ಕರ್ನಾಟಕ

karnataka

By

Published : Oct 27, 2021, 1:53 PM IST

ETV Bharat / bharat

ಖ್ಯಾತ ಗಾಂಧಿವಾದಿ, ಪದ್ಮಶ್ರೀ ಪುರಸ್ಕೃತ ಕರ್ನಾಟಕ ಮೂಲದ ಡಾ.ಎಸ್‌.ಎನ್‌.ಸುಬ್ಬರಾವ್‌ ವಿಧಿವಶ

ಖ್ಯಾತ ಗಾಂಧಿವಾದಿ, ಕರ್ನಾಟಕ ಮೂಲದ ಸುಬ್ಬರಾವ್‌ (93) ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಜೈಪುರದ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

Veteran Gandhian Subbarao passes away in Rajasthan
ಖ್ಯಾತ ಗಾಂಧಿವಾದಿ, ಪದ್ಮಶ್ರೀ ಪುರಸ್ಕೃತ ಕರ್ನಾಟಕ ಮೂಲದ ಸುಬ್ಬಾರಾವ್‌ ವಿಧಿವಶ

ಜೈಪುರ್‌(ರಾಜಸ್ಥಾನ):ಹಿರಿಯ ಗಾಂಧಿವಾದಿ, ವಿಚಾರವಾದಿ ಡಾ.ಎಸ್.ಎನ್.ಸುಬ್ಬರಾವ್ ಜೈಪುರದ ಆಸ್ಪತ್ರೆಯಲ್ಲಿಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ನಿನ್ನೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಿಎಂ ಅಶೋಕ್ ಗೆಹ್ಲೋಟ್ ಆಸ್ಪತ್ರೆಗೆ ಭೇಟಿ ನೀಡಿ ಸುಬ್ಬರಾವ್‌ ಆರೋಗ್ಯ ವಿಚಾರಿಸಿದ್ದರು.

ಶ್ರಮದಾನದ ಮೂಲಕ ಪ್ರಸಿದ್ಧರಾಗಿದ್ದ ಗಾಂಧಿವಾದಿಗೆ ರಾಜಸ್ಥಾನದ ಜೊತೆಗೆ ಅಪಾರವಾದ ಬಾಂಧವ್ಯವಿತ್ತು. ಸುಬ್ಬರಾವ್ ಅವರು ಸಿಎಂ ಗೆಹ್ಲೋಟ್ ಅವರ ಒತ್ತಾಯದ ಮೇರೆಗೆ ಚಿಕಿತ್ಸೆಗಾಗಿ ರಾಜಸ್ಥಾನಕ್ಕೆ ಬಂದಿದ್ದರು. ಅಂದಿನಿಂದ ಇಲ್ಲಿಯೇ ವಾಸವಾಗಿದ್ದರು. ಯುವಕರಿಗೆ ಸ್ಫೂರ್ತಿಯ ಸೆಲೆಯೆಂದೇ ಪರಿಗಣಿಸಲ್ಪಟ್ಟಿದ್ದ ಸುಬ್ಬರಾವ್ ಮೂಲತಃ ಕರ್ನಾಟಕದವರು. ಚಂಬಲ್ ಶಾಂತಿ ಮಿಷನ್ ಸಂಸ್ಥಾಪಕರಾಗಿದ್ದು ಹಲವಾರು ಡಕಾಯಿತರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಪ್ರೇರೇಪಕ ಶಕ್ತಿಯಾಗಿದ್ದರು.

1929ರಲ್ಲಿ ಬೆಂಗಳೂರಿನಲ್ಲಿ ಜನನ

ಸುಬ್ಬರಾವ್ 1929ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದರು. ಶೈಕ್ಷಣಿಕ ಬದುಕಿನ ಆರಂಭದಲ್ಲೇ ಮಹಾತ್ಮ ಗಾಂಧಿಯವರ ಬೋಧನೆಗಳಿಂದ ಪ್ರೇರಿತರಾಗಿದ್ದರು. 1942ರ ಆಗಸ್ಟ್ 9 ರಂದು ತಮ್ಮ 13 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಚಳುವಳಿ ಸೇರಿದ್ದರು. ಬ್ರಿಟಿಷ್ ಪೊಲೀಸರು ಬಂಧಿಸಿದ ನಂತರ ಅವರು ಗೋಡೆಯ ಮೇಲೆ 'ಕ್ವಿಟ್‌ ಇಂಡಿಯಾ' ಎಂದು ಬರೆಯುವ ಮೂಲಕ ಅಂದಿನಿಂದ ಸುಬ್ಬರಾವ್ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಮತ್ತು ರಾಷ್ಟ್ರ ಸೇವಾದಳದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸುಬ್ಬರಾವ್ ಅವರ ಸೇವೆ ಪರಿಗಣಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಸುಬ್ಬರಾವ್‌ ಅವರ ಮೃತದೇಹ ಇಂದು ಸಂಜೆ ಚೆನ್ನೈಗೆ ಆಗಮಿಸಲಿದ್ದು, ಅಲ್ಲಿಂದ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.

ABOUT THE AUTHOR

...view details