ಕರ್ನಾಟಕ

karnataka

ಸಾವು ಗೆದ್ದ 41 ಕಾರ್ಮಿಕರು, 17 ದಿನಗಳ ನಂತರ ಸಿಲ್ಕ್ಯಾರಾ ಸುರಂಗದಿಂದ ಎಲ್ಲರೂ ಪಾರು; ಸಂಭ್ರಮ!

By ETV Bharat Karnataka Team

Published : Nov 28, 2023, 8:08 PM IST

Updated : Nov 28, 2023, 10:09 PM IST

Uttarkashi Silkyara Tunnel: ಉತ್ತರಾಖಂಡದ ಉತ್ತರಕಾಶಿಯ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆಯಲ್ಲಿ ಅತಿದೊಡ್ಡ ಯಶಸ್ಸು ಸಾಧಿಸಲಾಗಿದೆ. ಸುರಂಗದಿಂದ ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ.

Silkyara tunnel rescue operation
ಉತ್ತರಕಾಶಿ: ಫಲಿಸಿದ ಪ್ರಾರ್ಥನೆಗಳು, 17 ದಿನಗಳ ನಂತರ ಸಿಲ್ಕ್ಯಾರಾ ಸುರಂಗದಿಂದ 41 ಕಾರ್ಮಿಕರು ಹೊರಕ್ಕೆ!

ಸಾವು ಗೆದ್ದ 41 ಕಾರ್ಮಿಕರು, 17 ದಿನಗಳ ನಂತರ ಸಿಲ್ಕ್ಯಾರಾ ಸುರಂಗದಿಂದ ಎಲ್ಲರೂ ಪಾರು; ಸಂಭ್ರಮ!

ಉತ್ತರಕಾಶಿ (ಉತ್ತರಾಖಂಡ):ಉತ್ತರಾಖಂಡದ ಉತ್ತರಕಾಶಿಯ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ ಕಾರ್ಯ ಪೂರ್ಣಗೊಂಡಿದೆ. ಸುರಂಗದ ಒಂದು ಭಾಗ ಕುಸಿದು ಒಳಗೆ ಸಿಲುಕಿದ್ದ 17 ದಿನಗಳ ನಂತರ ಮಂಗಳವಾರ ಎಲ್ಲ ಕಾರ್ಮಿಕರನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ಪವಾಡ ಸದೃಶ ರೀತಿಯಲ್ಲಿ ಕಾರ್ಮಿಕರು ಪಾರಾಗಿದ್ದು, ಸಿಎಂ ಪುಷ್ಕರ್ ಸಿಂಗ್ ಧಾಮಿ ಹಾಗೂ ಅಧಿಕಾರಿಗಳು ಕಾರ್ಮಿಕರನ್ನು ಬರಮಾಡಿಕೊಂಡರು. ಇಷ್ಟು ದಿನ ಆತಂಕ, ದುಗುಡದಿಂದ ಕೂಡಿದ್ದ ಘಟನಾ ಸ್ಥಳದಲ್ಲಿ ಸಂಭ್ರಮ ಮನೆ ಮಾಡಿದೆ.

ಚಾರ್​​ಧಾಮ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸಿಲ್ಕ್ಯಾರಾ ಸುರಂಗದಲ್ಲಿ ನವೆಂಬರ್ 12ರಂದು ಭೂಕುಸಿತ ಉಂಟಾಗಿತ್ತು. ಈ ಸಂದರ್ಭದಲ್ಲಿ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಅಂದಿನಿಂದ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿತ್ತು. ಭೂಮಿ ಕೊರೆಯುವ ಯಂತ್ರಗಳು ಹಲವು ಬಾರಿ ಕೆಟ್ಟು ನಿಂತಿತ್ತು. ಇದರಿಂದಾಗಿ ಮನುಷ್ಯ ಸಾಮರ್ಥ್ಯದಿಂದಲೇ ರ‍್ಯಾಟ್​ ರಂಧ್ರ ಕೊರೆಯುವ ಕಾರ್ಯ ನಡೆಸಲಾಗಿತ್ತು. ಸುಮಾರು 60 ಮೀಟರ್​​ ಕೊರೆಯಲಾಗಿದ್ದು, ಇಂದು ಅಂತಿಮವಾಗಿ ಸುರಂಗದೊಳಗೆ ಪೈಪ್ ಅಳವಡಿಸುವ ಕಾರ್ಯ ಪೂರ್ಣಗೊಂಡಿತ್ತು.

