ಕರ್ನಾಟಕ

karnataka

By PTI

Published : Dec 13, 2023, 4:52 PM IST

Updated : Dec 13, 2023, 5:28 PM IST

ETV Bharat / bharat

ಛತ್ತೀಸ್‌ಗಢ ಸಿಎಂ ಆಗಿ ವಿಷ್ಣು ದೇವ್ ಸಾಯಿ ಪದಗ್ರಹಣ: ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ಬಘೇಲ್​ ಭಾಗಿ

Vishnu Deo Sai sworn in as CM of Chhattisgarh: ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಹಾಗೂ ಉಪಮುಖ್ಯಮಂತ್ರಿಗಳಾಗಿ ವಿಜಯ್ ಶರ್ಮಾ ಹಾಗೂ ಅರುಣ್ ಸಾವೊ ಪ್ರಮಾಣವಚನ ಸ್ವೀಕರಿಸಿದರು.

Vishnu Deo Sai sworn in as Chief Minister of Chhattisgarh in Raipur
ಛತ್ತೀಸ್‌ಗಢ ಸಿಎಂ ಆಗಿ ವಿಷ್ಣು ದೇವ್ ಸಾಯಿ ಪದಗ್ರಹಣ: ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ಬಘೇಲ್​ ಭಾಗಿ

ರಾಯ್‌ಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಇಂದು ಪದಗ್ರಹಣ ಮಾಡಿದರು. ಉಪಮುಖ್ಯಮಂತ್ರಿಗಳಾಗಿ ವಿಜಯ್ ಶರ್ಮಾ ಹಾಗೂ ಅರುಣ್ ಸಾವೊ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇಲ್ಲಿನ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಬಿಸ್ವಾ ಭೂಷಣ ಹರಿಚಂದನ್ ಅವರು ಸಿಎಂ ಹಾಗೂ ಡಿಸಿಎಂಗಳಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

2020ರಲ್ಲಿ ಛತ್ತೀಸ್‌ಗಢ ರಾಜ್ಯವಾಗಿ ರಚನೆಯಾಗಿದ್ದು, 59 ವರ್ಷದ ವಿಷ್ಣು ದೇವ್ ಸಾಯಿ ರಾಜ್ಯದ ನಾಲ್ಕನೇ ಸಿಎಂ ಆಗಿದ್ದಾರೆ. ಇವರು ಆದಿವಾಸಿ ಜನಾಂಗಕ್ಕೆ ಸೇರಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾದ 54 ವರ್ಷದ ಅರುಣ್​ ಸಾವೊ ಅವರು ಪ್ರಭಾವಿ ಸಾಹು (ತೇಲಿ) ಒಬಿಸಿ ಸಮುದಾಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ 50 ವರ್ಷದ ವಿಜಯ್ ಶರ್ಮಾ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್​ ಶಾ, ನಿತಿನ್​ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಛತ್ತೀಸ್‌ಗಢದ ಮಾಜಿ ಸಿಎಂ, ಕಾಂಗ್ರೆಸ್​ ನಾಯಕ ಭೂಪೇಶ್ ಬಘೇಲ್​, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಅಸ್ಸೋಂ ಸಿಎಂ ಹಿಮಂತ​ ಬಿಸ್ವಾ ಶರ್ಮಾ, ಉತ್ತರಾಖಂಡ್ ಸಿಎಂ ಪುಷ್ಕರ್ ಧಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ರಾಯ್​ಪುರದ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ವಿಷ್ಣು ದೇವ ಸಾಯಿ ಪ್ರಾರ್ಥನೆ ಸಲ್ಲಿಸಿದರು. ಇತ್ತೀಚೆಗೆ ನಡೆದ ಛತ್ತೀಸ್‌ಗಢದ 90 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ 54 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಆಡಳಿತಾರೂಢ ಕಾಂಗ್ರೆಸ್‌ 35ಕ್ಕೆ ಕುಸಿದಿವೆ. ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮುಂದಿನ ಸಿಎಂ ಆಗಿ ವಿಷ್ಣು ದೇವ್ ಸಾಯಿ ಅವರ ಹೆಸರನ್ನು ಮಾಜಿ ಸಿಎಂ, ಬಿಜೆಪಿ ನಾಯಕ ರಮಣ್ ಸಿಂಗ್ ಪ್ರಕಟಿಸಿದ್ದರು.

ಕುಂಕುರಿ ವಿಧಾನಸಭಾ ಕ್ಷೇತ್ರದಲ್ಲಿ 87,604 ಮತಗಳ ಅಂತರದಿಂದ ವಿಷ್ಣು ದೇವ್ ಗೆದ್ದಿದ್ದು, 2020ರಿಂದ 2022ರವರೆಗೆ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲ ಪ್ರಧಾನಿ ಮೋದಿ ಸಂಪುಟದಲ್ಲಿ ಅವರು ಕೇಂದ್ರ ಗಣಿ ಮತ್ತು ಉಕ್ಕಿನ ರಾಜ್ಯ ಸಚಿವರಾಗಿದ್ದರು. ಬುಡಕಟ್ಟು ಮತದಾರರಲ್ಲಿ ಹೆಚ್ಚಿನ ಗೌರವ ಹೊಂದಿರುವ ನೂತನ ಸಿಎಂ, ಹಳ್ಳಿಯಿಂದ ಬೆಳೆದು ಬಂದವರು.

ಸರಪಂಚ್ ಆಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದರು. 1989ರಲ್ಲಿ ಬಾಗಿಯಾ ಗ್ರಾಮ ಪಂಚಾಯತ್‌ನ ಸರಪಂಚ್ ಆಗಿ ಆಯ್ಕೆಯಾಗಿದ್ದರು. ಮರು ವರ್ಷ ಅವರು ಅವಿರೋಧವಾಗಿ ಸರಪಂಚ್​ ನೇಮಕವಾಗಿದ್ದರು. 1999ರಿಂದ 2014ರ ವರೆಗೆ ರಾಯಗಢ ಕ್ಷೇತ್ರದಿಂದ ಸತತ ನಾಲ್ಕು ಲೋಕಸಭೆಗೆ ಆಯ್ಕೆಗೂ ಆಯ್ಕೆಯಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಿರಲಿಲ್ಲ.

ಇದನ್ನೂ ಓದಿ:ಮಧ್ಯಪ್ರದೇಶದ ನೂತನ ಸಿಎಂ ಆಗಿ ಮೋಹನ್​ ಯಾದವ್ ದೇವರ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕಾರ

Last Updated : Dec 13, 2023, 5:28 PM IST

ABOUT THE AUTHOR

...view details