ಕರ್ನಾಟಕ

karnataka

By ETV Bharat Karnataka Team

Published : Nov 15, 2023, 2:06 PM IST

ETV Bharat / bharat

ಹಿರಿಯ ಕಮ್ಯುನಿಸ್ಟ್ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಎನ್.ಶಂಕರಯ್ಯ ನಿಧನ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್ ನಾಯಕ ಎನ್.ಶಂಕರಯ್ಯ ಚೆನ್ನೈನಲ್ಲಿ ನಿಧನರಾದರು.

CPIM veteran leader N.Sankaraiah passes away
CPIM veteran leader N.Sankaraiah passes away

ಚೆನ್ನೈ: ಸ್ವಾತಂತ್ರ್ಯ ಹೋರಾಟಗಾರ, ದೇಶದ ಹಿರಿಯ ಕಮ್ಯುನಿಸ್ಟ್ ನಾಯಕ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಎನ್. ಶಂಕರಯ್ಯ ಅವರು ನವೆಂಬರ್ 15, 2023 ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ 101 ನೇ ವಯಸ್ಸಿನಲ್ಲಿ ನಿಧನರಾದರು. ಶಂಕರಯ್ಯ ಕಳೆದ ಒಂದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ನವೆಂಬರ್ 13 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಶಂಕರಯ್ಯನವರು 10 ದಿನಗಳ ಹಿಂದಿನವರೆಗೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ನವೆಂಬರ್ 7 ರಂದು ದಿವಂಗತ ನಾಯಕ ಪಿ. ರಾಮಮೂರ್ತಿ ಅವರ ಪ್ರತಿಮೆ ಅನಾವರಣ ಮತ್ತು ಮಾಜಿ ರಾಜ್ಯ ಕಾರ್ಯದರ್ಶಿ ಎಂ.ಆರ್.ವೆಂಕಟರಾಮನ್ ಅವರ ಹೆಸರಿನಲ್ಲಿ ಸಭಾಂಗಣ ಉದ್ಘಾಟಿಸಿದಾಗ ಅವರು ಪಕ್ಷಕ್ಕೆ ತಮ್ಮ ಶುಭಾಶಯಗಳನ್ನು ಕಳುಹಿಸಿದ್ದರು.

ಜುಲೈ 15, 1922 ರಂದು ಜನಿಸಿದ ಶಂಕರಯ್ಯ ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) 32 ರಾಷ್ಟ್ರೀಯ ಮಂಡಳಿ ಸದಸ್ಯರಲ್ಲಿ ಒಬ್ಬರಾಗಿದ್ದರು. ನಂತರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಅವರು ಪಕ್ಷ ತೊರೆದರು. ಇದು 1964 ರಲ್ಲಿ ಸಿಪಿಐ (ಎಂ) ರಚನೆಗೆ ಕಾರಣವಾಯಿತು. ರಾಷ್ಟ್ರೀಯ ಮಂಡಳಿ ಸದಸ್ಯರಲ್ಲಿ ಈಗ ಉಳಿದಿರುವ ಮತ್ತೊಬ್ಬ ಸದಸ್ಯ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಆಗಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಶಂಕರಯ್ಯ ಅವರು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

1941ರಲ್ಲಿ ಮಧುರೈನ ಅಮೆರಿಕನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಶಂಕರಯ್ಯನವರನ್ನು ಮೊದಲ ಬಾರಿಗೆ ಬಂಧಿಸಲಾಯಿತು. ಆಗ ಮಧುರೈನಲ್ಲಿ ಅಡಗಿಕೊಂಡಿದ್ದ ದಿವಂಗತ ಕಮ್ಯುನಿಸ್ಟ್ ನಾಯಕ ಎ.ಕೆ.ಗೋಪಾಲನ್ ಅವರ ಸೂಚನೆಯ ಮೇರೆಗೆ ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಬೆಂಬಲಿಸಿ ಅವರು ಪ್ರತಿಭಟನೆ ಆಯೋಜಿಸಿದ್ದರು. ಪೊಲೀಸರು ವಿದ್ಯಾರ್ಥಿ ನಿಲಯದಲ್ಲಿ ಶೋಧ ನಡೆಸಿದಾಗ ಶಂಕರಯ್ಯ ಬರೆದ ಕರಪತ್ರಗಳು ಸಿಕ್ಕ ನಂತರ ಅವರನ್ನು ಬಂಧಿಸಲಾಗಿತ್ತು. ಈ ಘಟನೆಯಿಂದ ಅವರ ಅಧ್ಯಯನ ಮೊಟಕುಗೊಂಡಿತು. ಅಂತಿಮ ಪರೀಕ್ಷೆಗಳಿಗೆ 15 ದಿನಗಳ ಮೊದಲು ಜೈಲಿನಲ್ಲಿದ್ದ ಕಾರಣ ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ 18 ತಿಂಗಳುಗಳ ಕಾಲ ಅವರು ಜೈಲು ಶಿಕ್ಷೆ ಅನುಭವಿಸಬೇಕಾಯಿತು.