ಅವಶೇಷಗಳ ದಾಟಿ ಯಶಸ್ವಿಯಾಗಿ ಪೈಪ್ ಒಳಹೋಗಿತ್ತು. ಮನುಷ್ಯ ಸಾಮರ್ಥ್ಯದಿಂದಲೇ ಕೊರೆದಿರುವುದರಿಂದ ಪೈಪ್ ಸುರಂಗದ ಒಳಗೆ ಹೋಗಿದೆ. ರಾತ್ರಿ 8 ಗಂಟೆಗೆ ಕಾರ್ಮಿಕರನ್ನು ಹೊರ ಬರಲು ಅನುಮತಿಸುವ ಮೊದಲು ಪೈಪ್‌ಗಳನ್ನು ಪದೇ ಪದೇ ಪರಿಶೀಲಿಸಲಾಯಿತು. ನಂತರ ಎಲ್ಲ ಕಾರ್ಮಿಕರನ್ನು ಹೊರತೆಗೆಯುವ ಕಾರ್ಯ ಆರಂಭವಾಯಿತು. ಇದರಿಂದ ಕಾರ್ಮಿಕರ ಕುಟುಂಬಸ್ಥರ ಪ್ರಾರ್ಥನೆಗಳ ಫಲಿಸಿವೆ. ಜೊತೆಗೆ ಇಂದು ಬೆಳಗ್ಗೆ ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಕೂಡ ಕಾರ್ಮಿಕರ ಸುರಕ್ಷತೆಗಾಗಿ ಸಿಲ್ಕ್ಯಾರಾ ಸುರಂಗದ ಹೊರಗಿನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.

ಸನ್ನದ್ಧ ಸ್ಥಿತಿಯಲ್ಲಿ ಆ್ಯಂಬುಲೆನ್ಸ್​ಗಳು: ಕಾರ್ಮಿಕರ ರಕ್ಷಣೆಗೆ ಕ್ಷಣಗಣನೆ ಶುರುವಾದ ಕೂಡಲೇ ಸ್ಥಳದಲ್ಲಿ ಆ್ಯಂಬುಲೆನ್ಸ್​ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಸುರಂಗದೊಳಗೆ ಪ್ರಾಥಮಿಕ ಆರೈಕೆಗಾಗಿ ಹಾಸಿಗೆಗಳನ್ನೂ ಸಿದ್ಧಪಡಿಸಲಾಗಿತ್ತು. ಸುರಂಗದಿಂದ ಹೊರಬಂದ ಕೂಡಲೇ ಎಲ್ಲರನ್ನೂ ಆ್ಯಂಬುಲೆನ್ಸ್​ಗಳಿಗೆ ಸಾಗಿಸಲಾಗಿತು. ಕಾರ್ಮಿಕರನ್ನು ಈ ರಸ್ತೆಗಳ ಮೂಲಕ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲು ಮಾರ್ಗದ ರಸ್ತೆಗಳನ್ನು ದುರಸ್ತಿ ಮಾಡಿ ಸಿದ್ಥಪಡಿಸಲಾಗಿದೆ.

ಕಾರ್ಮಿಕರ ಕುಟುಂಬಸ್ಥರು, ಸಂಬಂಧಿಕರು ಸ್ಥಳದಲ್ಲೇ ದಿನಗಳನ್ನು ಕಳೆದು ತಮ್ಮವರು ಹೊರಬರುವುದನ್ನೇ ಎದುರು ನೋಡುತ್ತಿದ್ದರು. ಒಬ್ಬೊಬ್ಬರೆ ಕಾರ್ಮಿಕರು ಹೊರ ಬರುತ್ತಿದ್ದಂತೆ ಸಿಎಂ ಧಾಮಿ, ಕೇಂದ್ರ ಸಚಿವ, ನಿವೃತ್ತ ಜನರಲ್ ವಿ.ಕೆ.ಸಿಂಗ್ ಹಾಗೂ ಅಧಿಕಾರಿಗಳನ್ನು ಬರಮಾಡಿಕೊಂಡು ಆರೋಗ್ಯ ವಿಚಾರಿಸಿದರು. ಬಹುಪಾಲು ಕಾರ್ಮಿಕರು ಆರೋಗ್ಯಯುತವಾಗಿ ಇರುವಂತೆ ಕಂಡು ಬಂದರು.

