ಕರ್ನಾಟಕ

karnataka

By

Published : May 17, 2021, 7:54 PM IST

ETV Bharat / bharat

ಸಿಬಿಐ vs ಮಮತಾ; ಸಚಿವರ ಬಂಧನವಾಗ್ತಿದ್ದಂತೆ ಹೈಡ್ರಾಮಾ, ಕೊನೆಗೆ ಬೇಲ್​; ಭದ್ರತಾ ಪಡೆ ಮೇಲೆ ಕಲ್ಲು ತೂರಾಟ

ಪಶ್ಚಿಮ ಬಂಗಾಳದಲ್ಲಿ ಸಿಬಿಐನಿಂದ ಟಿಎಂಸಿಯ ಇಬ್ಬರು ಸಚಿವರು ಸೇರಿ ಕೆಲವರ ಬಂಧನವಾಗ್ತಿದ್ದಂತೆ ಪರಿಸ್ಥಿತಿ ಉಲ್ಭಣಗೊಂಡಿದ್ದು, ಸಿಬಿಐ ನಿರ್ಧಾರದ ವಿರುದ್ಧ ಮಮತಾ ವಾಗ್ದಾಳಿ ನಡೆಸಿದರು. ಈ ನಡುವೆ ಬಂಧಿತ ಸಚಿವರಿಗೆ ಕೊನೆಗೆ ಬೇಲ್​ ಕೂಡಾ ಸಿಕ್ಕಿದೆ.

CBI vs Mamata
CBI vs Mamata

ಕೋಲ್ಕತ್ತಾ: ನಾರದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಇಬ್ಬರು ಸಚಿವರು ಸೇರಿದಂತೆ ನಾಲ್ವರ ಬಂಧನ ಮಾಡ್ತಿದ್ದಂತೆ ಕೋಲ್ಕತ್ತಾದಲ್ಲಿ ಹೈಡ್ರಾಮಾ ನಿರ್ಮಾಣಗೊಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮನ್ನು ಬಂಧನ ಮಾಡುವಂತೆ ಸಿಬಿಐ ಕಚೇರಿಗೆ ಆಗಮಿಸಿ ಧರಣಿ ನಡೆಸಿದರು. ಆದರೆ ದಿನದ ಅಂತ್ಯದಲ್ಲಿ ಬಂಧಿತ ಸಚಿವರಿಗೆ ಕೋರ್ಟ್​ನಿಂದ ಜಾಮೀನು ಸಿಕ್ಕಿತು.

ಸಿಬಿಐ ವಿರುದ್ಧ ಟಿಎಂಸಿ ಹೈಡ್ರಾಮಾ

ನಿಜಾಮ್​ ಪ್ಯಾಲೇಸ್​ನಲ್ಲಿರುವ ಸಿಬಿಐ ಕಚೇರಿಗೆ ಆಗಮಿಸಿದ ಮಮತಾ ಬ್ಯಾನರ್ಜಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಅಸಮಾಧಾನಗೊಂಡ ಮಮತಾ ತನ್ನನ್ನು ಬಂಧಿಸುವಂತೆ ಆಗ್ರಹಿಸಿದರು. ಸಂಜೆ ಆರು ಗಂಟೆಯವರೆಗೂ ಅಲ್ಲೇ ವಾಸ್ತವ್ಯ ಹೂಡಿದ್ದ ದೀದಿ ತದನಂತರ ತೆರಳಿದರು. ಈ ವೇಳೆ ಮಾತನಾಡಿದ ಅವರು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಲಿದೆ ಎಂದರು.

ಇದನ್ನೂ ಓದಿ: ನನಗೆ ಕೋವಿಡ್​ ಬರಲ್ಲ, ಯಾಕೆಂದ್ರೆ ನಾನು 'ಹಸುವಿನ ಮೂತ್ರ' ಕುಡಿಯುತ್ತೇನೆ ಎಂದ ಸಾಧ್ವಿ!

ಇಬ್ಬರು ಸಚಿವರು ಸೇರಿದಂತೆ ನಾಲ್ವರ ಬಂಧನ ಮಾಡಿರುವ ಸಿಬಿಐ ನಡೆ ಕಾನೂನು ಬಾಹಿರವಾಗಿದ್ದು, ಇದರಲ್ಲಿ ರಾಜಕೀಯ ಷಡ್ಯಂತ್ರವಿದೆ ಎಂದು ಮಮತಾ ಬ್ಯಾನರ್ಜಿ ವಕ್ತಾರ ಅನಿಂದ್ಯೌ ರೌತ್​ ಆರೋಪಿಸಿದ್ದಾರೆ.

