ವಾರಣಾಸಿ (ಉತ್ತರಪ್ರದೇಶ): ಆಂಧ್ರಪ್ರದೇಶ ಮೂಲದ ಒಂದೇ ಕುಟುಂಬದ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿತ್ತು. ಇವರೆಲ್ಲರೂ ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆ ಶರಣಾಗಿರುವುದಾಗಿ ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್ನಿಂದ ತಿಳಿದುಬಂದಿದೆ. ಈ ಸಂಬಂಧ ವಾರಣಾಸಿ ಪೊಲೀಸರು ಆಂಧ್ರದ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರನ್ನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕೊಂಡಬಾಬು (50), ಪತ್ನಿ ಲಾವಣ್ಯ (45), ಮಕ್ಕಳಾದ ರಾಜೇಶ್(25), ಜಯರಾಜ್( 23) ಎಂದು ಗುರುತಿಸಲಾಗಿತ್ತು. ಮೃತರು ಡಿಸೆಂಬರ್ 3ರಂದು ಕಾಶಿಗೆ ಬಂದಿದ್ದು, ಇಲ್ಲಿನ ಧರ್ಮಶಾಲಾ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಬಳಿಕ ಮರುದಿನ 5 ಗಂಟೆಯಾದರೂ ಕೊಠಡಿಯಿಂದ ಯಾರೂ ಹೊರಗೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಬಾಗಿಲು ತಟ್ಟಿದ್ದಾರೆ. ಈ ವೇಳೆ ಕೊಠಡಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಕಿಟಕಿಯಿಂದ ಇಣುಕಿ ನೋಡಿದಾಗ ನಾಲ್ವರು ಶವವಾಗಿ ಪತ್ತೆಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಈ ಡೆತ್ ನೋಟ್ನಿಂದ ಸಾಲಗಾರರ ಕಿರುಕುಳದಿಂದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.