ಕಾರ್ಮಿಕರು ಸಿಲುಕಿದ ದಿನದಿಂದ ಘಟನಾ ಸ್ಥಳದಲ್ಲಿ ಆತಂಕ, ದುಗುಡದಿಂದ ಕೂಡಿತ್ತು. ಆದರೆ, ಇಂದು ಒಬ್ಬೊಬ್ಬರು ಹೊರ ಬರುತ್ತಿದ್ದಂತೆ ಸಂತಸ ಹೆಚ್ಚಾಯಿತು. ಅಲ್ಲದೇ, ಸ್ಥಳೀಯರು ಸಿಹಿ ಹಂಚಿ ಖುಷಿ ಪಟ್ಟರು. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲೂ ಸಾರ್ಥಕತೆಯ ಭಾವ ಮನೆ ಮಾಡಿತು.

ಭೂಕುಸಿತದ ಹಿನ್ನೆಲೆ:12 ನವೆಂಬರ್​, ದೀಪಾವಳಿಯ ದಿನದಂದು ಬೆಳಗ್ಗೆ 5.30ರ ಸುಮಾರಿಗೆ ಭೂಕುಸಿತ ಸಂಭವಿಸಿತ್ತು. ಪರಿಣಾಮ ಸುರಂಗದ ಒಂದು ಭಾಗ ಕುಸಿದು ಕಾರ್ಮಿಕರು ಸಿಲುಕಿಕೊಂಡಿದ್ದರು. ಆಗ ತಕ್ಷಣವೇ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಸಿಕ್ಕಿಬಿದ್ದ ಕಾರ್ಮಿಕರಿಗೆ ಸಣ್ಣ ಪೈಪ್‌ಗಳ ಮೂಲಕ ಆಮ್ಲಜನಕ, ವಿದ್ಯುತ್​ ಮತ್ತು ಆಹಾರವನ್ನು ಪೂರೈಸಲು ವ್ಯವಸ್ಥೆ ಮಾಡಲಾಗಿತ್ತು.

ಜೊತೆಗೆ ರಕ್ಷಣಾ ಕಾರ್ಯದಲ್ಲಿ ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್, ಬಿಆರ್​ಒ, ಯೋಜನೆ ಸಂಬಂಧಿತ ಸಂಸ್ಥೆ ಎನ್​ಹೆಚ್​​ಐಡಿಸಿಎಲ್​ ಮತ್ತು ಐಟಿಬಿಪಿ ಸೇರಿದಂತೆ ಹಲವು ಏಜೆನ್ಸಿಗಳ ತಂಡಗಳು ತೊಡಗಿಸಿಕೊಂಡಿದ್ದವು. ಆದರೆ, ತುಂಬಾ ಕಷ್ಟಕರ ಹಾಗೂ ಕ್ಲಿಷ್ಟ ಕಾರ್ಯಾಚರಣೆವಾಗಿದ್ದರಿಂದ ಎನ್‌ಎಚ್‌ಐಡಿಸಿಎಲ್ ಅತ್ಯಾಧುನಿಕ ಆಗರ್ ಯಂತ್ರವನ್ನೂ (ಅಮೆರಿಕನ್ ನಿರ್ಮಿತ ಆಗರ್ ಡ್ರಿಲ್ಲಿಂಗ್ ಮೆಷಿನ್) ತರಿಸಲಾಗಿತ್ತು.

ಇದನ್ನೂ ಓದಿ:ಸುರಂಗದೊಳಗಿರುವ ಕಾರ್ಮಿಕರಿಗೆ ವಿಡಿಯೋ ಗೇಮ್‌ ಆಡಲು ಮೊಬೈಲ್ ಫೋನ್ ರವಾನೆ: ಬ್ಯಾಟ್‌, ಬಾಲ್‌ ಕಳುಹಿಸಲು ಚಿಂತನೆ

Last Updated : Nov 28, 2023, 10:09 PM IST

ABOUT THE AUTHOR

...view details