ಕೋಲ್ಕತ್ತಾ: ನಾರದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಇಬ್ಬರು ಸಚಿವರು ಸೇರಿದಂತೆ ನಾಲ್ವರ ಬಂಧನ ಮಾಡ್ತಿದ್ದಂತೆ ಕೋಲ್ಕತ್ತಾದಲ್ಲಿ ಹೈಡ್ರಾಮಾ ನಿರ್ಮಾಣಗೊಂಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮನ್ನು ಬಂಧನ ಮಾಡುವಂತೆ ಸಿಬಿಐ ಕಚೇರಿಗೆ ಆಗಮಿಸಿ ಧರಣಿ ನಡೆಸಿದರು. ಆದರೆ ದಿನದ ಅಂತ್ಯದಲ್ಲಿ ಬಂಧಿತ ಸಚಿವರಿಗೆ ಕೋರ್ಟ್ನಿಂದ ಜಾಮೀನು ಸಿಕ್ಕಿತು.
ನಿಜಾಮ್ ಪ್ಯಾಲೇಸ್ನಲ್ಲಿರುವ ಸಿಬಿಐ ಕಚೇರಿಗೆ ಆಗಮಿಸಿದ ಮಮತಾ ಬ್ಯಾನರ್ಜಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಅಸಮಾಧಾನಗೊಂಡ ಮಮತಾ ತನ್ನನ್ನು ಬಂಧಿಸುವಂತೆ ಆಗ್ರಹಿಸಿದರು. ಸಂಜೆ ಆರು ಗಂಟೆಯವರೆಗೂ ಅಲ್ಲೇ ವಾಸ್ತವ್ಯ ಹೂಡಿದ್ದ ದೀದಿ ತದನಂತರ ತೆರಳಿದರು. ಈ ವೇಳೆ ಮಾತನಾಡಿದ ಅವರು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಲಿದೆ ಎಂದರು.
ಇದನ್ನೂ ಓದಿ: ನನಗೆ ಕೋವಿಡ್ ಬರಲ್ಲ, ಯಾಕೆಂದ್ರೆ ನಾನು 'ಹಸುವಿನ ಮೂತ್ರ' ಕುಡಿಯುತ್ತೇನೆ ಎಂದ ಸಾಧ್ವಿ!
ಇಬ್ಬರು ಸಚಿವರು ಸೇರಿದಂತೆ ನಾಲ್ವರ ಬಂಧನ ಮಾಡಿರುವ ಸಿಬಿಐ ನಡೆ ಕಾನೂನು ಬಾಹಿರವಾಗಿದ್ದು, ಇದರಲ್ಲಿ ರಾಜಕೀಯ ಷಡ್ಯಂತ್ರವಿದೆ ಎಂದು ಮಮತಾ ಬ್ಯಾನರ್ಜಿ ವಕ್ತಾರ ಅನಿಂದ್ಯೌ ರೌತ್ ಆರೋಪಿಸಿದ್ದಾರೆ.
ಕಲ್ಲು ತೂರಾಟ ನಡೆಸಿದ ಟಿಎಂಸಿ ಕಾರ್ಯಕರ್ತರು
ಸಚಿವರ ಬಂಧನವಾಗುತ್ತಿದ್ದಂತೆ ಸಿಬಿಐ ಕಚೇರಿ ಮುಂದೆ ಜಮಾವಣೆಗೊಂಡ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸಿಬಿಐ ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಸಿಬಿಐನ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ಸಹ ನಡೆಸಿದರು. ಗುಂಪು ಚದುರಿಸಲು ಭದ್ರತಾ ಪಡೆ ಲಾಠಿ ಚಾರ್ಜ್ ನಡೆಸಿದರು.