ಕರ್ನಾಟಕ

karnataka

ಪ.ಬಂಗಾಳ ಪಂಚಾಯತ್ ಚುನಾವಣೆ: 690ಕ್ಕೂ ಹೆಚ್ಚು ಬೂತ್‌ಗಳಲ್ಲಿಂದು ಮರು ಮತದಾನ

By

Published : Jul 10, 2023, 7:30 AM IST

Updated : Jul 10, 2023, 9:07 AM IST

ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಮತ್ತು ನಿರಂತರ ಹಿಂಸಾಚಾರದ ನಡುವೆಯೂ 690ಕ್ಕೂ ಹೆಚ್ಚು ಬೂತ್‌ಗಳಲ್ಲಿ ಇಂದು ಮರು ಮತದಾನ ನಡೆಯುತ್ತಿದೆ.

repoll
ಮರು ಮತದಾನ

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳು ಮತ್ತು ಚುನಾವಣೋತ್ತರ ಹಿಂಸಾಚಾರದ ಘಟನೆಗಳು ಮುಂದುವರೆದಿವೆ. ಪಂಚಾಯತ್ ಚುನಾವಣೆಯಲ್ಲಿ ಮತದಾನ 'ಅಸಿಂಧು' ಎಂದು ಘೋಷಿಸಲಾದ ಎಲ್ಲ 697 ಬೂತ್‌ಗಳಲ್ಲಿ ಜುಲೈ 10ರಂದು ಅಂದರೆ ಇಂದು ಮರು ಮತದಾನ ನಡೆಯುತ್ತಿದೆ.

ಮುರ್ಷಿದಾಬಾದ್ ಸೇರಿದಂತೆ ನಾಡಿಯಾ, ಪುರುಲಿಯಾ, ಮಾಲ್ಡಾ, ಬಿರ್ಭುಮ್, ಜಲ್ಪೈಗುರಿ ಹಾಗೂ ಉತ್ತರ ಮತ್ತು ದಕ್ಷಿಣ 24 ಪರಗಣಗಳಲ್ಲಿ ಮರು ಮತದಾನ ಪ್ರಗತಿಯಲ್ಲಿದೆ. ಶನಿವಾರ ಪಂಚಾಯತ್ ಚುನಾವಣೆ ವೇಳೆ ನಡೆದ ಹಿಂಸಾಚಾರದ ನಂತರ ರಾಜ್ಯ ಚುನಾವಣಾ ಆಯೋಗ ಮರು ಮತದಾನ ನಡೆಸಲು ನಿರ್ಧರಿಸಿತು. ಮತದಾನದ ದಿನದಂದು ಈ ಬೂತ್‌ಗಳಲ್ಲಿ ಮತಪೆಟ್ಟಿಗೆಗಳಿಗೆ ಹಾನಿ, ಪ್ರಿಸೈಡಿಂಗ್ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ನಕಲಿ ಮತದಾನದ ದೂರುಗಳು ಚುನಾವಣಾ ಆಯೋಗಕ್ಕೆ ಬಂದಿದ್ದು, ನಂತರ ಎಸ್‌ಇಸಿ ಮತದಾನ ರದ್ದುಗೊಳಿಸಿತ್ತು.

ಮರು ಮತದಾನಕ್ಕೆ ಆದೇಶಿಸಿರುವ ಪ್ರತಿಯೊಂದು ಬೂತ್‌ಗಳಲ್ಲಿ ಕನಿಷ್ಠ 4 ಕೇಂದ್ರ ಪೊಲೀಸ್ ಪಡೆ ಸಿಬ್ಬಂದಿ ನಿಯೋಜಿಸಲಾಗುವುದು. ಮರು ಮತದಾನವನ್ನು ಘೋಷಿಸಿದ ಜಿಲ್ಲೆಗಳಲ್ಲಿ ಮುರ್ಷಿದಾಬಾದ್ ಅತಿ ಹೆಚ್ಚು 174 ಬೂತ್‌ಗಳನ್ನು ಹೊಂದಿದೆ. ನಂತರ ಸ್ಥಾನದಲ್ಲಿ ಮಾಲ್ಡಾ 110 ಬೂತ್‌ಗಳನ್ನು ಹೊಂದಿದೆ. ಹಾಗೆಯೇ, ನಾಡಿಯಾದ 89 ಬೂತ್‌ಗಳಲ್ಲಿ, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು ಕ್ರಮವಾಗಿ 46 ಮತ್ತು 36 ಬೂತ್‌ಗಳಲ್ಲಿ ಮರು ಮತದಾನ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜ್ಯದ ಮೂರು ಹಂತದ ಪಂಚಾಯತ್ ವ್ಯವಸ್ಥೆಯಲ್ಲಿ ಒಟ್ಟು 73,887 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 2.06 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 61,636 ಬೂತ್‌ಗಳಲ್ಲಿ ಜನರು ಶನಿವಾರ ಮತ ಚಲಾಯಿಸಿದ್ದಾರೆ.

ಈ ಮಧ್ಯೆ, ಬಂಗಾಳದ ಗವರ್ನರ್ ಸಿ.ವಿ. ಆನಂದ ಬೋಸ್ ಅವರು ಭಾನುವಾರ ನವದೆಹಲಿಗೆ ತೆರಳಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪಂಚಾಯತ್ ಚುನಾವಣೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಹಾಗೆಯೇ, ಪಂಚಾಯತ್ ಚುನಾವಣೆ ಹಿಂಸಾಚಾರ ಮತ್ತು ಅಕ್ರಮಗಳ ಆರೋಪಗಳ ವಿರುದ್ಧ ಭಾನುವಾರ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಯಿತು.

ಕೋಲ್ಕತ್ತಾದಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಬೆಂಬಲಿಗರು, ಮತದಾನವನ್ನು ಶಾಂತಿಯುತವಾಗಿ ನಡೆಸಲು ಚುನಾವಣಾ ಸಮಿತಿಯು ಅಸಮರ್ಥವಾಗಿದೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಹಾಗೆಯೇ, ಪುರ್ಬಾ ಮೇದಿನಿಪುರ ಜಿಲ್ಲೆಯ ಶ್ರೀಕೃಷ್ಣಾಪುರ ಪ್ರೌಢಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ಮತಪೆಟ್ಟಿಗೆಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು, ನಂದಕುಮಾರ್‌ನಲ್ಲಿ ಹಲ್ದಿಯಾ-ಮೆಚೆಡಾ ರಾಜ್ಯ ಹೆದ್ದಾರಿಯನ್ನು ಕೆಲ ತಡೆದರು.

ಇದನ್ನೂ ಓದಿ :ಪಶ್ಚಿಮ ಬಂಗಾಳದ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿಲ್ಲ: ಬಿಎಸ್‌ಎಫ್‌

ಶನಿವಾರ ಮತದಾನದ ವೇಳೆ ನಡೆದ ಹಿಂಸಾಚಾರವನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಸಹ ಮಾಲ್ಡಾದ ರಥಬರಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 12 ಅನ್ನು ತಡೆದು ಆಕ್ರೋಶ ಹೊರಹಾಕಿದರು. ಆಡಳಿತಾರೂಢ ಟಿಎಂಸಿ ಬೆಂಬಲಿಗರು ಮತದಾರರನ್ನು ಬೆದರಿಸುವ ಮತ್ತು ಸುಳ್ಳು ಮತದಾನದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

Last Updated : Jul 10, 2023, 9:07 AM IST

ABOUT THE AUTHOR

...view details