ಕರ್ನಾಟಕ

karnataka

By

Published : Apr 8, 2022, 8:37 PM IST

ETV Bharat / bharat

10ನೇ ತರಗತಿ ಟಾಪರ್‌ ವಿದ್ಯಾರ್ಥಿನಿಗೆ IAS ಕನಸು: ಬಾಲಕಿಯ ಶಿಕ್ಷಣಕ್ಕೆ ನೆರವಾಗಲು ಪಣತೊಟ್ಟ ಒಂದಿಡೀ ಗ್ರಾಮ!

ಆರ್ಥಿಕವಾಗಿ ತೀರಾ ಹಿಂದುಳಿದ ವಿದ್ಯಾರ್ಥಿನಿಯೋರ್ವಳು 10ನೇ ತರಗತಿ ಪರೀಕ್ಷೆಯಲ್ಲಿ ಬಿಹಾರದ ಜೆಹಾನಾಬಾದ್ ಜಿಲ್ಲೆಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾಳೆ. ಇದೀಗ ಆಕೆಯ ಮುಂದಿನ ವ್ಯಾಸಂಗಕ್ಕಾಗಿ ಗ್ರಾಮದ ನಿವಾಸಿಗಳು ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ.

Jehanabad matric topper Priyanshu Kumari
Jehanabad matric topper Priyanshu Kumari

ಜೆಹಾನಾಬಾದ್​(ಬಿಹಾರ):10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್​ ಆಗಿರುವ ಪ್ರಿಯಾಂಶು ಕುಮಾರಿ ಐಎಎಸ್​​ ಆಗುವ ಕನಸು ಕಂಡಿದ್ದು, ಆಕೆಯ ಆಸೆ ಈಡೇರಿಸಲು ಇದೀಗ ಇಡೀ ಗ್ರಾಮವೇ ಒಂದಾಗಿದೆ. ಅದಕ್ಕೋಸ್ಕರ ಸಮಿತಿ ರಚನೆ ಮಾಡಿರುವ ಗ್ರಾಮದ ಜನರು, ಹಣಕಾಸು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಬಿಹಾರದಲ್ಲಿ 10ನೇ ತರಗತಿ ಪರೀಕ್ಷಾ ಫಲಿತಾಂಶ ಬಹಿರಂಗಗೊಂಡಿದ್ದು, ಜೆಹಾನಾಬಾದ್ ಜಿಲ್ಲೆಯ ಸುಮೇರಾ ಗ್ರಾಮದ ನಿವಾಸಿ ಪ್ರಿಯಾಂಶು ಕುಮಾರಿ ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ತಮ್ಮ ಕುಟುಂಬ, ಗ್ರಾಮ ಹಾಗೂ ಜಿಲ್ಲೆಗೆ ಗೌರವ ತಂದಿದ್ದಾರೆ. ಆದರೆ, ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಮನೆಯ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿಲ್ಲ. ಜೊತೆಗೆ ಸಿವಿಲ್​ ಸರ್ವೀಸ್​ ಪರೀಕ್ಷೆ ಪಾಸ್​ ಆಗುವ ಕನಸು ಕಾಣುತ್ತಿರುವ ವಿದ್ಯಾರ್ಥಿನಿಗೆ ಆರ್ಥಿಕ ಸಮಸ್ಯೆ ದೊಡ್ಡ ಸವಾಲಾಗಿದೆ. ಇದೀಗ ಬಾಲಕಿಯ ಮುಂದಿನ ವಿದ್ಯಾಭ್ಯಾಸಕ್ಕಾಗಿ ಗ್ರಾಮಸ್ಥರೆಲ್ಲಾ ಒಂದಾಗಿದ್ದು, ಆಕೆಯ ಕನಸಿಗೆ ರೆಕ್ಕೆಪುಕ್ಕ ಬಂದಿವೆ.