ಕಲ್ಲು ತೂರಾಟ ನಡೆಸಿದ ಟಿಎಂಸಿ ಕಾರ್ಯಕರ್ತರು

ಸಚಿವರ ಬಂಧನವಾಗುತ್ತಿದ್ದಂತೆ ಸಿಬಿಐ ಕಚೇರಿ ಮುಂದೆ ಜಮಾವಣೆಗೊಂಡ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸಿಬಿಐ ಹಾಗೂ ಬಿಜೆಪಿ ನೇತೃತ್ವದ ಎನ್​ಡಿಎ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಸಿಬಿಐನ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ಸಹ ನಡೆಸಿದರು. ಗುಂಪು ಚದುರಿಸಲು ಭದ್ರತಾ ಪಡೆ ಲಾಠಿ ಚಾರ್ಜ್​ ನಡೆಸಿದರು.

ನಾಲ್ವರಿಗೂ ಜಾಮೀನು

ಪಶ್ಚಿಮ ಬಂಗಾಳ ಸಚಿವರಾಗಿರುವ ಫಿರ್ಹಾದ್ ಹಕೀಮ್​ ಮತ್ತು ಸುಬ್ರತಾ ಮುಖರ್ಜಿ ಜತೆಗೆ ಟಿಎಂಸಿ ಶಾಸಕ ಮದನ್ ಮಿತ್ರ ಹಾಗೂ ಮಾಜಿ ಸಚಿವ ಶೋವನ್​ ಚಟರ್ಜಿಯನ್ನ ಸಿಬಿಐ ಬಂಧಿಸಿ ವಿಚಾರಣೆ ನಡೆಸಿತು. ಸಿಬಿಐನಿಂದ ಬಂಧನಕ್ಕೊಳಗಾಗಿರುವ ಎಲ್ಲರಿಗೂ ಸಿಬಿಐ ಕೋರ್ಟ್​​ ಇದೀಗ ಜಾಮೀನು ಮಂಜೂರು ಮಾಡಿದೆ.

ಏನಿದು ನಾರದ ಲಂಚ ಪ್ರಕರಣ?

ತೃಣಮೂಲ ಕಾಂಗ್ರೆಸ್​​​ನ ರಾಜಕಾರಣಿಗಳು ಹಾಗೂ ಕೆಲ ಉನ್ನತ ಶ್ರೇಣಿ ಅಧಿಕಾರಿಗಳನ್ನ ಗುರಿಯಾಗಿಸಿಕೊಂಡು 2014ರಲ್ಲಿ ನಾರದ ಟಿವಿ ನ್ಯೂಸ್​ ದೃಶ್ಯ ಬಿತ್ತರಿಸಿತ್ತು. ಇದರಲ್ಲಿ ಸೆರೆಯಾದವರು ಟಿಎಂಸಿ ಸಚಿವರು, ಸಂಸದರು, ಶಾಸಕರು ಎಂದು ಹೇಳಲಾಗಿತ್ತು. 2017ರ ಮಾರ್ಚ್ ತಿಂಗಳಲ್ಲಿ ಕೋಲ್ಕತ್ತಾ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶ ನೀಡಿತ್ತು.ಇದೇ ವಿಚಾರವಾಗಿ ಸಿಬಿಐ ಇದೀಗ ಕೆಲವರ ಬಂಧನ ಮಾಡಿತ್ತು.

ಮಮತಾ ವಿರುದ್ಧ ಬಿಜೆಪಿ ದೂರು ದಾಖಲು

ಮಮತಾ ವಿರುದ್ಧ ಬಿಜೆಪಿ ದೂರು ದಾಖಲು

ವಿಧಾನಸಭಾ ಚುನಾವಣೆಗೂ ಮೊದಲು ಬಿಜೆಪಿ ನಾಯಕರ ವಿರುದ್ಧ ಬಾಹ್ಯ ಮಾಹಿತಿ ಸೋರಿಕೆ ಮಾಡಿದ್ದಕ್ಕಾಗಿ ಎಫ್​ಐಆರ್​​ ದಾಖಲು ಮಾಡಲಾಗಿದೆ. ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್​ ಘೋಷ್​ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು ಮಾಡಿದ್ದು, ತಮ್ಮ ದೂರಿನಲ್ಲಿ ನಾಲ್ಕು ಅಂಶ ಉಲ್ಲೇಖಿಸಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಚು. ಆಯೋಗ ನಿಯೋಜನೆ ಮಾಡಿದ್ದ ಕೇಂದ್ರ ಪಡೆಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಅಂಶವನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details