Last Updated : Mar 10, 2022, 7:54 AM IST

ABOUT THE AUTHOR

...view details