ಪ್ರಿಯಾಂಶು ಉನ್ನತ ವ್ಯಾಸಂಗ ಮಾಡಲು ನೆರವು ನೀಡಲು ಇದೀಗ ಜಿಲ್ಲೆಯ ಶ್ರೀಮಂತರು, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಮುಂದಾಗಿದ್ದಾರೆ. ಇದಕ್ಕಾಗಿ ಸಮಿತಿ ರಚನೆ ಮಾಡಿದ್ದು, ಅದರಲ್ಲಿ ನಿವೃತ್ತ ಯೋಧ ಸಂತೋಷ್ ಕುಮಾರ್​, ಪಂಚಾಯ್ತಿ ಮಾಜಿ ಅಧ್ಯಕ್ಷ ದಯಾನಂದ್ ಪ್ರಸಾದ್​, ಜಿಲ್ಲಾ ಚುನಾವಣಾ ಯೂತ್ ಐಕಾನ್​ ಅಮಿತ್ ಕುಮಾರ್​ ಸೇರಿದಂತೆ ಅನೇಕರು ಇದ್ದಾರೆ.

ಇದನ್ನೂ ಓದಿ:ಕ್ಲಾಸ್​ ರೂಂನಲ್ಲೇ ಮದ್ಯ ಸೇವನೆ ಮಾಡಿದ ವಿದ್ಯಾರ್ಥಿನಿಯರು!: ವಿಡಿಯೋ ವೈರಲ್

ವಿದ್ಯಾರ್ಥಿನಿ ಪ್ರಿಯಾಂಶು ಕುಮಾರಿ ಪ್ರತಿಕ್ರಿಯಿಸಿ, 'ನನ್ನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಮುಂದಿನ ವ್ಯಾಸಂಗಕ್ಕಾಗಿ ಅಡೆತಡೆ ಎದುರಾಗಿದೆ. ಇದೀಗ ಗ್ರಾಮಸ್ಥರು, ಜಿಲ್ಲೆಯ ಜನರು ಸಹಾಯದ ಭರವಸೆ ನೀಡಿದ್ದಾರೆ. ಅದಕ್ಕೋಸ್ಕರ ಸಮಿತಿ ರಚನೆ ಮಾಡಿದ್ದಾರೆ. ಇದು ನನ್ನ ಮುಂದಿನ ವ್ಯಾಸಂಗಕ್ಕೆ ತುಂಬಾ ಸಹಕಾರಿಯಾಗಲಿದೆ' ಎಂದಿದ್ದಾರೆ.

ಸಮಿತಿಯ ಸದಸ್ಯ ದಯಾನಂದ್ ಪ್ರಸಾದ್ ಮಾತನಾಡಿ, 'ಪ್ರಿಯಾಂಶು ಅತ್ಯಂತ ಬಡ ಕುಟುಂಬದ ಮಗಳು. ಆಕೆಗೆ ತಂದೆ ಇಲ್ಲ. ಮನೆಯಲ್ಲಿ ಅಮ್ಮ, ಅಜ್ಜಿ, ಅಕ್ಕ ಮಾತ್ರ ಇದ್ದಾರೆ. ಕಠಿಣ ವಿದ್ಯಾಭ್ಯಾಸದಿಂದಾಗಿ ಇದೀಗ ಉತ್ತಮ ಸಾಧನೆ ಮಾಡಿದ್ದಾರೆ. ಆಕೆಯ ಮುಂದಿನ ವಿದ್ಯಾಭ್ಯಾಸಕ್ಕಾಗಿ ನಾವು ಎಲ್ಲ ರೀತಿಯ ಖರ್ಚು ವೆಚ್ಚ ಭರಿಸಲಿದ್ದೇವೆ' ಎಂದು ತಿಳಿಸಿದರು.

ಪ್ರಿಯಾಂಶು ಹುಟ್ಟುವ ಮೊದಲೇ ತಂದೆ ಕೌಶಲೇಂದ್ರ ಶರ್ಮಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ಮನೆಯ ಜವಾಬ್ದಾರಿ ತಾಯಿ ಮೇಲಿದೆ. ಇದರ ಮಧ್ಯೆ ಬಾಲಕಿಯ ಭವಿಷ್ಯದ ವಿದ್ಯಾಭ್ಯಾಸಕ್ಕಾಗಿ ಎಲ್ಲೆಡೆಯಿಂದ ಆರ್ಥಿಕ ನೆರವು ಹರಿದು ಬರುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details