ಕೆಲ ತಿಂಗಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶಂಕರಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡುವುದಾಗಿ ಘೋಷಿಸಿದ್ದರು. ಮಧುರೈ ಕಾಮರಾಜ್ ವಿಶ್ವವಿದ್ಯಾಲಯವು ಡಾಕ್ಟರೇಟ್​ ನೀಡಬೇಕಿತ್ತು. ಆದರೆ, ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ತಿಳಿಸಿದ್ದರು. ರವಿ ರಾಜ್ಯಪಾಲರಾಗಿ ವಿಶ್ವವಿದ್ಯಾಲಯದ ಕುಲಪತಿಯೂ ಆಗಿದ್ದಾರೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಸ್ಟಾಲಿನ್ ಅವರು ಶಂಕರಯ್ಯ ಅವರಿಗೆ ತಗೈಸಲ್ ತಮಿಳರ್ ಪ್ರಶಸ್ತಿ ನೀಡಿ ಗೌರವಿಸಿದ್ದರು. ಆದರೆ ಶಂಕರಯ್ಯ ಅವರು ತಾವು ಬಹುಮಾನವಾಗಿ ಪಡೆದ 10 ಲಕ್ಷ ರೂಪಾಯಿಗಳನ್ನು ಕೋವಿಡ್ -19 ಪರಿಹಾರ ಕಾರ್ಯಗಳಿಗಾಗಿ ಸರ್ಕಾರಕ್ಕೆ ದಾನ ಮಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಶಂಕರಯ್ಯ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ, ಅವರು ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ನಂತರ ದೇಶವು ಸ್ವಾತಂತ್ರ್ಯ ಪಡೆದ ನಂತರ ಎಂಟು ವರ್ಷ ಜೈಲಿನಲ್ಲಿ ಕಳೆದಿದ್ದರು. 1946ರಲ್ಲಿ ಮಧುರೈ ಪಿತೂರಿ ಪ್ರಕರಣದಲ್ಲಿ ಅವರು ಎರಡನೇ ಆರೋಪಿಯಾಗಿದ್ದರು. 1965ರಲ್ಲಿ ಕೂಡ ಅವರು 16 ತಿಂಗಳ ಕಾಲ ಜೈಲಿನಲ್ಲಿದ್ದರು.

ಶಂಕರಯ್ಯನವರು ಪ್ರಬಲ ಭಾಷಣಕಾರರಾಗಿದ್ದರು ಮತ್ತು ದಿವಂಗತ ಕಾಂಗ್ರೆಸ್ ನಾಯಕ ಜಿ.ಕೆ.ಮೂಪನಾರ್ ಅವರು ಇವರ ಭಾಷಣಗಳನ್ನು ಸಿಂಹದ ಘರ್ಜನೆಗೆ ಹೋಲಿಸುತ್ತಿದ್ದರು. ಶಂಕರಯ್ಯನವರು ರಾಜ್ಯ ಸಿಪಿಐನ (ಎಂ) ಅಧಿಕೃತ ಮುಖವಾಣಿಯಾದ ತೀಕಥಿರ್‌ನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಕಮ್ಯುನಿಸ್ಟ್ ಪಕ್ಷದ ಇತರ ನಾಯಕರಂತೆ, ಅವರು ಸಹ ತಮ್ಮ ಸಮುದಾಯದ ಹೊರಗೆ ವಿವಾಹವಾದರು. ಅವರ ಪತ್ನಿ ನವಮಣಿ ಕ್ರಿಶ್ಚಿಯನ್ ಆಗಿದ್ದರು.

ದಿವಂಗತ ನಾಯಕನ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಅವರ ಮನೆಗೆ ಕೊಂಡೊಯ್ಯಲಾಗುತ್ತಿದೆ. ಅವರ ಪಾರ್ಥಿವ ಶರೀರವನ್ನು ನವೆಂಬರ್ 15 ರಂದು ಮಧ್ಯಾಹ್ನ ಚೆನ್ನೈನ ಸಿಪಿಐ (ಎಂ) ರಾಜ್ಯ ಸಮಿತಿ ಕಚೇರಿಗೆ ತರಲಾಗುವುದು. ಮೃತರ ಅಂತ್ಯಕ್ರಿಯೆ ನವೆಂಬರ್ 16ರ ಗುರುವಾರದಂದು ನಡೆಯಲಿದೆ.

ಇದನ್ನೂ ಓದಿ: ಯಾರಿಗೆ ಸೇರಲಿದೆ ಸಹಾರಾದ ₹25 ಸಾವಿರ ಕೋಟಿ? ಹೂಡಿಕೆದಾರರ ಕತೆ ಏನು?

For All Latest Updates

ABOUT THE AUTHOR

...view details